ಮಾಲ್'ಗಳನ್ನು ತೆರೆಯಲು ಅನುಮತಿ ನೀಡಿ: ಸರ್ಕಾರಕ್ಕೆ ಮಾಲೀಕರ ಮನವಿ

ಮೊದಲ ಹಂತದ ಅನ್‌ಲಾಕ್‌ ಪ್ರಕ್ರಿಯೆಯಲ್ಲಿಯೇ ಮಾಲ್‌ಗಳಿಗೂ ತೆರೆಯಲು ಅವಕಾಶ ಕಲ್ಪಿಸಬೇಕೆಂದು ಶಾಪಿಂಗ್ ಸೆಂಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಸ್‌ಸಿಎಐ) ಶುಕ್ರವಾರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೊದಲ ಹಂತದ ಅನ್‌ಲಾಕ್‌ ಪ್ರಕ್ರಿಯೆಯಲ್ಲಿಯೇ ಮಾಲ್‌ಗಳಿಗೂ ತೆರೆಯಲು ಅವಕಾಶ ಕಲ್ಪಿಸಬೇಕೆಂದು ಶಾಪಿಂಗ್ ಸೆಂಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಸ್‌ಸಿಎಐ) ಶುಕ್ರವಾರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಎಸ್‌ಸಿಎಐ, ಮಾಲ್‌ಗಳಲ್ಲಿ ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿರುವ ಕಾರಣ ರಾಜ್ಯದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಒಟ್ಟು ಒಂದು ಲಕ್ಷ ಉದ್ಯೋಗ ನಷ್ಟವಾಗಿದೆ. ರಾಜ್ಯದಲ್ಲಿ ಮಾಲ್‌ಗಳ ಬಾಗಿಲು ಮುಚ್ಚಿರುವುದರ ಪರಿಣಾಮವಾಗಿ ಸರ್ಕಾರಕ್ಕೆ ಪ್ರತಿ ತಿಂಗಳು ರೂ.360 ಕೋಟಿ ಆದಾಯ ನಷ್ಟವಾಗುತ್ತಿದೆ. ರಾಜ್ಯದ ಶೇಕಡ 50ಕ್ಕಿಂತ ಹೆಚ್ಚಿನ ಮಾಲ್‌ಗಳು ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿವೆ. ಸರ್ಕಾರದ ಕಟ್ಟಡಗಳಲ್ಲಿ ಇರುವ ಮಾಲ್‌ಗಳ ಬಾಡಿಗೆ ಮನ್ನಾ ಮಾಡಬೇಕು, 2022ರ ಜನವರಿವರೆಗೆ ಆಸ್ತಿ ತೆರಿಗೆ ಹಾಗೂ ನಿಗದಿತ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ಕೊಡಬೇಕೆಂದು ಮನವಿ ಮಾಡಿಕೊಂಡಿದೆ. 

ಅಲ್ಲದೆ, ಮೊದಲ ಹಂತದ ಅನ್‌ಲಾಕ್‌ ಪ್ರಕ್ರಿಯೆಯಲ್ಲಿಯೇ ಮಾಲ್‌ಗಳಿಗೂ ತೆರೆಯಲು ಅವಕಾಶ ಕಲ್ಪಿಸಬೇಕು. ದೇಶದಲ್ಲಿ ಮಾಲ್‌ಗಳು, ಅಲ್ಲಿನ ಮಳಿಗೆಗಳು ಬಹಳ ಸಂಕಷ್ಟದಲ್ಲಿವೆ. ಹಿಂದಿನ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ಸಾಲದ ಕಂತುಗಳ ಮರುಪಾವತಿಗೆ ವಿನಾಯಿತಿ ಸಿಕ್ಕಿತ್ತು. ಆದರೆ, ಈ ಬಾರಿ ಅಂತಹ ಸೌಲಭ್ಯ ಇಲ್ಲ. ಈಗ ಮಾಲ್‌ಗಳಿಗೆ, ಮಳಿಗೆಗಳಿಗೆ ಆದಾಯವೇ ಇಲ್ಲದಂತೆ ಆಗಿದೆ. 

ಮಾಲ್‌ಗಳು ಸುರಕ್ಷಿತವಾಗಿವೆ, ಅಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಮಾಲ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿಗೆ ಬರುತ್ತಿರುವ ಗ್ರಾಹಕರು ಹೆಚ್ಚು ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com