ಬೆಂಗಳೂರು: ರಾಜ್ಯ ಸರ್ಕಾರದ ಡಿನೋಟಿಫಿಕೇಷನ್ ನ ಪರಿಣಾಮವಾಗಿ ಬಿಡಿಎಯಿಂದ ಹಂಚಿಕೆಯಾಗಿದ್ದ ನಿವೇಷನಗಳನ್ನು ಕಳೆದುಕೊಂಡಿದ್ದ 307 ಮಂದಿಗೆ 13 ವರ್ಷಗಳೇ ಕಳೆದರೂ ಪರ್ಯಾಯ ನಿವೇಶನ ಇನ್ನೂ ದೊರೆತಿಲ್ಲ.
ಆದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಅರ್ಕಾವತಿ ಲೇಔಟ್ ನಲ್ಲಿ ನಿವೇಶನ ಕಳೆದುಕೊಂಡಿದ್ದ 307 ಮಂದಿಗೆ ಅದೇ ಲೇಔಟ್ ನಲ್ಲಿ ಹಾಗೂ ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಪತ್ರ ಬಂದಿತ್ತು.
ಪತ್ರ ಬಂದು ಮೂರು ತಿಂಗಳೇ ಕಳೆದಿದಿದ್ದರೂ ಇನ್ನೂ ಮಂಜೂರು ಪತ್ರ ಕೈ ಸೇರಿಲ್ಲ. ಇದು ಸಂತ್ರಸ್ತರನ್ನು ಮತ್ತಷ್ಟು ನೋವು ಎದುರಿಸುವಂತೆ ಮಾಡಿದೆ.
2008-2009 ರಲ್ಲಿ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಆದೇಶ ಹೊರಡಿಸಿದ ನಂತರ ಈ 307 ಮಂದಿ ನಿವೇಶನ ಕಳೆದುಕೊಂಡಿದ್ದರು. ಅಂದಿನಿಂದಲೂ ಬಿಡಿಎಯಿಂದ ನ್ಯಾಯ ಪಡೆಯಲು ಸಂತ್ರಸ್ತರು ಹೋರಾಡುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಬಿಡಿಎ ಹಿರಿತನದ ಆಧಾರದಲ್ಲಿ ಪರ್ಯಾಯ ನಿವೇಶನ ಮಂಜೂರು ಮಾಡುತ್ತಿರುವುದಾಗಿ ಘೋಷಿಸಿತ್ತು.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅರ್ಕಾವತಿ ಹಂಚಿಕೆದಾರರ ವೇದಿಕೆಯ ಅಧ್ಯಕ್ಷ ಎಂ. ನಾಗರಾಜು, 307 ಮಂದಿ ಮಂಜೂರು ಆದೇಶ ಪಡೆಯುವುದಕ್ಕೆ ಇನ್ನೂ ಕಾಯುತ್ತಿದ್ದಾರೆ. ಈ 307 ಮಂದಿ 3,500 ನಿವೇಶನಗಳನ್ನು ಸರಣಿ ಡಿನೋಟಿಫಿಕೇಶನ್ ನಿಂದ ಕಳೆದುಕೊಂಡವರ ಭಾಗವಾಗಿದ್ದು ಇಂದಿಗೂ ಸಮಸ್ಯೆ ಎದುರಿಸುತ್ತಿದ್ದಾರೆ.
30x40 ಅಡಿ ಪರ್ಯಾಯ ನಿವೇಶನಕ್ಕಾಗಿ ಕಾಯುತ್ತಿರುವವರ ಪೈಕಿ ನಿವೃತ್ತ ಸರ್ಕಾರಿ ನೌಕರರಾದ ಕಾಳೇಗೌಡ ಎಂ. ಎಂಬುವವರೂ ಇದ್ದು, ಇವರೊಂದಿಗೆ ಕನಿಷ್ಟ 16 ಮಂದಿ ಹಿರಿಯ ನಾಗರಿಕರು 13 ವರ್ಷಗಳಿಂದ ಪರ್ಯಾಯ ನಿವೇಶನಕ್ಕಾಗಿ ಎದುರುನೋಡುತ್ತಿದ್ದಾರೆ. ತ್ವರಿತವಾಗಿ ಈ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಎಂ. ನಾಗರಾಜು ಆಗ್ರಹಿಸಿದ್ದಾರೆ.
ಈ ಗೊಂದಲಗಳ ಬಗ್ಗೆ ಬಿಡಿಎ ಕಾರ್ಯದರ್ಶಿ ವಿ ಆನಂದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು ಇನ್ನೆರಡು ವಾರಗಳಲ್ಲಿ ಮಂಜೂರಾಗಿರುವ ಪತ್ರಗಳನ್ನು ನೀಡಲಾಗುವುದು, ಕಾನೂನು ತೊಡಕುಗಳು ಇಲ್ಲದೇ ಇರುವ ನಿವೇಶನಗಳನ್ನು ನೀಡುವುದನ್ನು ಖಾತ್ರಿಪಡಿಸಿಕೊಳ್ಳಬೇಕಿರುವುದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.
Advertisement