ಬೆಂಗಳೂರು: ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್'ಡಿಪಿಎಸ್) ಅಡಿ ಕಳೆದ 10 ವರ್ಷಗಳಿಂದ ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ಕೂಡಲೇ ಮಾಹಿತಿ ಒದಗಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.
ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹಕಾರವಿಲ್ಲದೆ ಗಾಂಜಾ ದಂಧೆ ಇಷ್ಟು ನಿರಾತಂಕವಾಗಿ ನಡೆಯಲು ಸಾಧ್ಯವೇ? ಸಾಧ್ಯವಿಲ್ಲವಾದರೆ ದಂಧೆಗೆ ಬೆಂಬಲಿಸಿರುವ ಅಧಿಕಾರಿ, ಸಿಬ್ಬಂದಿ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಷ್ಟು ಜನರನ್ನು ಅಮಾನತು ಮಾಡಲಾಗಿದೆ? ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಜಿಲ್ಲಾವಾರು ಮಾಹಿತಿ ನೀಡಿ ಎಂದು ಒತ್ತಾಯಿಸಿದ್ದಾರೆ.
ಕಾಯ್ದೆಯಡಿ ಕಳೆದ 10 ವರ್ಷಗಳಿಂದ ಎಷ್ಟು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ? ದಾಖಲಿಸಿರುವ ಪ್ರಕರಣಗಳ ನ್ಯಾಯಾಲಯಗಳಲ್ಲಿ ಯಾವ ಸ್ಥಿತಿಯಲ್ಲಿವೆ? ನ್ಯಾಯಾಲಯಗಳಲ್ಲಿ ಖುಲಾಸೆಯಾದ ಪ್ರಕರಣಗಳೆಷ್ಟು? ಮಾಹಿತಿ ಒದಗಿಸಬೇಕು.
ಎನ್'ಡಿಪಿಎಸ್ ಕಾಯ್ದೆಯ ಪ್ರಕಾರ ವಿವಿಧ ಹಂತದ ಸಮಿತಿಗಳನ್ನು ರಚಿಸಬೇಕು. ಜಿಲ್ಲೆ, ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಎಷ್ಟು ಸಮಿತಿಗಳನ್ನು ರಚಿಸಲಾಗಿದೆ? ಎಷ್ಟು ಸಭೆಗಳನ್ನು ನಡೆಸಿವೆ ಎಂಬ ವಿವರ ನೀಡಬೇಕು. ಡ್ರಗ್ಸ್ ದುಶ್ಚಟಕ್ಕೆ ಸಿಲುಕಿದ ಮಕ್ಕಳ ತಂದೆ-ತಾಯಿಗಳಿಂದ ಗುಪ್ತವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ರಾಜ್ಯದಲ್ಲಿದೆಯೇ? ಈ ರೀತಿ ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ? ಎಂದು ಪ್ರಸ್ನಿಸಿದ್ದಾರೆ.
Advertisement