ಬೆಂಗಳೂರು: ರಸ್ತೆಗುಂಡಿ ತಪ್ಪಿಸಲು ಹೋಗಿ ಅಪಘಾತ; 48 ಗಂಟೆಗಳಲ್ಲಿ ಮತ್ತೊಂದು ಸಾವು

ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ನಿಂದ ಬಿದ್ದು ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. 
ರಸ್ತೆಗುಂಡಿ ಅಪಘಾತ
ರಸ್ತೆಗುಂಡಿ ಅಪಘಾತ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ನಿಂದ ಬಿದ್ದು ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. 

ನಗರದ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ದ್ವಿಚಕ್ರ ವಾಹನದಲ್ಲಿ ಒಂದೇ ಕುಟುಂಬದ ಮೂವರು ಚಲಿಸುತ್ತಿದ್ದರು. ಕಾಚೋಹಳ್ಳಿ ಕ್ರಾಸ್ ಬಳಿ ರಸ್ತೆ ಮಧ್ಯೆಯಿದ್ದ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಹರಿದು ಆಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಮೃತರನ್ನು ನಗರದ ಮೈಸೂರು ರಸ್ತೆಯ ಗೋರಿಪಾಳ್ಯ ನಿವಾಸಿ ನುಬಿಯಾ (17) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆಕೆಯ ಸಹೋದರಿ ಅಫ್ರಿನ್ (15) ಮತ್ತು ವಾಹನ ಚಲಾಯಿಸುತ್ತಿದ್ದ ಅಹ್ರಾನ್ ಗೆ ಗಂಭೀರ ಗಾಯಗಳಾಗಿವೆ. 

ಮೂವರು ತಾವರೆಕೆರೆಯಿಂದ ಹಿಂತಿರುಗುತ್ತಿದ್ದಾಗ, ಕಾಚೋಹಳ್ಳಿ ಕ್ರಾಸ್ ಬಳಿಯ ಚಿಕ್ಕಗೊಲ್ಲರಹಟ್ಟಿಯ ಮಾಧವ ಆಸ್ಪತ್ರೆಯ ಬಳಿ ಬೆಳಿಗ್ಗೆ 10.40 ರ ಸುಮಾರಿಗೆ ಹಾದುಹೋಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವಾಗ ಅಹ್ರಾನ್ ವಾಹನದ ನಿಯಂತ್ರಣ ಕಳೆದುಕೊಂಡರು ಮತ್ತು ಮೂವರು ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. 

"ನುಬಿಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಟ್ರಕ್ ಚಾಲಕನು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಪೊಲೀಸರು ಚಾಲಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಎರಡು ದಿನಗಳ ಹಿಂದೆ, ಅಬಕಾರಿ ಇಲಾಖೆಯ 57 ವರ್ಷದ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸಿ.ಕೃಷ್ಣಪ್ಪ ಬುಧವಾರ ಮಧ್ಯಾಹ್ನ ಅದೇ ಜಾಗದಲ್ಲಿ ಅಪಘಾತವಾಗಿ ಟ್ರಕ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com