ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಬಳಿಕ ಪಾತಾಳಕ್ಕೆ ಕುಸಿದಿದ್ದ ಉತ್ಪಾದನಾ ವಲಯ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಕರ್ನಾಟಕದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 487 ಉತ್ಪಾದನಾ ಘಟಕಗಳು ತಲೆ ಎತ್ತಿವೆ.
ಮಾರ್ಚ್ 2020ರಿಂದ ಈ ವರೆಗೂ ಕರ್ನಾಟಕದಲ್ಲಿ 487 ಉತ್ಪಾದನಾ ಘಟಕಗಳ ನಿರ್ಮಾಣದ ಕುರಿತು ನೋಂದಣೆಯಾಗಿವೆ. ಆ ಮೂಲಕ ರಾಜ್ಯದಲ್ಲಿ ಸುಮಾರು 34 ಸಾವಿರ ಉಧ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಕರ್ನಾಟಕ ಕಾರ್ಖಾನೆ ಕಾಯ್ದೆಯಡಿ ಹಲವು ಕಾರ್ಖಾನೆಗಳ ನಿರ್ಮಾಣಕ್ಕೆ ನೋಂದಣಿಯಾಗಿದ್ದು, ಈಗಾಗಲೇ ಈ ಎಲ್ಲ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಪರವಾನಗಿ ನೀಡಿದೆ. ಈ ಎಲ್ಲ ಘಟಕಗಳಲ್ಲೂ ಕನಿಷ್ಠ 20ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಲಿದ್ದಾರೆ.
ಇನ್ನು ಕಳೆದ ವರ್ಷ ಅಂದರೆ 2019ರ ಜನವರಿಯಿಂದ ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ 875 ಕಾರ್ಖಾನೆಗಳ ನಿರ್ಮಾಣಕ್ಕಾಗಿ ನೋಂದಣಿಯಾಗಿದೆ. ಈ ಪೈಕಿ ಬಹುತೇಕ ಕಾರ್ಖಾನೆಗಳು ಪ್ರಸ್ತುತ ಕಾರ್ಯನಿರ್ವಹಣೆ ಮಾಡುತ್ತಿವೆ ಎಂದು ಕಾರ್ಖಾನೆಗಳು ಮತ್ತು ಬಾಯ್ಲರ್ಗಳ ಇಲಾಖೆ ಮಾಹಿತಿ ನೀಡಿದೆ. ಈ ವರ್ಷ ಮಾರ್ಚ್ 2020 ರಿಂದ ಆಗಸ್ಟ್ ಅಂತ್ಯದವರೆಗೆ 487 ಕಾರ್ಖಾನೆಗಳು ನೋಂದಣಿಯಾಗಿದ್ದು, 10,622 ಮಹಿಳೆಯರು ಸೇರಿದಂತೆ 33,625 ಜನರಿಗೆ ಉದ್ಯೋಗ ನೀಡಲಾಗಿದೆ.
ಬೆಂಗಳೂರಿನಲ್ಲಿ ತಲೆ ಎತ್ತಿರುವ 311 ಘಟಕಗಳಲ್ಲಿ 25 ಸಾವಿರ ಉದ್ಯೋಗ ಸೃಷ್ಟಿ
ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ನೀಡಿದ ಅಂಕಿಅಂಶಗಳ ಪ್ರಕಾರ, ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚಿನ ನೋಂದಣಿ ಕಂಡುಬಂದಿದೆ, 311 ಕಾರ್ಖಾನೆಗಳು ನಗರದಲ್ಲಿ ನೋಂದಣಿಯಾಗಿದ್ದು, ಸುಮಾರು 25 ಸಾವಿರ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಹೊಸ ಕಾರ್ಖಾನೆಗಳು ನೋಂದಣಿಯಾಗುತ್ತಿರುವ ಇತರ ಜಿಲ್ಲೆಗಳು ಎಂದರೆ ಮೈಸೂರು, ತುಮಕುರು, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ. ಈ ಹೆಚ್ಚಿನ ಕಾರ್ಖಾನೆಗಳು ಎಂಜಿನಿಯರಿಂಗ್ ಸಲಕರಣೆಗಳ ಸಂಸ್ಥೆಗಳಿಗೆ ಮತ್ತು ಬಿಡಿ ಭಾಗಗಳ ತಯಾರಿಕೆಗೆ ಸಂಬಂಧಿಸಿದ ಕಾರ್ಖಾನೆಗಳಾಗಿವೆ. ಅಂತೆಯೇ ನುರಿತ ಕಾರ್ಮಿಕರ ಲಭ್ಯತೆ ಮತ್ತು ಉತ್ತಮ ಲಾಜಿಸ್ಟಿಕ್ಸ್ನಿಂದಾಗಿ ಕರ್ನಾಟಕವು ತಯಾರಕರ ನೆಚ್ಚಿನ ಹೂಡಿಕೆ ತಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಾಲಿ ವರ್ಷದ ನೋಂದಣಿ ಪ್ರಮಾಣ ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಅನೇಕ ಯುವಕರು ಮತ್ತು ಕೆಲವು ಅನುಭವಿ ಕಾರ್ಮಿಕರು ತಮ್ಮ ಉದ್ಯೋಗವನ್ನು ತೊರೆದಿದ್ದು, ಅಥವಾ ತೆಗೆದುಹಾಕಲ್ಪಟ್ಟಿದ್ದಾರೆ. ಹೀಗೆ ಉದ್ಯೋಗದಿಂದ ದೂರಾದವರು ತಮ್ಮದೇ ಆದ ಕಂಪನಿಗಳನ್ನು ಪ್ರಾರಂಭಿಸಲು ಆರಂಭಿಸಿದ್ದಾರೆ. ಈ ವರ್ಷ ಹೆಚ್ಚಿನ ಜನರು ತಮ್ಮದೇ ಆದ ಸಂಸ್ಥೆಗಳನ್ನು ಪ್ರಾರಂಭಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (ಎಫ್ಕೆಸಿಸಿಐ) ಒಕ್ಕೂಟದ ಅಧ್ಯಕ್ಷ ಸಿ.ಆರ್. ಜನಾರ್ಧನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದು, ಲಾಕ್ಡೌನ್ ಮತ್ತು ಆರ್ಥಿಕ ಕುಸಿತದ ನಡುವೆಯೂ ಉತ್ಪಾದನಾ ಘಟಕಗಳ ಸಂಖ್ಯೆಗಳಲ್ಲಿನ ಹೆಚ್ಚಳ ಉತ್ತಮ ಸಂಕೇತವಾಗಿದೆ.
“ಕೇಂದ್ರ ಸರ್ಕಾರ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು ಈ ಯೋಜನೆ ಅನ್ವಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಕ್ಷೇತ್ರಕ್ಕೆ 3 ಲಕ್ಷ ರೂ. ಉತ್ತೇಜನ ನಿಧಿ ನೀಡುತ್ತಿದೆ. ಇದರ ಯುವ ಹೂಡಿಕೆದಾರರು ಇದರ ಸದ್ಭಳಕೆ ಮಾಡಿಕೊಳ್ಳುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ, ನಾವು ಹಿಂದಿನ ವರ್ಷದ ದಾಖಲೆಯನ್ನು ಹಿಂದಿಕ್ಕುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಜನಾರ್ಧನ್ ಹೇಳಿದರು. ಹೊಸ ಘಟಕಗಳನ್ನು ಪ್ರಾರಂಭಿಸುವುದರಿಂದ ಅನೇಕ ಲಾಜಿಸ್ಟಿಕ್ಸ್, ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಕ್ಷೇತ್ರಗಳು ಸಹ ಅಭಿವೃದ್ಧಿ ಹೊಂದುತ್ತವೆ. ಕಳೆದ ಐದರಿಂದ ಆರು ತಿಂಗಳಲ್ಲಿ ಹಲವಾರು ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಮೂಲಭೂತ ಸೌಕರ್ಯ ಒದಗಿಸುವಿಕೆ ಸೇರಿದಂತೆ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದ ನಂತರ ಹೆಚ್ಚಿನ ಹೂಡಿಕೆ ಮತ್ತು ಹೊಸ ಉದ್ಯಮಗಳನ್ನು ಆಕರ್ಷಿಸುವ ವಿಶ್ವಾಸ ಸರ್ಕಾರಕ್ಕಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈ ಹಿಂದೆ ಹೇಳಿದ್ದಾರೆ.
Advertisement