ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳುವ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬುಧವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಅಧಿಕಾರಿಗಳಿಗೆ ಗೌರವ್ ಗುಪ್ತಾ ಅವರು ಸೂಚನೆ ನೀಡಿದರು.
ಹೆಬ್ಬಾಳ ಕಣಿವೆ ಪ್ರದೇಶಗಳಿಂದ ಮಳೆಗಾಲದಲ್ಲಿ ಹರಿದುಬರುವ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿದ್ದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಭೈರತಿ ಬಸವರಾಜ್ ಅವರು ಹೇಳಿದ್ದಾರೆ.
ಕಳೆದ ವರ್ಷ ನಗರದ ಹೆಬ್ಬಾಳ ಕಣಿವೆ ಹೆಣ್ಣೂರು ಮುಖ್ಯ ರಸ್ತೆ ಬಳಿ ಹೆಚ್ಚಿನ ಮಳೆಯಾಗಿ ಕಣಿವೆ ತುಂಬಿ ಸಾಯಿ ಲೇಔಟ್, ಗೆದ್ದಲಹಳ್ಳಿ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಹೀಗಾಗಿ ಕಣಿವೆ ಮೇಲ್ಭಾಗದಲ್ಲಿರುವ ಸರ್ವಜ್ಞನಗರ, ಸಿ.ವಿ.ರಾಮನ್ ನಗರ ಹಾಗೂ ಹೆಬ್ಬಾಳದಿಂದಹರಿಯುವ ನೀರು ಮನೆಗಳಿಗೆ ನುಗ್ಗದಂತೆ ಕ್ರಮ ವಹಿಸಬೇಕೆಂದು ತಿಳಿಸಿದ್ದಾರೆ.
ಹೆಬ್ಬಾಳ ಕಣಿವೆ ಮೂಲಕ ಕಲ್ಕೆರೆ, ರಾಂಪುರ ಕೆರೆಗಳಿಗೆ ನೀರು ಹೋಗಲಿದೆ. ಈ ಕಣಿವೆಯಲ್ಲಿ 80 ಮಿಲಿಮೀಟರ್'ಗಿಂತ ಹೆಚ್ಚು ಮಳೆಯಾದರೆ ಸಮಸ್ಯೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಕಣಿವೆ ಬಳಿ ರೈಲ್ವೇ ಸೇತುವೆ ಕಿರಿದಾಗಿದ್ದು, ಅದನ್ನು ಅಗಲ ಮಾಡಲು ರೈಲ್ವೇ ಇಲಾಕೆ ಅನುಮತಿ ನೀಡಿದೆ. ಸೇತುವೆಯನ್ನು ಅಗಲ ಮಾಡಿದರೆ ಗಂಟೆಗೆ 130 ಎಂ.ಎಂ ಮಳೆಯಾದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಮಾಹಿತಿ ನೀಡಿದರು.
ಬಳಿಕ ಗೌರವ್ ಗುಪ್ತಾ ಅವರು, 187 ಎಕರೆ ವಿಸ್ತೀರ್ಣವಿರುವ ರಾಂಪುರ ಕೆರೆಯ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿಗಳ ಶುಭ್ರ ಬೆಂಗಳೂರು ಯೋಜನೆಯಡಿ ರೂ.35 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದ ವೇಳೆಗೆ ಕೆರೆಯ ಅಂಗಳದಲ್ಲಿ ಹೂಳನ್ನು ಸಂಪೂರ್ಣವಾಗಿ ತೆರವು ಮಾಡಬೇಕು. ತಿರುವುಗಾಲುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
Advertisement