ಬೆಂಗಳೂರು; ಮಾದಕವಸ್ತು ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಗುರುವಾರ ಬೆಳಿಗ್ಗೆ ನಗರದಲ್ಲಿ ನೆಲೆಸಿರುವ 60 ವಿದೇಶಿ ಪ್ರಜೆಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮಾದಕವಸ್ತು ಹೊಂದಿದ್ದ ಇಬ್ಬರನ್ನು ಬಂಧಿಸಿ ಅಕ್ರಮವಾಗಿ ನೆಲೆಸಿದ್ದ 38 ಮಂದಿ ವಿದೇಶಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ಇಬ್ಬರು ವಿದೇಶಿ ಪ್ರಜೆಗಳ ಮನೆಯಲ್ಲಿದ್ದ 90 ಎಕ್ಸ್'ಟಿಸಿ ಮಾತ್ರಗೆಳು ಹಾಗೂ 25 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೈಜೀರಿಯಾ ಪ್ರಜೆಗಳು ವಿದ್ಯಾರ್ಥಿ ವೀಸಾ, ವಾಣಿಜ್ಯ ವೀಸಾ, ಪ್ರವಾಸಿ ವೀಸಾ ಸೇರಿದಂತೆ ಇನ್ನಿತರೆ ವೀಸಾಗಳಡಿ ಭಾರತಕ್ಕೆ ಬಂದು ನಗರದ ಹಲವು ಪ್ರದೇಶಗಳಲ್ಲಿ ನಲೆಸಿದ್ದಾರೆ.
ಈ ಪೈಕಿ ಕೆಲವರು ಅಕ್ರಮವಾಗಿ ನೆಲೆಸಿದ್ದರೆ, ಇನ್ನುಳಿದವರು ಮಾದಕ ವಸ್ತು ಜಾಲ ದಂಧೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದೆ. ಇತ್ತೀಚೆಗೆ ನೈಜೀರಿಯಾ ಪ್ರಜೆಗಳು ಮಾದಕ ವಸ್ತು ಮಾರಾಟ ದಂಧೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆನ್ ಲೈನ್ ವಂಚನೆಯಲ್ಲೂ ಪ್ರಮುಖವಾಗಿ ಪಾಲ್ಗೊಂಡಿರುವುದು ಕಂಡ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶ ಪ್ರಜೆಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಣಸವಾಡಿ, ಕೆಆರ್.ಪುರಂ, ಹೆಣ್ಣೂರು, ರಾಮಮೂರ್ತಿ ನಗರ, ಸಂಪಿಗೆಹಳ್ಳಿ ಮತ್ತು ಯಲಹಂಕ ಸೇರಿದಂತೆ ಹಲವು ಕಡೆ ದಾಳಿ ನಡೆಸಿದೆ.
ವಶಕ್ಕೆ ಪಡೆದಿರುವ 38 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಕೆಲವರು ಉದ್ದೇಶಪೂರ್ವಕವಾಗಿ ಯಾವುದನ್ನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಸಾಂಕ್ರಾಮಿಕ ರೋಗ ಪರಿಸ್ಥಿತಿಯಿಂದಾಗಿ ನಗರದಲ್ಲಿ ಉಳಿದುಕೊಂಡಿರುವುದಾಗಿ ಹೇಳುತ್ತಿದ್ದಾರೆ. ಇನ್ನೂ ಕೆಲವರು ವಿಮಾನ ಹಾರಾಟ ರದ್ದಾಗಿದ್ದರಿಂದಾಗಿ ಹಿಂತಿರುಗಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
Advertisement