ದಕ್ಷಿಣ ಕನ್ನಡ: ಚಪ್ಪಲಿ ಹಾಕಿಕೊಂಡು ಕಾರಿಂಜ ದೇವಸ್ಥಾನದ ಒಳಗೆ ಬಂದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಇದರಿಂದ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಭಕ್ತರು ಹೇಳಿದ್ದಾರೆ.
ಮಾಸ್ತಿಕಟ್ಟೆ ಉಳ್ಳಾಲದ ಬುಷರ್ ರೆಹಮಾನ್ (20), ಉಳ್ಳಾಲದ ಮುಕ್ಕಚ್ಚೇರಿಯ ಇಸ್ಮಾಯಿಲ್ ಅರ್ಹಮಾಜ್ (22), ಹಳೇಕೋಟೆಯ ಮುಹಮ್ಮದ್ ತನಿಷ್ (19) ಮತ್ತು ಬಬ್ಬುಕಟ್ಟೆ ಪೆರ್ಮನ್ನೂರಿನ ಮೊಹಮ್ಮದ್ ರಶಾದ್ (19) ಆರೋಪಿಗಳೆಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295 ರ ಅಡಿಯಲ್ಲಿ ಕಾರಿಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಪರವಾಗಿ ವಿನಯ್ ಕುಮಾರ್ ಅವರು ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪಿಗಳು ಪಾದರಕ್ಷೆಗಳನ್ನು ತೆಗೆಯದೆ ದೇವಾಲಯದ ಆವರಣಕ್ಕೆ ಪ್ರವೇಶಿಸಿದ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ನವೆಂಬರ್ 2 ರಂದು ವಿಡಿಯೋವನ್ನು ನೋಡಿದ್ದಾರೆ. ಆದ್ರೆ ಅಕ್ಟೋಬರ್ 7 ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
ಬಂಧಿತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಯನ್ನು ಖಂಡಿಸಿ ಪುತ್ತೂರು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕವು ಅಪರಾಧಿಗಳ ಬಂಧನಕ್ಕೆ ಮೂರು ದಿನಗಳ ಗಡುವು ನೀಡಿತ್ತು.
Advertisement