ಬೆಂಗಳೂರು: ನಗರದಲ್ಲಿ ಮುಂದುವರೆದ ರೈಲುಗಳ ಮೇಲಿನ ಕಲ್ಲು ತೂರಾಟ, 62 ಪ್ರಕರಣಗಳಲ್ಲಿ 11 ಮಂದಿಗೆ ಗಾಯ!

2021ರಲ್ಲಿ ಚಲಿಸುವ ರೈಲುಗಳ ಮೇಲೆ ಕಲ್ಲು ತೂರಾಟದ 62 ಘಟನೆಗಳಿಗೆ ಬೆಂಗಳೂರು ರೈಲ್ವೆ ವಿಭಾಗ ಸಾಕ್ಷಿಯಾಗಿದ್ದು, 11 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆಗಳಲ್ಲಿ 55 ದುಷ್ಕರ್ಮಿಗಳನ್ನು ಬಂಧಿಸಿದ್ದರೂ, ಕ್ರಮದ ಹೊರತಾಗಿಯೂ ಇಂತಹ ಘಟನೆಗಳು ಮುಂದುವರೆದಿರುವುದಕ್ಕೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರೈಲೊಂದರ ಮೇಲೆ ಎಸೆದಿರುವ ಕಲ್ಲು.
ರೈಲೊಂದರ ಮೇಲೆ ಎಸೆದಿರುವ ಕಲ್ಲು.

ಬೆಂಗಳೂರು: 2021ರಲ್ಲಿ ಚಲಿಸುವ ರೈಲುಗಳ ಮೇಲೆ ಕಲ್ಲು ತೂರಾಟದ 62 ಘಟನೆಗಳಿಗೆ ಬೆಂಗಳೂರು ರೈಲ್ವೆ ವಿಭಾಗ ಸಾಕ್ಷಿಯಾಗಿದ್ದು, 11 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆಗಳಲ್ಲಿ 55 ದುಷ್ಕರ್ಮಿಗಳನ್ನು ಬಂಧಿಸಿದ್ದರೂ, ಕ್ರಮದ ಹೊರತಾಗಿಯೂ ಇಂತಹ ಘಟನೆಗಳು ಮುಂದುವರೆದಿರುವುದಕ್ಕೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರೈಲ್ವೆ ಸಂರಕ್ಷಣಾ ಪಡೆಯ ಉನ್ನತ ಪೊಲೀಸ್ ಅಧಿಕಾರಿಗಳು ಮಾತನಾಡಿ, ಹೆಬ್ಬಾಳ-ಬೈಯಪ್ಪನಹಳ್ಳಿ, ಯಲಹಂಕ-ರಾಜನಗುಂಟೆ, ಯಶವಂತಪುರ-ಲೊಟ್ಟೆಗಹಳ್ಳಿ ಮತ್ತು ಕೃಷ್ಣರಾಜಪುರದ ಹೊರ ಪ್ರದೇಶಗಳು ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಪ್ರಕರಣಗಳ ಸಂಖ್ಯೆ ಕಡಿಮೆ ವರದಿಯಾಗಿದೆ. ಇದಕ್ಕೆ ರೈಲುಗಳ ಸಂಚಾರ ಕಡಿಮೆಯಾಗಿರುವುದೂ ಕೂಡ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಕಲ್ಲು ತೂರಾಟ ನಡೆಸಿದ ಬಳಿಕ ಆಗುವ ಪರಿಣಾಮಗಳ ಬಗ್ಗೆ ಅರಿವಿಲ್ಲದೇ ಮೋಜಿಗಾಗಿ ಮಾಡಿರುವುದಾಗಿ ಬಂಧಿತರು ವಿಚಾರಣೆ ವೇಳೆ ಹೇಳಿದ್ದಾರೆ.

ಕಲ್ಲು ತೂರಾಟದಿಂದಾಗಿ "ಹವಾನಿಯಂತ್ರಿತ ಕಂಪಾರ್ಟ್‌ಮೆಂಟ್‌ಗಳಲ್ಲಿ, ಮುಚ್ಚಿದ ಗಾಜಿನ ಕಿಟಕಿಗಳು ಹಾನಿಗೊಳಗಾಗುತ್ತವೆ, ಅಲ್ಲದೆ, ಜನರಿಗೂ ಕಲ್ಲು ತಾಕಿ ಗಾಯಗೊಳ್ಳುತ್ತಾರೆ. ಹವಾನಿಯಂತ್ರಿತ ಕಂಪಾರ್ಟ್‌ಮೆಂಟ್‌ಗಳಲ್ಲಿ ಕಿಟಿಕಿಗಳು ಡಬಲ್ ಕೋಟೆಡ್ ಆಗಿರುತ್ತದೆ. ಇದು ಸಾವಿರಾರು ರೂಪಾಯಿಗಳಷ್ಟು ಖರ್ಚುಗಳನ್ನು ತಂದೊಡ್ಡುತ್ತದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಚರಿಸುತ್ತಿರುವ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವ ಕಿಡಿಗೇಡಿಗಳ ವಿರುದ್ಧ ರೈಲ್ವೇ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳ ದಾಖಲು ಮಾಡಿಕೊಳ್ಳಲಾಗುತ್ತಿದೆ. ಸೆಕ್ಷನ್ 147, ಸೆಕ್ಷನ್ 145 (ಡಿ) ಮತ್ತು ಸೆಕ್ಷನ್ 153 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತರನ್ನು ಬಾಲಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗುತ್ತಿದೆ.

ಬಂಧಿತರ ಪೈಕಿ ಮಾದಕ ವ್ಯಸನಿಗಳಾಗಿದ್ದು, ಅವರಿಗೆ ಅಪರಾಧ ಮಾಡುತ್ತಿದ್ದೇವೆಂಬ ಅರಿವೂ ಕೂಡ ಇಲ್ಲ. ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಬಳಕ ಸ್ಥಳದಿಂದ ಓಡಿಹೋಗಲು ಇವರು ಪ್ರಯತ್ನಿಸುವುದಿಲ್ಲ ಎಂದು ಆರ್‌ಪಿಎಫ್ ಪೊಲೀಸರು ತಿಳಿಸಿದ್ದಾರೆ.

ಕಲ್ಲು ತೂರಾಟ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ಹಳಿಗಳ ಬಳಿ ಇರುವ ಕೊಳೆಗೇರಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಎನ್‌ಜಿಒಗಳೊಂದಿಗೆ ಆರ್‌ಪಿಎಫ್ ಇದೀಗ ಒಪ್ಪಂದ ಮಾಡಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com