ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಕೋಮಾವಸ್ಥೆಯಲ್ಲಿದ್ದ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಕ್ರೀಡಾ ಸಚಿವ ಡಾ. ನಾರಾಯಣಗೌಡರ ಸತತ ಪರಿಶ್ರಮದ ನಂತರ ಪುನರ್ ಆರಂಭಕ್ಕೆ ಸಜ್ಜುಗೊಂಡಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ರನ್ ವೇ ಕಾಮಗಾರಿ ನಡೆದಿದ್ದು ಡಿಜಿಸಿಎ ಪರೀಕ್ಷೆ ನಡೆಸಿದ್ದು ಅನುಮತಿ ನೀಡುವುದೊಂದೇ ಬಾಕಿಯಿದೆ ಡಿಸೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಯವರಿಂದ ಉದ್ಘಾಟಿಸಲು ಯೋಜಿಸಲಾಗಿದೆ.
ವೈಮಾನಿಕ ತರಬೇತಿ ಕೇಂದ್ರ ಪುನರ್ ಆರಂಭಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಡಿಜಿಸಿಎ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ಡಿಜಿಸಿಎಯಿಂದ ಹಸಿರು ನಿಶಾನೆ ದೊರೆಯಲಿದೆ. ಡಿಜಿಸಿಎ ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ಉದ್ಘಾಟನಾ ದಿನಾಂಕ ನಿಗದಿಯಾಗಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಉದ್ಘಾಟಿಸಲಿದ್ದಾರೆ.
ಹೊಸ ರನ್ ವೇ 974 ಮೀಟರ್ ಉದ್ದವಿದ್ದು, ಎಲಿವೇಟೆಡ್ ಕಾರಿಡಾರ್ ಯೋಜನೆಯಾಗಿ ರನ್ ವೇಗೆ ಮೀಸಲಾಗಿದ್ದ ಜಾಗವನ್ನು ಬಿಟ್ಟುಕೊಡಲಾಗಿತ್ತು. ಆದರೆ, ನಂತರ ಹೆಚ್ಚುವರಿ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಮೂಲ ಪ್ರಸ್ತಾವಿತ ಯೋಜನೆಯಂತೆ ರನ್ ವೇ ನಿರ್ಮಿಸಲಾಗಿದೆ.
ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಕೆಲವರ ನಿರ್ಲಕ್ಷ್ಯದಿಂದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿತ್ತು. ಆದರೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಆಸಕ್ತಿ ವಹಿಸಿ ಮತ್ತೆ ಕಾರ್ಯಾರಂಭಗೊಳ್ಳುವಂತೆ ಕ್ರಮ ತೆಗೆದುಕೊಂಡಿದ್ದರು. ಪೈಲಟ್ ಆಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕೆಂಬ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಈಗಾಗಲೇ 40 ವಿದ್ಯಾರ್ಥಿಗಳಿದ್ದಾರೆ. ಶೀಘ್ರದಲ್ಲೇ ಹೊಸ ಬ್ಯಾಚ್ ದಾಖಲಾತಿಗೆ ಅಧಿಸೂಚನೆ ಹೊರಡಿಸಲಿದ್ದು, ಡಿಸೆಂಬರ್ನಲ್ಲಿ ತರಗತಿಗಳು ಆರಂಭವಾಗಲಿವೆ.
Advertisement