ಬಳ್ಳಾರಿ: ಮಹಾಮಾರಿ ಕೊರೋನಾ ವೈರಸ್ ರಾಜ್ಯದಲ್ಲಿ ಮತ್ತೆ ಮೂವರಲ್ಲಿ ಕಾಣಿಸಿಕೊಂಡಿದ್ದು, ಆ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾದಂತಾಗಿದೆ.
ಇತ್ತೀಚೆಗೆ ಬೆಂಗಳೂರಿನಿಂದ ಹೊಸಪೇಟೆಗೆ ತೆರಳಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಮೂವರನ್ನೂ ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಸೋಂಕಿತ ಟ್ರಾವೆಲ್ ಹಿಸ್ಟರಿ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು ಸೋಂಕಿತರ ಪತ್ತೆಯಾದ ಹೊಸಪೇಟೆಯಲ್ಲಿ ಬಫರ್ ಜೋನ್ ಘೋಷಣೆ ಮಾಡಲಾಗಿದ್ದು, ಹೊಸಪೇಟೆಯಲ್ಲಿ ಸಂಪೂರ್ಣ ದಿಗ್ಭಂಧನ ಹೇರಲಾಗಿದೆ. ಆ ಮೂಲಕ ಹೊಸಪೇಟೆಯಿಂದ ಹೊರಗೆ ಹೋಗುವ ಅಥವಾ ಒಳಗೆ ಬರುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗಿದೆ.
ಇನ್ನು ಬಳ್ಳಾರಿ ಸಂಪೂರ್ಣ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಜನರು ಹೊರಗೆ ಬಾರದಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ 9 ಗಂಟೆಯಿಂದ 10 ಗಂಟೆಯೊಳಗೆ ಜನರ ತಮ್ಮ ದಿನ ನಿತ್ಯದ ವಸ್ತುಗಳನ್ನು ಖರೀದಿ ಮಾಡಲು ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಇನ್ನು ಬಳ್ಳಾರಿಯ ಎಸ್ ಆರ್ ನಗರದಲ್ಲಿ ಸ್ಯಾನಿಟೈಜೇಷನ್ ಕೆಲಸವನ್ನು ಮಾಡಲಾಗುತ್ತಿದೆ.
Advertisement