ಬೆಂಗಳೂರು: ಸೋಷಿಯಲ್ ಮೀಡಿಯಾ ನಿರ್ವಹಣೆ ಕಂಪನಿ ಮೇಲೆ ಐಟಿ ರೇಡ್
ಬೆಂಗಳೂರು: ಪ್ರತಿಷ್ಠಿತ ಸೋಶಿಯಲ್ ಮೀಡಿಯಾ ಸಂಸ್ಥೆಯನ್ನು ನಿರ್ವಹಣೆ ಮಾಡುವ ಮಾತೃಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಪ್ಯಾಲೇಸ್ ಗುಟ್ಟಹಳ್ಳಿ ರಸ್ತೆಯಲ್ಲಿರುವ ಡಿಸೈನ್ ಬಾಕ್ಸ್ ಕಂಪನಿಯಲ್ಲಿ ಐಟಿ ಇಲಾಖೆ ತಪಾಸಮೆ ನಡೆಸಿದೆ. ಜತೆಗೆ ಸದಾಶಿವನಗರದಲ್ಲಿರುವ ಇದರ ಮತ್ತೊಂದು ಕಚೇರಿ ಮೇಲೆಯೂ ದಾಳಿಯಾಗಿದೆ ಎನ್ನಲಾಗಿದೆ.
ಇಂದು ಮುಂಜಾನೆ 7 ಕ್ಕೆ ಆಗಮಿಸಿರೋ ಐಟಿ ಅಧಿಕಾರಿಗಳು ಕಂಪನಿ ಲೆಕ್ಕಪತ್ರಗಳ ತಪಾಸಣೆ, ಪರಿಶೀಲನೆ ಆರಂಭಿಸಿದ್ದಾರೆ. ಈ ತಂಡದಲ್ಲಿ ಒಟ್ಟು ಎಂಟು ಮಂದಿ ಐಟಿ ಅಧಿಕಾರಿಗಳಿದ್ದಾರೆ.
ಇದು ದೇಶಾದ ಹಲವು ರಾಜಕಾರಣಿಗಳ ಪ್ರಮೋಷನ್ ಮಾಡುವ ಸಂಸ್ಥೆಯಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ಹ್ಯಾರಿಶ್ ಪುತ್ರ ಮಹಮ್ಮದ್ ನಲಪಾಡ್ ಸೇರಿದಂತೆ ಹಲವಾರು ಗಣ್ಯ ರಾಜಕಾರಣಿಗಳು ಈ ಸಂಸ್ಥೆಯಿಂದ ಪ್ರಚಾರ, ಪ್ರಮೋಶನ್ ಸೇವೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ಸಂಸ್ಥೆಯು ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಗಳ ನಿರ್ವಹಣೆ ಮಾಡುತ್ತಿದ್ದು ಇಲ್ಲಿಂದ ಪ್ರಚಾರ ಸೇವೆ ಪಡೆಯುವುದು ಅತಿ ದುಬಾರಿ ಎನ್ನಲಾಗಿದೆ. ಇದರ ಕೇಂದ್ರ ಕಚೇರಿ ಪ್ಯಾಲೇಸ್ ಗುಟ್ಟಹಳ್ಳಿ ರಸ್ತೆಯಲ್ಲಿದೆ.
ಯಾರು ಹೇಳಿದ್ದು ಡಿಸೈನ್ಸ್ ಬಾಕ್ಸ್ ನನ್ನ ಸೋಷಿಯಲ್ ಮೀಡಿಯಾ ನೋಡಿಕೊಳ್ಳುತ್ತಿದ್ದರೆಂದು: ಡಿ.ಕೆ.ಶಿ
ಡಿಸೈನ್ ಬಾಕ್ಸ್ ನವರು ನನ್ನ ಸೋಷಿಯಲ್ ಮೀಡಿಯಾ ನೋಡಿಕೊಳ್ಳುತ್ತಿದ್ದರು ಎಂದು ಯಾರು ಹೇಳಿದ್ದು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಡಿಸೈನ್ಸ್ ಬಾಕ್ಸ್ ಕಂಪೆನಿ ಮೇಲಿನ ಆದಾಯ ತೆರಿಗೆ ದಾಳಿ ಕುರಿತು ಸುದ್ದಿಗಾರರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಡಿಸೈನ್ಸ್ ಬಾಕ್ಸ್ ನವರು ನನ್ನ ಸೋಷಿಯಲ್ ಮೀಡಿಯಾ ನೋಡಿಕೊಳ್ಳುತ್ತಿರಲಿಲ್ಲ. ಬದಲಿಗೆ ನನಗೆ ಸಹಾಯ ಮಾಡುತ್ತಿದ್ದರು. ಡಿಸೈನ್ ಬಾಕ್ಸ್ ನವರು ವೃತ್ತಿಪರತೆ ಹೊಂದಿದವರು.ಅವರ ಕಂಪನಿ ಮೇಲೆ ಐಟಿ ದಾಳಿ ಆಗಿರುವ ಬಗ್ಗೆ ನನಗೆ ಈಗ ಒಬ್ಬರು ಮಾಹಿತಿ ನೀಡಿದ ಮೇಲೆಯಷ್ಟೇ ದಾಳಿ ಆಗಿದೆ ಎಂದು ತಿಳಿದುಬಂದಿತು.
ಐಟಿಯವರಿಗೆ ಡಿಸೈನ್ ಬಾಕ್ಸ್ ನವರು ಉತ್ತರ ಕೊಡುತ್ತಾರೆ.ಇದರಲ್ಲಿ ಗಾಬರಿ ಆಗುವ ಅವಶ್ಯಕತೆ ಇಲ್ಲ.ದಾಳಿ ಬಗ್ಗೆ ಸಂಪೂರ್ಣ ವಿಷಯ ತಿಳಿದು ಮತ್ತೆ ಪ್ರತಿಕ್ರಿಯಿಸುವುದಾಗಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ