
ಬೆಂಗಳೂರು: ರಾಜ್ಯದಲ್ಲಿ ಅನ್'ಲಾಕ್ 3.0 ಸೋಮವಾರದಿಂದ ಜಾರಿಯಾಗಿದ್ದು, ಲಾಕ್ಡೌನ್ ನಿಯಮಗಳು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಹಿಳೆಯರು ಗಾರ್ಮೆಂಟ್ಸ್ ಕೆಲಸಕ್ಕೆ ಮರಳುತ್ತಿದ್ದಾರೆ. ಈ ನಡುವೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸಹಜ ಸ್ಥಿತಿಗೆ ತರಲು ಲಸಿಕೆಯೊಂದೇ ನಮ್ಮ ಬಳಿಯಿರುವ ಸಾಧನ ಎಂದು ಗಾರ್ಮೆಂಟ್ಸ್ ಕಾರ್ಖಾನೆಗಳ ಮಾಲೀಕರು ಹೇಳಿದ್ದಾರೆ.
ಸರ್ಕಾರ ಹೇರಿರುವ ನಿಯಮಗಳನ್ನು ಅನುಸರಿಸಿ ರಾಜ್ಯದ ಉಡುಪು ಉತ್ಪಾದನಾ ಘಟಕಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳು ಕಾರ್ಖಾನೆಗಳನ್ನು ಪುನರಾರಂಭ ಮಾಡಿವೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗಳ ಮಾಲೀಕರು, ಕೊರೋನಾ ನಡುವಲ್ಲೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸಹಜ ಸ್ಥಿತಿಗೆ ತರಲು ಲಸಿಕೆಯೊಂದೇ ನಮ್ಮ ಬಳಿಯಿರುವ ಸಾಧನ ಎಂದು ಹೇಳಿದ್ದಾರೆ. ಇದಕ್ಕಾಗಿ ತಮ್ಮ ತಮ್ಮ ಕಾರ್ಖಾನೆಗಳ ಆವರಣದಲ್ಲಿಯೇ ಲಸಿಕಾ ಅಭಿಯಾನಗಳನ್ನು ಆರಂಭಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಕೋವಿಡ್-19 ಲಸಿಕಾ ವಿಶೇಷ ಅಭಿಯಾನ ನಡೆಸಿತ್ತು. ಈ ವೇಳೆ ತಮ್ಮ ಕಾರ್ಖಾನೆಗಳಲ್ಲಿರುವ ಶೇ.70-90ರಷ್ಟು ಸಿಬ್ಬಂದಿಗಳಿಕೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದವು.
ಇದೀಗ ಪೀಣ್ಯ, ಯಶವಂತಪುರ, ಕನಕಪುರ ರಸ್ತೆ, ಕೋಡಿಹಳ್ಳಿ-ಕೆಆರ್.ಪುರಂ, ಆರ್'ಟಿ ನಗರ, ಬೊಮ್ಮನಹಳ್ಳಿ ಹಾಗೂ ಮಾರತಹಳ್ಳಿಯಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗಳ ಆವರಣದಲ್ಲಿಯೂ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.
ಗಾರ್ಮೆಂಟ್ಸ್ ಗಳಲ್ಲಿ ಈಗಾಗಲೇ ನಡೆಸಲಾಗಿರುವ ಲಸಿಕಾ ಅಭಿಯಾನದಲ್ಲಿ ಶೇ.10ರಷ್ಟು ನೌಕರರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕಿದ್ದು, ಉಳಿದವರು ಉದ್ಯೋಗ ಕಳೆದುಕೊಳ್ಳುವ ಭಯದಿಂದ ಲಸಿಕೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಭಾರತಿ ಉದ್ಯೋಗ್ ವ್ಯಾಪರ್ ಮಂಡಲದ ಕರ್ನಾಟಕ ಘಟಕದ ಅಧ್ಯಕ್ಷ ರಾಜ್ ಪುರೋಹಿತ್ ಅವರು ಮಾತನಾಡಿ, ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಸಾಮಾನ್ಯವಾಗಿ ಹೆಚ್ಚೆಚ್ಚು ಜನರು ಕೆಲಸ ಮಾಡುತ್ತಾರೆ. ಜು.5ರವರೆಗೆ ಶೇ.30ರಷ್ಟು ಕೆಲಸಗಾರರೊಂದಿಗೆ ಕಾರ್ಖಾನೆಗಳನ್ನು ಮುನ್ನಡೆಸಲಾಗಿತ್ತು. ಕೆಲಸಗಾರರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆಯಿಂದ ಬಹಳಷ್ಟು ಸಹಾಯವಾಗಿದೆ. ಲಸಿಕೆ ಶಿಬಿರಗಳನ್ನು ಆಯೋಜಿಸಲು ಪೀಣ್ಯಾ ಇಂಡಸ್ಟ್ರೀಸ್ ಅಸೋಸಿಯೇಷನ್, ಎಸ್ಎಂಇಗಳು ಮತ್ತು ಎಫ್ಕೆಸಿಸಿಐ ನೆರವು ನೀಡುತ್ತಿವೆ ಎಂದು ಹೇಳಿದ್ದಾರೆ.
ನಗರದ ಪ್ರತಿಯೊಂದು ವಲಯಗಳಲ್ಲೂ ಗಾರ್ಮೆಂಟ್ಸ್ ಕೆಲಸಗಾರರು, ಕ್ಯಾಬ್ ಚಾಲಕರು, ಕೃಷಿ ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಅನ್'ಲಾಕ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್ ಗಳು ಸಂಪೂರ್ಣವಾಗಿ ಆರಂಭಗೊಂಡಿದ್ದು, ಕೊರೋನಾ ಸೋಂಕು ತಗುಲುವ ಆತಂಕಕ್ಕೊಳಗಾಗಿರುವ ನೌಕರರು ಲಸಿಕೆ ಪಡೆದುಕೊಳ್ಳಲು ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಲುತ್ತಿದ್ದಾರೆ. ಆದರೆ, ಬಹುತೇಕ ಜನರು ಲಸಿಕೆ ಪಡೆಯಲು ಸಾಧ್ಯವಾಗದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
Advertisement