ರಾಜ್ಯದಲ್ಲಿ 14 ದಿನ ಕೊರೋನಾ ಕರ್ಫ್ಯೂ: ಇಂದು ರಾತ್ರಿ 9 ರಿಂದಲೇ ಜಾರಿ, ಬಸ್, ನಮ್ಮ ಮೆಟ್ರೋ, ಟ್ಯಾಕ್ಸಿ ಸೇವೆ ಸ್ಥಗಿತ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಎರಡು ವಾರಗಳ ಕಾಲ ಕೊರೋನಾ ಕರ್ಫ್ಯೂ ಜಾರಿಗೊಳಿಸಿ ತೀರ್ಮಾನ ಕೈಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಎರಡು ವಾರಗಳ ಕಾಲ ಕೊರೋನಾ ಕರ್ಫ್ಯೂ ಜಾರಿಗೊಳಿಸಿ ತೀರ್ಮಾನ ಕೈಗೊಂಡಿದೆ. 

ರಾಜ್ಯ ಸರ್ಕಾರದ ನಿರ್ಧಾರ ಹಿನ್ನಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಯ ಬಿಡುಗಡೆ ಮಾಡಿದ್ದಾರೆ. 

ಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಿರುವ ಈ ಮಾರ್ಗಸೂಚಿಯು ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ಹೊಸ ಮಾರ್ಗಸೂಚಿಯ ಅನ್ವಯ ರಾಜ್ಯದಲ್ಲಿ ಲಭ್ಯವಿರುವ ಸೇವೆಗಳು ಮತ್ತು ನಿಷೇಧಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಗತ್ಯ ವಸ್ತುಗಳ ಮಾರಾಟಕ್ಕೆ ಸೀಮಿತ ಅವಧಿ...
ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯಸೇವೆಯ ಅಂಗಡಿಗಳು ತೆರೆಯಬಹುದು.
ದಿನಸಿ, ಹಣ್ಣು ತರಕಾರಿ, ಮೀನು ಮಾಂಸ ಅಂಗಡಿ ತೆರೆಯಲು ಅವಕಾಶವಿದೆ.
ಮದ್ಯಂದಗಡಿಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ತೆರೆದಿರಲಿವೆ.
ಹೋಟೆಲ್ ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದು, ಕೃಷಿ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ.
ಬ್ಯಾಂಕ್, ಇ-ಕಾಮರ್ಸ್ ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.

ಸಂಚಾರ ವಿವರ...
ಏರ್‌ಪೋರ್ಟ್‌ ಬಸ್, ಟ್ಯಾಕ್ಸಿಗಳಿಗೆ ಷರತ್ತುಬದ್ಧ ಅವಕಾಶವಿದ್ದು, ಪ್ರಯಾಣಿಸುವವರು ಟ್ರಾವೆಲ್ ದಾಖಲಾತಿ, ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ.
ತುರ್ತು ಸೇವೆಗೆ ಮಾತ್ರ ಆಟೋ, ಟ್ಯಾಕ್ಸಿಗೆ ಅವಕಾಶ – ಮೇ 12ರವರೆಗೆ ಮೆಟ್ರೋ ಸಂಚಾರ ಸಂಪೂರ್ಣ ಬಂದ್ – ಅಂತಾರಾಜ್ಯವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ.
ಅಂತರ್ ಜಿಲ್ಲಾ ಅಂತರ್ ರಾಜ್ಯ ತುರ್ತು ಸೇವೆಗೆ ಮಾತ್ರ ಅವಕಾಶ.

ಮದುವೆಗೆ 50 ಮಂದಿ...
ಮದುವೆ ಕಾರ್ಯಕ್ರಮದಲ್ಲಿ 50 ಜನರು ಮಾತ್ರ ಪಾಲ್ಗೊಳ್ಳಬಹುದು.
ಅಂತ್ಯಕ್ರಿಯೆಯಲ್ಲಿ ಕೇವಲ ಐವರು ಮಾತ್ರ ಭಾಗಿ ಆಗಬೇಕು. ಈ ವಿಚಾರವನ್ನು ಕಟ್ಟುನಿಟ್ಟಾಗಿ ಗಮನಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇವೆಲ್ಲಾ ಬಂದ್...
ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಸಿನಿಮಾ ಹಾಲ್,ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಸಮುದಾಯ ಭವನಗಳನ್ನು ಬಂದ್ ಮಾಡಲು ಆದೇಶ ನೀಡಲಾಗಿದೆ.
ಸ್ಟೇಡಿಯಂ, ಆಟದ ಮೈದಾನ, ಕ್ರೀಡಾ ಸಂಕೀರ್ಣ, ಜಿಮ್‌ಗಳನ್ನು ತೆರೆಯುವಂತಿಲ್ಲ.

ಸಾಮಾಜಿಕ ಬದುಕಿಗೆ ಕಡಿವಾಣ...
ಸಾಮಾಜಿಕ, ಧಾರ್ಮಿಕ, ಕ್ರೀಡಾ ಮನರಂಜನಾ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗೆ ಸಂಪೂರ್ಣ ನಿರ್ಬಂಧ
ಮಂದಿರ, ಮಸೀದಿ, ಚರ್ಚ್‌ಗಳಿಗೆ ಜನರು ಪ್ರವೇಶಿಸುವಂತಿಲ್ಲ. ದೇವಾಲಯಗಳಲ್ಲಿ ಪೂಜಾರಿಗಳು ಮಾತ್ರ ಸಂಪ್ರದಾಯದಂತೆ ಸರಳ ಪೂಜೆ ಮಾಡಬಹುದು,
ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ದರ್ಶಿನಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ

ಯಾವುದಕ್ಕೆ ನಿರ್ಬಂಧವಿಲ್ಲ...?
ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ನಿರ್ಬಂಧವಿಲ್ಲ
ಕೈಗಾರಿಕೆಗಳಲ್ಲಿ ಕೆಲಸಕ್ಕೆ ತೆರಳುವವರು, ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು ಐಡಿ ತೋರಿಸಬೇಕು
ನ್ಯಾಯಬೆಲೆ ಅಂಗಡಿ, ಆಹಾರ, ದಿನಸಿ, ಹಣ್ಣು ತರಕಾರಿ, ಡೇರಿ, ಹಾಲಿನ ಬೂತ್, ಮೀನು, ಮಾಂಸ ಮಾರಾಟ ಇರುತ್ತೆ
ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ, ಅಗತ್ಯ ಪ್ರಮಾಣದ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕು. ಉಳಿದವರಿಗೆ ಮನೆಯಿಂದಲೇ ಕೆಲಸಕ್ಕೆ ವ್ಯವಸ್ಥೆ ಮಾಡಬೇಕು. 
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಸಾಮಾನ್ಯ ಕೆಲಸಕ್ಕೆ ಉಳಿದ 50ರಷ್ಟು ಸಿಬ್ಬಂದಿ ಕೋವಿಡ್ ಡ್ಯೂಟಿಗೆ ಹಾಜರಾಗಬೇಕು.
ಆರೋಗ್ಯ ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ, ಅಗ್ನಿಶಾಮಕ ದಳ, ಕಾರಾಗೃಹ, ವಿಪತ್ತು ನಿರ್ವಹಣಾ ಸಿಬ್ಬಂದಿ, ಎಲ್ಲಾ ಡಿಸಿಗಳ ಕಚೇರಿ, ಬಿಬಿಎಂಪಿ ಸಿಬ್ಬಂದಿ, ಇತರೆ ಇಲಾಖೆಗಳ ಕೋವಿಡ್ ಸೇವಾ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com