15 ನೇ ವಯಸ್ಸಿನಲ್ಲಿ ಮದ್ಯವ್ಯಸನಿಯೊಂದಿಗೆ ವಿವಾಹ: 21 ವರ್ಷದ ವಿಧವೆಗೆ ಇಬ್ಬರು ಮಕ್ಕಳು!

ಬಾಲ್ಯ ಜೀವನದಿಂದ ಹದಿಹರೆಯವನ್ನು ಕಿತ್ತುಕೊಳ್ಳುವ ಬಾಲ್ಯವಿವಾಹ, ಬಾಲ್ಯದ ವಯಸ್ಸಿನ ವಧುವನ್ನು ಬೇಗನೆ ಹೆಣ್ತನ ಮತ್ತು ತಾಯ್ತನಕ್ಕೆ ತಳ್ಳುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಾಲ್ಯ ಜೀವನದಿಂದ ಹದಿಹರೆಯವನ್ನು ಕಿತ್ತುಕೊಳ್ಳುವ ಬಾಲ್ಯವಿವಾಹ, ಬಾಲ್ಯದ ವಯಸ್ಸಿನ ವಧುವನ್ನು ಬೇಗನೆ ಹೆಣ್ತನ ಮತ್ತು ತಾಯ್ತನಕ್ಕೆ ತಳ್ಳುತ್ತದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕಳೆದ ವಾರಾಂತ್ಯದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಾಲ್ಯವಿವಾಹದಿಂದ ನೊಂದ 25ಕ್ಕೂ ಹೆಚ್ಚು ಯುವ ಮಹಿಳೆಯರನ್ನು ಭೇಟಿ ಮಾಡಿದೆ.

ಅವರೆಲ್ಲರಿಗೂ ಇನ್ನೂ 20 ವರ್ಷ ವಯಸ್ಸು ಆಗಿಲ್ಲ. ಸಿ-ಸೆಕ್ಷನ್ ಮೂಲಕ 14 ರಿಂದ 15 ನೇ ವಯಸ್ಸಿನಲ್ಲಿ ಮಕ್ಕಳನ್ನು ಹೆತ್ತಿದ್ದಾರೆ. ಅವರಲ್ಲಿ ಒಬ್ಬಳು ಹೆರಿಗೆಯಾದ ಒಂದೆರಡು ದಿನಗಳಲ್ಲಿ ತನ್ನ ಮಗುವನ್ನು ಕಳೆದುಕೊಂಡಿದ್ದಾಳೆ. ಹದಿಹರೆಯರಾಗಿದ್ದು, ನಾರ್ಮಲ್ ಡೆಲಿವರಿ ಮಾಡಿಸುವುದು ನಿಮಗೂ ಮತ್ತು ನಿಮ್ಮ ಮಗುವಿಗೂ ಅಪಾಯಕರ ಎಂದು ವೈದ್ಯರು ಹೇಳಿದ್ದಾಗಿ ಅವರೆಲ್ಲಾ ತಿಳಿಸಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ತಾಯಂದಿರ ವಯಸ್ಸನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಯೇ ಎಂಬ ಪ್ರಶ್ನೆಗೆ, ತಾಯಿ ಭಾಗ್ಯ ಯೋಜನೆಯಡಿ ನೀಡಲಾದ ತಾಯಿ ಕಾರ್ಡ್‌ನಲ್ಲಿ ತಮ್ಮ ವಯಸ್ಸನ್ನು 20 ಅಥವಾ 21 ಎಂದು ಬದಲಾಯಿಸಿರುವುದಾಗಿ ಎಂದು ಅವರು ಹೇಳಿಕೊಂಡಿದ್ದಾರೆ. ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಅಡಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ ಮತ್ತು ಇದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ರಾಜ್ಯದ ಒಳನಾಡಿನಲ್ಲಿ ದುರ್ಬಲ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದ ಕೂಡಲೇ ಮದುವೆ ಮಾಡಿಸುವ ಸಾಕಷ್ಟು ಪ್ರಕರಣಗಳಿವೆ. 

ಬಾಲ್ಯವಿವಾಹಕ್ಕೆ ಬಡತನ ಪ್ರಮುಖ ಕಾರಣ:  ಇತ್ತೀಚಿಗೆ ಆಗಸ್ಟ್ 2021 ರಿಂದ ಜನವರಿ 2022 ರವರೆಗೂ ಚಾಮರಾಜನಗರ ಜಿಲ್ಲೆಯ 17 ಗ್ರಾಮ ಪಂಚಾಯಿತಿಯ 44 ಹಳ್ಳಿಗಳಲ್ಲಿ ಅಜಿಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದಲ್ಲಿ (ಎಐಎಜಿಇ) 2.0 ನಡೆಸಿದ ಸರ್ವೇ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದಲ್ಲಿ ಸುಮಾರು 530 ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿವೆ ಎಂದು ಪ್ರಾಜೆಕ್ಟ್ ಡೈರೆಕ್ಟರ್ ಆಡಿಸ್ ಅರ್ನಾಲ್ಡ್ ತಿಳಿಸಿದ್ದಾರೆ.

ಬಡತನ ಹಾಗೂ ಅನಕ್ಷರತೆ ಕಾರಣದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಕಾರ್ಯಕ್ರಮಗಳು ನಡೆಯುತ್ತಿವೆ. ಪೋಷಕರು ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ಕೂಡಲೇ ಗಂಡನ ಮನೆಯಲ್ಲಿ ಸುಖವಾಗಿರುತ್ತಾಳೆ ಎಂದು ಭಾವಿಸಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ವಿವಾಹ ಮಾಡಲಾಗುತ್ತಿದ ಎಂದು ಅರ್ನಾಲ್ಡ್ ಹೇಳಿದ್ದಾರೆ. 

14ನೇ ವಯಸ್ಸಿನ ವಿವಾಹವಾದ ಹನೂರು ತಾಲೂಕಿನ ಶೀಲಾ, ಕೌಟುಂಬಿಕ ಕಾರಣದಿಂದ ಆಕೆಯ ಪತಿಗೆ ವಿಚ್ಚೇದನ ನೀಡಲು ಬಯಸಿದ್ದಾಳೆ. ಇದಕ್ಕಾಗಿ ಆಕೆಯ ಪೋಷಕರು ಕುಲಕ್ಕಾಗಿ 2 ಲಕ್ಷ ರೂ. ಪಾವತಿಸಬೇಕು. ಅವರಿಗೆ ಹಣ ಪಾವತಿಸಿದ್ದಲ್ಲಿ, ನನ್ನ ಪತಿ ನನನ್ನು ತೊರೆಯುತ್ತಾರೆ ಎಂದು ಆಕೆ ಹೇಳಿದಳು. ಹಳ್ಳಿಗಳಲ್ಲಿ ಕುಲ ಪದ್ದತಿಯೇ ಅಂತಿಮ. ಗ್ರಾಮ ಪಂಚಾಯಿತಿಗಳು ಇದಕ್ಕೆ ಯಾವುದೇ ನಿಯಮ ಮಾಡಿಲ್ಲ. ಶೇ. 30 ರಷ್ಟು ಬಾಲ್ಯ ವಿವಾಹಗಳು ಕುಲ ಪದ್ಧತಿ ಮೂಲಕ ಅಂತ್ಯವಾಗುತ್ತದೆ ಎಂದು ಐಎಂಎಜಿಇಯ ಸಿದ್ದರಾಜು ತಿಳಿಸಿದರು.

15ನೇ ವಯಸ್ಸಿನಲ್ಲಿ ವಿವಾಹವಾಗಿರುವ ಲತಾ(21) ಗೆ ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದಾರೆ. ಕೆಲ ತಿಂಗಳ ಹಿಂದೆ ಆಕೆಯ ಮದ್ಯ ವ್ಯಸನಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಏಕಾಂಗಿಯಾಗಿ ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾಳೆ. ಸರ್ಕಾರ, ಸಮುದಾಯ ಮತ್ತು ನ್ಯಾಯಾಲಯಗಳು ಈಗ ಈ ಸಾಮಾಜಿಕ ಅನಿಷ್ಟವನ್ನು ಕೊನೆಗೊಳಿಸಲು ಸಹಕರಿಸುತ್ತಿವೆ. ಈ ಆರಂಭಿಕ ವಿವಾಹಿತ ಮಹಿಳೆಯರಿಗೆ ಶಿಕ್ಷಣದ ಹೊರತಾಗಿ ಕೌಶಲ್ಯ ಮತ್ತು ವೃತ್ತಿಪರ ತರಬೇತಿಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸಿಆರ್‌ಟಿ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ಎನ್‌ವಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com