ಮಂಗಗಳ ಕಾಟಕ್ಕೆ ರೈತರು ಕಂಗಾಲು: ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಮಂಡಳಿ ಚಿಂತನೆ

ಮಂಗಗಳ ಕಾಟಕ್ಕೆ ಹಾಸನದ ರೈತರು ಕಂಗಾಲಾಗಿದ್ದು, ಮಂಗಗಳ ಕಾಟ ದೂರಾಗಿಸಲು ನಾನಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಇದರ ಪ್ರತಿಫಲವಾಗಿ ಕೆಲ ದಿನಗಳ ಹಿಂದಷ್ಟೇ 38 ಮಂಗಳಲು ಸಾವನ್ನಪ್ಪಿದ್ದು, ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. 
ಸಾವನ್ನಪ್ಪಿರುವ ಮಂಗಗಳು
ಸಾವನ್ನಪ್ಪಿರುವ ಮಂಗಗಳು

ಹಾಸನ: ಮಂಗಗಳ ಕಾಟಕ್ಕೆ ಹಾಸನದ ರೈತರು ಕಂಗಾಲಾಗಿದ್ದು, ಮಂಗಗಳ ಕಾಟ ದೂರಾಗಿಸಲು ನಾನಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಇದರ ಪ್ರತಿಫಲವಾಗಿ ಕೆಲ ದಿನಗಳ ಹಿಂದಷ್ಟೇ 38 ಮಂಗಳಲು ಸಾವನ್ನಪ್ಪಿದ್ದು, ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಪ್ರಕರಣ ಸಂಬಂಧ ಹೈಕೋರ್ಟ್ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣ ನ್ಯಾಯಾಲಯದ ಅಂಗಳ ತಲುಪಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮನ್ನು ಒಳಗೊಂಡಂತೆ ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯು ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದೆ. 

ಈ ನಡುವೆ ಮಂಗಗಳ ಕಾಟ ತಪ್ಪಿಸಿಕೊಳ್ಳಲು ಯತ್ನದಲ್ಲಿ ರೈತರು ತಮಗೆ ತಿಳಿಯದಂತೆಯೇ ಮಂಗಗಳ ಮಾರಣಹೋಮದಂತಹ ದುಷ್ಕೃತ್ಯಗಳಿಗೆ ಕೈ ಹಾಕುವ ಪ್ರಕರಣಗಳು ಸಂಭವಿಸುತ್ತಿದ್ದು, ಇಂತಹ ಘಟನೆಗಳನ್ನು ದೂರಾಗಿಸಲು ಜಿಲ್ಲಾಡಳಿತ ಮಂಡಳಿಯು ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರಂತೆ ಬೆಳೆಗಳ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 

ಕೆಲ ದಿನಗಳ ಹಿಂದಷ್ಟೇ ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ 38 ಮಂಗಗಳ ಮೃತದೇಹ ಪತ್ತೆಯಾಗಿದ್ದವು. ಈ ಪ್ರಕರಣವನ್ನು ಇದೀಗ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೇಧಿಸಿದ್ದಾರೆ. 

ಬೆಳೆಗಳನ್ನು ಹಾಳು ಮಾಡುತ್ತಿದ್ದ ಕಾರಣ ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಈ ಮಂಗಗಳನ್ನು ಹಿಡಿಸಿದ್ದು, ಅವುಗಳನ್ನು ಚೀಲದಲ್ಲಿ ತುಂಬಿ ಸಾಗಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರಬಹುದು. ಈ ಸಂಬಂಧ ಏರು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಸ್ರೀನಿವಾರ್ ಗೌಡ ಹಾಗೂ ಡಿ.ಎಫ್.ಓ ಬಸವರಾಜು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಕೋತಿಗಳನ್ನು ಹಿಡಿಯುವಲ್ಲಿ ಪರಿಣಿತರಾದ ಬಾಣಾವರದ ರಾಮು ಮತ್ತು ಯಶೋಧ, ಉಗನೆ ಗ್ರಾಮದ ಮಂಜ, ಮಂಜೇಗೌಡ, ಐಯ್ಯಂಗಾರಿ, ಶ್ರೀಕಾಂತ್ ಹಾಗೂ ರಾಮಾನುಜ ಅಯ್ಯಂಗಾರ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಗನೆ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ರೈತರ ಬೆಳೆಗಳಿಗೆ ಕೋತಿಗಳ ಕಾಟ ಹೆಚ್ಚಿದ್ದರಿಂದ ಅವುಗಳನ್ನು ಹಿಡಿಸುವ ನಿರ್ಧಾರ ಮಾಡಿದ್ದರು. ಹಿಡಿದ ಮಂಗಗಳನ್ನು ಒಂದೇ ಚೀಲದಲ್ಲಿ ತುಂಬಿ ಸಾಗಿಸುವ ವೇಳೆ ಉಸಿರುಗಟ್ಟಿ ಮೃತಪಟ್ಟಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. 

ಮಂಗಳಲು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಈಗಾಗಲೇ ಪೊಲೀಸ್ ಇಲಾಖೆಯಿಂದ ಐವರನ್ನು ಬಂಧಿಸಲಾಗಿದೆ. ರಾಮು, ಯಶೋಧ, ಮಂಜ, ಮಂಜೇಗೌಡ, ಐಯ್ಯಂಗಾರಿ ಬಂಧಿತರು. ಬೆಳೆಗಳನ್ನು ನಶಮಾಡುತ್ತಿದ್ದರಿಂದ ಉಗನೆ ಗ್ರಾಮದ ಕೆಲವರು ಅವುಗಳನ್ನು ಹಿಡಿಸಿ ಸ್ಥಳಾಂತರಕ್ಕೆ ಪ್ಲಾನ್ ಮಾಡಿದ್ದರು. 

ಮಂಗಗಳನ್ನು ಹಿಡಿಯಲಿಕ್ಕೆ ಪರಿಣಿತರಾದ ಬಾಣಾವರದ ರಾಮ ಹಾಗೂ ಯಶೋಧ ಎಂಬುವವರನ್ನು ಕರೆಸಲಾಗಿತ್ತು. ಜಮೀನು ಮಾಲೀಕ ಐಯ್ಯಂಗಾರಿ ಮಂಗಗಳನ್ನು ಹಿಡಿಯೋದಕ್ಕೆ ಕರೆಸಿದ್ದರು. ಇವುಗಳನ್ನು ಹಿಡಿದು ಸಾಗಿಸುವಾಗ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದ್ದು, ಹೆಚ್ಚಿನ ತನಿಖೆಯಿಂದ ಮತ್ತು ಮರಣೋತ್ತರ ಪರೀಕ್ಷೆಯಿಂದ ನಿಖರ ಕಾರಣ ತಿಳಿದುಬರಲಿದೆ ಎಂದು ಹಾಸನದ ಉಪ ಆಯುಕ್ತ ಆರ್.ಗಿರೀಶ್ ಅವರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com