ಬೆಂಗಳೂರು: ರಾಹುಲ್ ಭಂಡಾರಿ ಪಿಸ್ತೂಲ್ ಬಳಸುವ ತರಬೇತಿ ಪಡೆದಿದ್ದ ಎಂದು ಸದಾಶಿವನಗರ ಡಿಸಿಪಿ ಅನುಚೇತ್ ಹೇಳಿದ್ದಾರೆ.
ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿಆರ್ಮಿ ಸ್ಕೂಲ್ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಮೃತದೇಹ ಶುಕ್ರವಾರ ಸಂಜಯನಗರ ಮುಖ್ಯರಸ್ತೆಯ ಬಸ್ ಸ್ಟಾಪ್ ಬಳಿ ಪತ್ತೆಯಾಗಿತ್ತು. ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್, ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ 17 ವರ್ಷದ ಯುವಕ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದು, ಇಂಡಿಯನ್ ಏರ್ ಫೋರ್ಸ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದರು.
ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ ಒಂದು ಸಿಂಗಲ್ ಬುಲೆಟ್ ತಲೆಯ ಬಲಭಾಗದಿಂದ ನುಗ್ಗಿ ಎಡಭಾಗದಿಂದ ಬಿದ್ದಿದೆ. ಸ್ಥಳದಲ್ಲಿ ಇಂಡಿಯನ್ ಫ್ಯಾಕ್ಟರಿ ಮೇಡ್ ಪಿಸ್ತೂಲ್ ದೊರಕಿದೆ. ಆ ಪಿಸ್ತೂಲ್ಗೆ ರಾಹುಲ್ ತಂದೆಯ ಪರವಾನಗಿ ಇದೆ ಎಂದು ತಿಳಿದು ಬಂದಿದೆ. ರಾಹುಲ್ ಸುಮಾರು ಬೆಳಗ್ಗೆ 3.30ಗೆ ಅವನ ಮನೆಯಿಂದ ಹೊರಟು ಈ ಕಡೆ ಬಂದಿದ್ದಾನೆ. ಗಂಗೆನಹಳ್ಳಿಯಲ್ಲಿ ಈತನ ಮನೆ ಇರುವುದು ತಿಳಿದುಬಂದಿದ್ದು, ತಂದೆ, ತಾಯಿ ಮತ್ತು ಅಕ್ಕನೊಂದಿಗೆ ವಾಸವಾಗಿದ್ದ ಎಂದು ತಿಳಿದುಬಂದಿದೆ. ಅವನು ಸ್ವಯಂ ಪ್ರೇರಣೆಯಿಂದ ಈ ಕೃತ್ಯ ಮಾಡಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದರು.
ಯಾವ ಕಾರಣಕ್ಕೆ ಯುವಕ ಈ ರೀತಿ ಮಾಡಿಕೊಂಡಿದ್ದಾನೆ ಎಂದು ತಿಳಿದಿಲ್ಲ. ಈಗ ನಾವು ಪ್ರಾಥಮಿಕ ತನಿಖೆಯನ್ನು ಮಾಡುತ್ತಿದ್ದೇವೆ. ನಂತರ ಈ ಘಟನೆಗೆ ಕಾರಣ ಏನು ಎಂಬುದು ಪೂರ್ಣ ವಿವರ ತಿಳಿಯುತ್ತೆ ಎಂದು ತಿಳಿಸಿದ್ದಾರೆ.
ರಾಹುಲ್ ತಂದೆ 2017ರಲ್ಲಿ ಆರ್ಮಿಯಿಂದ ನಿವೃತ್ತ ಹೊಂದುವ ಸಮಯದಲ್ಲಿ ಈ ಪಿಸ್ತೂಲ್ ನನ್ನು ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಅಲ್ಮೆರಾದಲ್ಲಿ ಪಿಸ್ತೂಲ್ ಇಡುತ್ತಿದ್ದರೆಂದು ಅವರು ತಿಳಿಸಿದ್ದಾರೆ. ಅದು ಅಲ್ಲದೇ ಆತನಿಗೂ ಪಿಸ್ತೂಲ್ ಬಳಸುವುದು ತಿಳಿದಿತ್ತು. ಅದಕ್ಕಾಗಿ ತರಬೇತಿಯನ್ನು ತೆಗೆದುಕೊಂಡಿದ್ದ ಎಂದು ಯುವಕನ ಪೋಷಕರು ತಿಳಿಸಿದ್ದಾರೆ. ಯುವಕ 3-30 ವರೆಗೂ ಓದಿಕೊಂಡು ನಂತರ ವಾಕಿಂಗ್ ಹೋಗುತ್ತಿದ್ದ ಎಂದು ಅವರ ಪೋಷಕರು ತಿಳಿಸಿದ್ದಾರೆ. ಅದೇ ರೀತಿ ಇಂದು ಅಲ್ಮೆರಾದಲ್ಲಿದ್ದ ಪಿಸ್ತೂಲ್ನನ್ನು ತೆಗೆದುಕೊಂಡು ಬಂದು ಈ ಕೃತ್ಯ ಮಾಡಿದ್ದಾನೆ ಎಂದು ತಿಳಿದುಬರುತ್ತಿದೆ ಎಂದು ಹೇಳಿದ್ದಾರೆ.
Advertisement