ಪ್ರವಾಹ ಪೀಡಿತರಿಗೆ ಸಿಎಂ ಬೊಮ್ಮಾಯಿ ನೆರವು: ಹೆದ್ದಾರಿ ದುರಸ್ತಿಗೆ ರೂ.200 ಕೋಟಿ ಘೋಷಣೆ

ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಗುರುವಾರ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಭೇಟಿ ನೀಡಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಅತಿವೃಷ್ಟಿಯಿಂದಾದ ಹಾನಿಯನ್ನು ಕಣ್ಣಾರೆ ಕಂಡ ಮುಖ್ಯಮಂತ್ರಿಗಳು ರೂ.200 ಕೋಟಿ ನೆರವು ಘೋಷಿಸಿದರು.
ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿರುವ ಸಿಎಂ ಬೊಮ್ಮಾಯಿ
ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿರುವ ಸಿಎಂ ಬೊಮ್ಮಾಯಿ
Updated on

ಕಾರವಾರ: ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಗುರುವಾರ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಭೇಟಿ ನೀಡಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಅತಿವೃಷ್ಟಿಯಿಂದಾದ ಹಾನಿಯನ್ನು ಕಣ್ಣಾರೆ ಕಂಡ ಮುಖ್ಯಮಂತ್ರಿಗಳು ರೂ.200 ಕೋಟಿ ನೆರವು ಘೋಷಿಸಿದರು. ಜತೆಗೆ ನೆರೆಯಿಂದ ಹಾನಿಗೀಡಾಗಿರುವ ರಸ್ತೆ, ಸೇತುವೆ, ಕಟ್ಟಡಗಳನ್ನು ಶೀಘ್ರ ಮರುನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ ವಾರ ಬೆಳಗಾವಿಯಲ್ಲಿ ನೆರೆ ಸಮೀಕ್ಷೆ ನಡೆಸಿದ್ದ ನಿಕಟಪೂರ್ವ ಸಿಎಂ ಯಡಿಯೂರಪ್ಪ ಅವರು ಸಮಯದ ಅಭಾವದಿಂದಾಗಿ ಉತ್ತರ ಕನ್ನಡದ ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಬಸವರಾಜ ಬೊಮ್ಮಾಯಿಯವರು ಹಿಂದಿನ ಮುಖ್ಯಮಂತ್ರಿಗಳ ಪ್ರವಾಹ ಪರಿಶೀಲನಾ ಕಾರ್ಯವನ್ನು ಮುಂದುವರೆಸಿದರು.

ಅದರಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ, ಗುಳ್ಳಾಪುರ ಸೇತುವೆ, ಅರೆಬೈಲ್ ಘಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಲೋಕೋಪಯೋಗಿ ರಸ್ತೆ ನಿರ್ಮಾಣಕ್ಕೆ ರೂ.100 ಕೋಟಿ, ಆರ್ಡಿಪಿಆರ್ ರಸ್ತೆ ನಿರ್ಮಾಣಕ್ಕೆ ರೂ.100 ಕೋಟಿ ರೂ.10 ಕೋಟಿ ನೀಡುವುದಾಗಿ ಭರವಸೆ ನೀಡಿದರು. 

ನೆರೆಯಿಂದ ತೀವ್ರ ಹಾನಿಗೊಳಗಾಗಿರುವ ಕಳಚೆ ಗ್ರಾಮ ಪೂರ್ಣ ಸ್ಥಳಾಂತರ ಮಾಡುವಂತೆ ಇದೇ ವೇಳೆ ಮುಖ್ಯಮಂತ್ರಿಗಳು  ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

ತೀವ್ರ ಭೂಕುಸಿತವಾಗಿರುವ ಗ್ರಾಮ ವೀಕ್ಷಿಸಿದ ಅವರು, ಭೂಕುಸಿತದಿಂದ ಮನೆ ನಿರ್ಮಾಣ ಸಾಧ್ಯವಿಲ್ಲದ ಹಿನ್ನಲೆ ಸ್ಥಳಾಂತರ ಮಾಡಿ, ಗ್ರಾಮಕ್ಕೆ ಅಗತ್ಯವಿರುವ ಸುಮಾರು 15 ಎಕರೆ ಪ್ರದೇಶವನ್ನ ಗುರುತಿಸಲು ಹೇಳಿದರು. ಇದೇ ವೇಳೆ ಹತ್ತಾರು ಕಡೆ ಭೂಕುಸಿತವಾಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟಕ್ಕೆ 10 ಕೋಟಿ ಬಿಡುಗಡೆಯ ಭರವಸೆ ನೀಡಿದರು.

ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಅವರು, ರಾಯಾಪೂರದಲ್ಲಿರುವ ತಂದೆ ಎಸ್. ಆರ್. ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮ ಅವರ ಸಮಾಧಿ ಸ್ಥಳಕ್ಕೆ ಆಗಮಿಸಿ ತಂದೆ ತಾಯಿ ಆಶೀರ್ವಾದ ಪಡೆದುಕೊಂಡರು.

ತಾಲೂಕಿನನ ಬಾರೇಕಳಚೆ - ಕೈಗಾ ರಸ್ತೆ, ಕುಸಿದ ಸೇತುವೆ ಮೊದಲಾದ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿ, ಅತಿವೃಷ್ಟಿಯಿಂದ ಬಾಧಿತರಿಗಾಗಿ ಇರುವ ಶಿರೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಜೊತೆ ಮಾತನಾಡಿದರು. 

ಅತಿವೃಷ್ಟಿಯಿಂದ ಬಾಧಿತಗೊಳಗಾದ ಯಲ್ಲಾಪುರ ತಾಲೂಕಿನ ವಿವಿಧ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಹಾಗೂ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಆಸ್ಪತ್ರೆಯ ವಿವಿಧ ವಿಭಾಗಗಳ ಜೊತೆಗೆ ಕೋವಿಡ್ -19 ಲಸಿಕೆ ನೀಡುವ ಕೇಂದ್ರನ್ನೂ ಪರಿಶೀಲನೆ ಮಾಡಲಾಯಿತು.

ನೆರೆಯಿಂದ ಗ್ರಾಮ, ಸೇತುವೆ ಸಂಪರ್ಕ ಕಡಿತಗೊಂಡಿವೆ. ನೆರೆಯಿಂದ ಸಾವನ್ನಪ್ಪಿದವರ  ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಕಾರವಾರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮೀನುಗಾರರಿಗೆ ಲಸಿಕೆ ನೀಡುವ ವಿಚಾರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಗೋವಾಗೆ ಭೇಟಿ ನೀಡುವವರಿಗೆ ಲಸಿಕೆ ಪಡೆದುಕೊಂಡಿರುವುದನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಕಾರವಾರ, ಕುಮ್ಟಾ ಹಾಗೂ ಭಟ್ಕಳದ ಮೀನುಗಾರರಿಗೆ ಲಸಿಕೆ ನೀಡುವ ಸಲುವಾಗಿ 3000 ಡೋಸ್ ಲಸಿಕೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಮುಹಿಳನ್ ಅವರು ಶೀಘ್ರದಲ್ಲೇ ಲಸಿಕೆ ಅಭಿಯಾನ ಆರಂಭಿಸುವ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com