ಹಾಸನ: ಮದುವೆಗೆ ನಿರಾಕರಿಸಿದ್ದ ಸೋದರಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ವ್ಯಕ್ತಿಯೊಬ್ಬನನ್ನು ಹಾಸನ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನಾಗರಾಜ್ ಅಲಿಯಾಸ್ ನಾಗ ಎಂದು ಗುರುತಿಸಲಾಗಿದ್ದು ಇವನೊಂದಿಗೆ ಕೃತ್ಯಕ್ಕೆ ಸಹಕರಿಸಿದ್ದ ಅಜ್ಜಿ ಪುಟ್ಟಮ್ಮ ಹಾಗೂ ಅವನ ಸೋದರತ್ತೆ ಅಕ್ಕಮ್ಮನನ್ನ ಸಹ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ
ಏಪ್ರಿಲ್ 12 ರಂದು ಹಾಸನ ಜಿಲ್ಲೆ ಹೊಳೆನರಸೀಪುರದ ದೊಡ್ಡಕುಂಚಾವು ಗ್ರಾಮದಲ್ಲಿ ಯೋಗಿತಾ (22) ಹಾಗೂ ಆಕೆಯ ಸೋದರಿ ಪುಶ್ಪಿತಾ ಎಂಬುವವರ ಮೇಲೆ ನಾಗರಾಜ್ ಹಲ್ಲೆ ನಡೆಸಿದ್ದ. ಯೋಗಿತಾ ಹಾಗೂ ಪುಶ್ಪಿತಾ ಅವರ ತಂದೆ ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಸಾವಿನ ಮನೆಯಲ್ಲಿ ವರ್ಷದೊಳಗೆ ಶುಭಕಾರ್ಯ ನಡೆಯಬೇಕೆಂದು ನಂಬಿಕೆ ಇದ್ದು ಈ ಹಿನ್ನೆಲೆ ನಾಗರಾಜ್ ಯೋಗಿತಾಳನ್ನು ತನ್ನ ತಮ್ಮ ದಿನೇಶ್ ಗೆ ವಿವಾಹ ಮಾಡಿಕೊಡುವಂತೆ ಸೋದರಿಯರ ತಾಯಿಯ ಬಳಿ ಕೇಳಿದ್ದ.
ಆದರೆ ಹಿರಿಯಳಾಗಿದ್ದ ಯೋಗಿತಾ ತಂದೆ ಇಲ್ಲದ ಕಾರಣ ನನಗೆ ಸಂಸಾರದ ಜವಾಬ್ದಾರಿ ಇದೆ. ತಂಗಿಯನ್ನು ಓದಿಸಬೇಕು, ಮೇಲಾಗಿ ಪದವೀಧರೆಯಾಗಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗಲಾರೆ ಎಂದು ನಿರಾಕರಿಸಿದ್ದಾಳೆ. ಆಗ ನಾಗರಾಜ್ ನಿನ್ನ ತಂಗಿಯಾದರೂ ಸರಿ ನನ್ನ ತಮ್ಮ ಮದುವೆಯಾಗುತ್ತಾನೆ ಎಂದು ಹೇಳಿದ್ದಾನೆ. ಆದರೆ ಅದಕ್ಕೂ ಯೋಗಿತಾ ಒಪ್ಪದೆ ಹೋದಾಗ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಸೋದರಿಯರು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಹೊಳೆನರಸೀಪುರ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement