ಬೆಂಗಳೂರು: ನಗರದಲ್ಲಿ ಕೋವಿಡ್ ನಿಯಮವನ್ನು ನಾಗರಿಕರು ಸರಿಯಾಗಿ ಪಾಲಿಸಲು 54 ತಂಡಗಳನ್ನು ರಚಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರು ಹೇಳಿದ್ದರೆ ಇನ್ನೊಂದೆಡೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ನಿಯಮ ಪಾಲಿಸದಿದ್ದರೆ ಅಥವಾ ಮಾರ್ಷಲ್ ಗಳ ಜೊತೆ ಅಸಭ್ಯವಾಗಿ ವರ್ತಿಸುವುದು, ದರ್ಪ ತೋರಿಸುವುದು ಮಾಡಿದರೆ ಜಾಮೀನುರಹಿತ ಕೇಸನ್ನು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ನಿನ್ನೆ ನಗರದಲ್ಲಿ ಪೊಲೀಸ್ ಮತ್ತು ಬಿಬಿಎಂಪಿ ಇಲಾಖೆಯ ಅಧಿಕಾರಿಗಳ ಸಭೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಷಲ್ ಗಳು ಮತ್ತು ಕೋವಿಡ್ ವಾರಿಯರ್ಸ್ ಗಳ ಜೊತೆ ಅಸಭ್ಯವಾಗಿ, ಕಾನೂನು ಬಾಹಿರವಾಗಿ ನಾಗರಿಕರು ನಡೆದುಕೊಳ್ಳಬಾರದು. ಅವರ ಜೊತೆ ಯಾರಾದರೂ ಅಸಭ್ಯವಾಗಿ ನಡೆದುಕೊಳ್ಳುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಇನ್ನು ನಿಯಮ ಪಾಲಿಸದ ವಾಣಿಜ್ಯ ವಸಾಹತುಗಳು, ಹೊಟೇಲ್ ಗಳ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಕೊರೋನಾ ಸೋಂಕನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾರ್ಷಲ್ ಗಳ ಜೊತೆ ನಿರಂತರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ನಿಯಮ ಪಾಲನೆಗೆ ಸಮನ್ವಯ ಸಭೆ ನಡೆಸಲಾಗಿದೆ. ದಿನಂಪ್ರತಿ ನಗರದಲ್ಲಿ ಕೊರೋನಾ ಕೇಸುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು 20 ಸಾವಿರದಿಂದ ಈಗ ದಿನಕ್ಕೆ 600ರಿಂದ 700 ಕೇಸುಗಳು ಬರುತ್ತಿವೆ. ನಾಗರಿಕರು ಸರಿಯಾಗಿ ನಿಯಮ ಪಾಲಿಸಿದರೆ ಕೊರೋನಾ ಪ್ರಕರಣವನ್ನು ಮತ್ತಷ್ಟು ತಗ್ಗಿಸಬಹುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿ ರಚಿಸಲಾಗಿರುವ 54 ತಂಡದಲ್ಲಿ ತಲಾ ನಾಲ್ಕು ಮಾರ್ಷಲ್ ಗಳಿರುತ್ತಾರೆ, ಕೋವಿಡ್ ನಿಯಮ ಪಾಲಿಸದಿರುವ ಮಂದಿಗೆ ಈ ತಂಡಗಳು ದಂಡ ವಿಧಿಸುತ್ತವೆ. ಪ್ರತಿ ತಂಡ ನಗರದಲ್ಲಿ ಅತಿ ಜನನಿಬಿಡ ಪ್ರದೇಶಗಳಿಗೆ, ನಿಯಮವನ್ನು ಅತಿಯಾಗಿ ಉಲ್ಲಂಘಿಸುವ ಪ್ರದೇಶಗಳಿಗೆ ಭೇಟಿ ನೀಡುತ್ತದೆ. ಇಲ್ಲಿಗೆ ವಲಯ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನೊಟೀಸ್ ನೀಡಲಾಗುತ್ತದೆ. ಇಂತಹ ಪ್ರದೇಶಗಳನ್ನು ಅಗತ್ಯಬಿದ್ದರೆ ಲಾಕ್ ಡೌನ್ ಕೂಡ ಮಾಡಲಾಗುವುದು ಎಂದು ಹೇಳಿದ್ದಾರೆ.
Advertisement