ಬೆಂಗಳೂರು: 20 ವರ್ಷಗಳ ಬಳಿಕ ನಗರದ ವರ್ತೂರು ಕೆರೆಯಲ್ಲಿ ವಲಸೆ ಹಕ್ಕಿಗಳಾದ ಯುರೇಷಿಯನ್ ಸ್ಪೂನ್ ಬಿಲ್, ಗಾಡ್ವಿಟ್, ನಾರ್ದರ್ನ್ ಶಾವೆಲರ್, ನಾರ್ದರ್ನ್ ಪಿನ್ಟೈಲ್ ಮತ್ತು ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿಗಳು ಕಾಣಿಸಿಕೊಂಡಿವೆ.
ALCON, ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ನ ಸೈಟ್ ಎಂಜಿನಿಯರ್ ಮನೋಜ್ ರಾಜ್ ಅರಸ್ ಮಾತನಾಡಿ, ಕೆರೆಯ ಪುನರುಜ್ಜೀವನಕ್ಕಾಗಿ ಬಿಡಿಎ ಸಂಸ್ಥೆಯಿಂದ ಕೆಲಸ ಮಾಡಿಸುತ್ತಿದ್ದು, 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಲಸೆ ಹಕ್ಕಿಗಳು ವರ್ತೂರು ಕೆರೆಗೆಯಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ಕೆರೆಯ ಜಾಗದಲ್ಲಿ ಸುಮಾರು 150 ಪಕ್ಷಿ ಪ್ರಬೇಧಗಳ ಛಾಯಾಚಿತ್ರಗಳನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೆರೆಯ ಮೇಲ್ಮೈಯಿಂದ ಒಂದು ಮೀಟರ್ ವರೆಗೆ ನೊರೆ ಇತ್ತು. ಸೀಸದ ಅಂಶವಿತ್ತು. ಈ ಮಾಲಿನ್ಯವರು ಪಕ್ಷಗಳ ವಲಸೆ ಚಕ್ರದ ಮೇಲೆ ಪರಿಣಾಮ ಬೀರಿತ್ತು. ಒಂದು ವರ್ಷದ ಹಿಂದೆ ಕೆರೆಯ ಪುನರುಜ್ಜೀವನ ಕಾರ್ಯ ಆರಂಭವಾದ ನಂತರ, ವಲಸೆ ಹಕ್ಕಿಗಳು ಮತ್ತು ಸ್ಥಳೀಯ ಪಕ್ಷಿಗಳು ಆಗಾಗ್ಗೆ ಕೆರೆಯ ಬಳಿ ಬರಲು ಪ್ರಾರಂಭಿಸಿವೆ ಎಂದು ತಿಳಿಸಿದ್ದಾರೆ.
ವರ್ತೂರು ರೈಸಿಂಗ್ನ ಸದಸ್ಯ ಜಗದೀಶ್ ರೆಡ್ಡಿ ಮಾತನಾಡಿ, ವಲಸೆ ಹಕ್ಕಿಗಳಷ್ಟೇ ಅಲ್ಲ, ಸ್ಥಳೀಯ ಪಕ್ಷಿಗಳೂ ಬರಲಾರಂಭಿಸಿವೆ. ನಮಗೆ ತಿಳಿದಂತೆ ಎರಡು ವರ್ಷಗಳಿಂದ ವಲಸೆ ಹಕ್ಕಿಗಳ ಚಟುವಟಿಕೆ ಸ್ಥಗಿತಗೊಂಡಿತ್ತು. ಸಾಕಷ್ಟು ಹೋರಾಟ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ಮಧ್ಯಪ್ರವೇಶದ ನಂತರ ಸರ್ಕಾರ ಆಸಕ್ತಿ ತೋರಿದ ನಂತರ ಬಿಡಿಎ ಕಾಯಕಲ್ಪ ಕಾರ್ಯವನ್ನು ಕೈಗೆತ್ತಿಕೊಂಡಿತು. ಇದೀಗ ಸ್ಥಳೀಯ ಹಾಗೂ ವಲಸೆ ಹಕ್ಕಿಗಳು ಕೆರೆಯ ಬಳಿ ಕಾಣಿಸಿಕೊಳ್ಳುತ್ತಿವೆ. ಗ್ರೇ ಹೆರಾನ್, ಪೇಂಟೆಡ್ ಸ್ಟೋರ್ಕ್, ಇಂಡಿಯನ್ ರಿವರ್ ಟರ್ನ್, ಬ್ಲ್ಯಾಕ್ ಹೆಡೆಡ್ ಐಬಿಸ್ ಮತ್ತು ಸೈಬೀರಿಯನ್ ಸ್ಟೋನ್ಚಾಟ್ ಮತ್ತು ಬಾತುಕೋಳಿಗಳಂತಹ ಪಕ್ಷಿಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಕೆರೆಯ ಕೆಲವು ಸ್ಥಳಗಳಲ್ಲಿ ಆಳವಿಲ್ಲ, ಹೀಗಾಗಿ ಅನೇಕ ಸಣ್ಣ ಪಕ್ಷಿಗಳನ್ನು ಕೆರೆ ಆಕರ್ಷಿಸುತ್ತದೆ. ಕೆರೆಯಲ್ಲಿ ಶೇ.70ರಷ್ಟು ಹೂಳು ತೆರವುಗೊಂಡಿದ್ದು, ಕೊಳಚೆ ನೀರು ಹರಿದು ಹೋಗಿದೆ. ಮಳೆಯಿಂದಾಗಿ ಕೆರೆಯ ಕೆಲ ಭಾಗಗಳು ತುಂಬಿದ್ದು, ಪಕ್ಷಿಗಳು ಕೆರೆಗೆ ವಾಪಸಾಗುತ್ತಿವೆ ಎಂದು ತಿಳಿಸಿದ್ದಾರೆ.
ಪಕ್ಷಿಗಳ ಮರಳುವಿಕೆಯನ್ನು ಬಹಳ ಮೊದಲೇ ನಿರೀಕ್ಷಿಸಿದ್ದೆವು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊಫೆಸರ್ ಟಿ ವಿ ರಾಮಚಂದ್ರ ಅವರು ಹೇಳಿದ್ದಾರೆ.
Advertisement