ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಪರೀಕ್ಷೆಗಳ ಸಂಖ್ಯೆಯಲ್ಲಿನ ಇಳಿಮುಖ ಕಾರಣವೇ?

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ನಡುವಲ್ಲೇ ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರೂ ರಾಜ್ಯ ಸರ್ಕಾರ ಅವುಗಳನ್ನು ಗಾಳಿಗೆ ತೂರುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ನಡುವಲ್ಲೇ ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರೂ ರಾಜ್ಯ ಸರ್ಕಾರ ಅವುಗಳನ್ನು ಗಾಳಿಗೆ ತೂರುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ರಾಜ್ಯದಲ್ಲಿ ಪರೀಕ್ಷೆಯ ಸಂಖ್ಯೆಯನ್ನೇ ಕಡಿಮೆಯಾಗಿರುವುದು ಕಂಡು ಬಂದಿದೆ. 

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಳೆದ ಮೂರು ವಾರಗಳಿಂದ ಪರೀಕ್ಷೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಮೇ 8 ರಂದು 1.46 ಲಕ್ಷ ಇದ್ದ ಪರೀಕ್ಷೆಯ ಸಂಖ್ಯೆ ಮಂಗಳವಾರ ವೇಳೆಗೆ 1.04 ಲಕ್ಷಕ್ಕೆ ಇಳಿಕೆಯಾಗಿದೆ. 

ಇದು ಉತ್ತಮ ಬೆಳವಣಿಗೆಯಲ್ಲ. ಕಳೆದ ಎರಡು ದಿನಗಳಿಂದ ಪರೀಕ್ಷೆಗಳ ಸಂಖ್ಯೆಯನ್ನು ಇಳಿಸಲಾಗಿದೆ. ಆದರೆ, ಸಕ್ರಿಯ ಪ್ರಕರಣಗಳ ಪ್ರಮಾಣ ಹೆಚ್ಚಳಗೊಂಡಿದೆ. ಈ ಬೆಳವಣಿಗೆಯೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಕೋವಿಡ್ ಪರೀಕ್ಷೆಯ ನೋಡಲ್ ಅಧಿಕಾರಿ ಮತ್ತು ಕೋವಿಡ್ ತಾಂತ್ರಿಕ ಸಮಿತಿಯ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ್ ಅವರು ಹೇಳಿದ್ದಾರೆ. 

ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಆರ್ ಬಾಬು ಅವರು ಮಾತನಾಡಿ, ಬೆಂಗಳೂರು ನಗರ ಒಂದರಲ್ಲಿಯೇ ಪರೀಕ್ಷೆಗಳ ಸಂಖ್ಯೆ 1 ಲಕ್ಷದಿಂದ 40,000ಕ್ಕೆ ಇಳಿಕೆಯಾಗಿದೆ. ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗುವುದರಿಂದ ಲಕ್ಷಣ ರಹಿತ ಹಾಗೂ ಲಕ್ಷಣ ಇರುವವರನ್ನು ಪತ್ತೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ನಡುವೆ ಆರೋಗ್ಯ ಇಲಾಖೆ ಮೂಲಗಳು ನೀಡಿರುವ ಪ್ರಕಾರ, ಆರ್'ಎಟಿ ಪರೀಕ್ಷಾ ಕಿಡ್ ಗಳು, ಪರೀಕ್ಷೆಗೆ ಬಳಸುವ ಸ್ವ್ಯಾಬ್'ಗಳು, ವಿಟಿಎಂಗಳು ಪರೀಕ್ಷೆ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ತಿಳಿಸಿವೆ. 

ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿಯೂ ಪರೀಕ್ಷಾ ಕಿಟ್ ಗಳ ಸಮಸ್ಯೆ ಎದುರಾಗಿದೆ. ಆದರೆ, ರಾಜ್ಯದಲ್ಲಿ 8 ಲಕ್ಷ ವಿಟಿಎಂಗಳು ಸ್ಟಾಕ್ ಇದೆ. ಇನ್ನೂ 50 ಲಕ್ಷ ಕಿಟ್ ಗಳಿಗೆ ಆರ್ಡರ್ ಮಾಡಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಹೊರಗೆ ಬರುತ್ತಿಲ್ಲ. ಇದೂ ಕೂಡ ಪರೀಕ್ಷೆ ಸಂಖ್ಯೆ ಕಡಿಮೆಯಾಗಲು ಕಾರಣವಿರಬಹುದು. ಪ್ರಸ್ತುತ ದ್ವಿತೀಯ ಸಂಪರ್ಕದಲ್ಲಿರುವವರನ್ನು ನಾವು ಪರೀಕ್ಷೆಗೊಳಪಡಿಸುತ್ತಿಲ್ಲ ಇದೂ ಕೂಡ ಕಾರಣವಾಗಿರಬಹುದು ಎಂದು ಮಂಜುನಾಥ್ ಅವರು ತಿಳಿಸಿದ್ದಾರೆ. 

ಥೈರೋಕೇರ್ ಟೆಕ್ನಾಲಜೀಸ್ ಎಂಡಿ ಅರೋಕಿಯಸ್ವಾಮಿ ವೇಲುಮಣಿಯವರು ಮಾತನಾಡಿ, ಅಂತರ್ ರಾಜ್ಯ ಪ್ರಯಾಣಿಕರ ಪರೀಕ್ಷೆಗಳನ್ನು ಐಸಿಎಂಆರ್ ಏಕೆ ರದ್ದುಪಡಿಸಿತು? ಲಕ್ಷಣ ರಹಿತ ಸೋಂಕಿತರೊಂದಿಗೆ ಪ್ರಯಾಣಿಕರು ಗಂಟೆಗಟ್ಟಲೆ ಕುಳಿತು ಪ್ರಯಾಣಿಸಿರುತ್ತಾರೆ. ಇಂತಹವರನ್ನು ಪರೀಕ್ಷೆಗೊಳಪಡಿಸುವುದು ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ರಾಜ್ಯ ಸರ್ಕಾರ ಕೂಡ ಅಂತರ್ ರಾಜ್ಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸುವುದನ್ನು ರದ್ದುಪಡಿಸಿರುವುದಕ್ಕೆ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಲ್ಲೇ ಬಿ.1.617 ರೂಪಾಂತರಿ ಕೊರೋನಾ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಿಂದ ಕರ್ನಾಟಕ ಪ್ರವೇಶಿಸುತ್ತಿದೆ ಎಂದು ಎಚ್ಚರಿಸಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರೋಗ್ಯ ವ್ಯವಸ್ಥೆಯನ್ನು ಹದಗೆಡಿಸಿದೆ. ಪರೀಕ್ಷೆಗಳ ಸಂಖ್ಯೆಯನ್ನು ನಾವೀಗ ಹೆಚ್ಚಳ ಮಾಡದೇ ಹೋದರಲ್ಲಿ ಮತ್ತೆ ಸಂಕಷ್ಟ ಎದುರಾಗಲಿದೆ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com