ಬೆಂಗಳೂರು: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವನ್ನು ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರ (ಐಐಸಿಎಚ್) ವರ್ಗಾಯಿಸಲು ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ.
ಒಂದೂವರೆ ವರ್ಷದ ಈ ಮಗು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್ಎಂಎ) ಟೈಪ್ -1 ಕಾಯಿಲೆಯಿಂದ ಬಳಲುತ್ತಿದೆ.
ಈ ಮಗು ತಮ್ಮ ತಂದೆ ತಂದೆ ಎನ್ ನವೀನ್ ಕುಮಾರ್ ಮೂಲಕ ಅರ್ಜಿ ಸಲ್ಲಿಸಿದ್ದು, ತಮಗಿರುವ ಅಪರೂಪದ ಕಾಯಿಲೆಯ 16 ಕೋಟಿ ರೂ. ವೆಚ್ಚವಾಗುತ್ತದೆ ಮತ್ತು ಪೋಷಕರು ಸುಮಾರು 8.24 ಕೋಟಿ ಹಣವನ್ನು ಕ್ರೌಡ್ ಫಂಡಿಂಗ್ ಮೂಲಕ ಮತ್ತು ಕೆಲವು ದಾನಿಗಳಿಂದ ಸಂಗ್ರಹಿಸಿದ್ದಾರೆ. ಆದರೆ, ಅದು ಸಾಲುತ್ತಿಲ್ಲ. ಉಳಿದ 7.8 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೀಡಲು ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಮಗುವನ್ನು ಡಾಕ್ಟರ್ ಜಿ ಎನ್ ಸಂಜೀವ್ ಅವರಿಂದ ಪರೀಕ್ಷಿಸಬೇಕೆಂದು ಸೂಚಿಸಿದರು ಮತ್ತು ನಂತರ ವಿಷಯವನ್ನು ತಜ್ಞರ ಸಮಿತಿಗೆ ತಿಳಿಸುವಂತೆ ಸೂಚನೆ ನೀಡಿದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರಾದ ಎಂ ಎನ್ ಕುಮಾರ್, ಅಪರೂಪದ ರೋಗಗಳ ರಾಷ್ಟ್ರೀಯ ನೀತಿಯೊಂದಿಗೆ 2021 ರ ಮೆಮೊವನ್ನು ಪೀಠಕ್ಕೆ ಸಲ್ಲಿಸಿದರು. ಈ ನೀತಿಯು ಅಪರೂಪದ ರೋಗಗಳ ಸಂಭವ ಮತ್ತು ಹರಡುವಿಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಮತ್ತು ಅಪರೂಪದ ರೋಗಗಳ ವರ್ಗೀಕರಣದ ಬಗ್ಗೆ ಗಮನಹರಿಸುತ್ತದೆ ಎಂದು ವಿವರಿಸಿದರು.
ಈ ನೀತಿ ಅಪರೂಪದ ರೋಗಗಳ ಶ್ರೇಷ್ಠತೆಯ ಕೇಂದ್ರಗಳ ಮೂಲಕ ತಪಾಸಣೆಗೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ರೋಗ ತಡೆಗಟ್ಟುವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ನಿಮ್ಹಾನ್ಸ್ ಕಾಂಪೌಂಡ್ನಲ್ಲಿರುವ ಬೆಂಗಳೂರಿನ ಐಐಸಿಎಚ್ಗೆ ಕರೆದೊಯ್ಯಲು ಕೂಡ ಅವಕಾಶವಿದೆ ಎಂದು ತಿಳಿಸಿದರು.
ಅರ್ಜಿದಾರರಿಗೆ ಡಾಕ್ಟರ್ ಸಂಜೀವ್ ಅವರನ್ನು ಇಮೇಲ್ ಅಥವಾ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಲು ನ್ಯಾಯಾಲಯ ಅನುಮತಿ ನೀಡಿದೆ. ನ್ಯಾಯಾಲಯವು ವೈದ್ಯರಿಗೆ ತಕ್ಷಣ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ ಮತ್ತು ಪ್ರತಿಕ್ರಿಯಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದೆ.
ವೈದ್ಯರಿಗೆ ಸಂಬಂಧಿಸಿದ ವಿಳಂಬದಿಂದಾಗಿ ಮಗುವಿಗೆ ಏನಾದರೂ ಸಂಭವಿಸಿದಲ್ಲಿ, ಅವರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು" ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಚಿಕಿತ್ಸೆಯ ಪ್ರಗತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು ಅ 7ಕ್ಕೆ ಮುಂದೂಡಿದೆ.
Advertisement