ಬೆಂಗಳೂರಿನಲ್ಲಿ ವರುಣನ ಅವಾಂತರ: ವಿದ್ಯುತ್​ ತಗುಲಿ ವ್ಯಕ್ತಿ ಸಾವು

ನಿನ್ನೆ ಸುರಿದ ಭಾರೀ ಮಳೆಯಿಂದ ಸಂಭವಿಸಿದ ವಿದ್ಯುತ್​ ಅವಘಡದಲ್ಲಿ ವ್ಯಕ್ತಿ ಓರ್ವರು ಮೃತಪಟ್ಟಿರುವ ಘಟನೆ ನಗರದ ಕೆ.ಪಿ‌ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಯಿಂದ ಸಂಭವಿಸಿದ ವಿದ್ಯುತ್​ ಅವಘಡದಲ್ಲಿ ವ್ಯಕ್ತಿ ಓರ್ವರು ಮೃತಪಟ್ಟಿರುವ ಘಟನೆ ನಗರದ ಕೆ.ಪಿ‌ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತರನ್ನು ವೆಂಕಟೇಶ್ (56) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದೆ. ಮೃತ ವೆಂಕಟೇಶ್ ಪೇಟಿಂಗ್ ಆಗಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಟೈಲರಿಂಗ್​ ಕೆಲಸ ಮಾಡುತ್ತಿದ್ದರು.

ಸೋಮವಾರ ರಾತ್ರಿ ದಂಪತಿ ಕೆಲಸ ಮುಗಿಸಿ ವಾಪಸ್ಸಾದಾಗ ಧಾರಾಕಾರ ಮಳೆಯಿಂದ ಮನೆಯಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ವಿದ್ಯುತ್ ಇಲ್ಲದೇ ದಂಪತಿ ಕತ್ತಲೆಯಲ್ಲೇ ನೀರು ಹೊರಹಾಕುತ್ತಿದ್ದರು. ರಾತ್ರಿ 10:30ರ ಸುಮಾರಿಗೆ ವಿದ್ಯುತ್ ಬಂದಿದ್ದು, ವೆಂಕಟೇಶ್ ಸ್ವಿಚ್​ ಆನ್​ ಮಾಡಲು ಹೋಗಿದ್ದಾರೆ. ಈ ವೇಳೆ ವಿದ್ಯುತ್​ ಅವಘಡ ಸಂಭವಿಸಿ, ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com