ಮಂಗಳೂರು: ಮಂಗಳೂರಿನ ಸಮುದ್ರದಲ್ಲಿ ಸರಕು ಸಾಗಾಣಿಕಾ ಹಡಗೊಂದು ಮುಳುಗಿದ ಪರಿಣಾಮ ತೈಲ ಸೋರಿಕೆ ಭೀತಿ ಎದುರಾಗಿದ್ದು, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಮಂಗಳೂರಿನ ಉಚ್ಛಿಲ ಭಟ್ಟಪಾಳಿ ಬಳಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಾಣೆ ಹಡಗಿನಿಂದ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ. ಈ ತಿಂಗಳ ಜೂ. 23 ರಂದು ಸಿರಿಯಾ ದೇಶದ ಎಂಬಿ ಪ್ರಿನ್ಸಸ್ ಮಿರಲ್ ವ್ಯಾಪಾರಿ ಹಡಗು ಮುಳುಗಿತ್ತು. ಹಡಗು ಚೀನಾದಿಂದ ಲೆಬನಾನ್ಗೆ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು. 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದಾಗ ಹಡಗಿನಲ್ಲಿ ತಾಂತ್ರಿಕ ದೋಷವುಂಟಾಗಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು.
ಭಾರತೀಯ ನೌಕಾಪಡೆ 15 ಮಂದಿ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈಗ ಹಡಗಿನಲ್ಲಿ ತೈಲ ಸೋರಿಕೆಯಾಗುವ ಭೀತಿ ಎದುರಾಗಿದ್ದು, ಮೀನುಗಳಿಗೆ ಅಪಾಯವಾಗುವ ಭೀತಿ ಎದುರಾಗಿದೆ. ತೈಲ ಸೋರಿಕೆಯಾಗುವ ಆತಂಕದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ನೌಕಾಪಡೆಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಲೆಬನಾನ್ಗೆ ಹೊರಟ್ಟಿದ ಹಡಗು ಏಕಾಏಕಿ ಮಂಗಳೂರಿಗೆ ಬಂದಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಮಂಗಳೂರು ಸಮುದ್ರತೀರ ಪ್ರವೇಶಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾದಳದಿಂದ ಈ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ. ತೈಲ ಸೋರಿಕೆಯಾದರೆ ಭಾರಿ ಪ್ರಮಾಣದ ಅಗ್ನಿಅನಾಹುತ ಸಂಭವಿಸುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೀಡುಬಿಟ್ಟಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಳುಗಿರುವ ಹಡಗಿನ ಸುತ್ತ ನೌಕಾಪಡೆಯ ಮಿನಿಜೆಟ್ ಸುತ್ತುತ್ತಿದೆ. ಒಂದು ವೇಳೆ ತೈಲ ಸೋರಿಕೆಯಾದರೆ ಮಾಹಿತಿ ರವಾನಿಸಲು ಜೆಟ್ ಸುತ್ತು ಹಾಕುತ್ತಿದೆ. ಕರಾವಳಿ ಕಾವಲು ಪಡೆ ಮತ್ತು ಸಂಪನ್ಮೂಲ ಏಜೆನ್ಸಿಗಳ 9 ಹಡಗುಗಳು, 3 ಕೋಸ್ಟ್ ಗಾರ್ಡ್ ವಿಮಾನಗಳು ಮಂಗಳೂರಿನ ಸಮುದ್ರ ಪ್ರದೇಶವನ್ನು ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಗಾಗಿ ಕಾರ್ಯದಲ್ಲಿವೆ.
ನೇತ್ರಾವತಿ ನದಿಯು ತೀರಕ್ಕೆ ಸಮೀಪದಲ್ಲಿ ನೆಲಸಿರುವ ಹಡಗಿನ ಸಮೀಪದಲ್ಲಿದೆ. ಆದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ, ಹಡಗಿನಿಂದ ತೈಲ ಸೋರಿಕೆಯಾದಾಗ ನದಿಯನ್ನು ತಡೆಯಲು ಗಾಳಿ ತುಂಬ ಬಹುದಾದ ಬೂಮ್ಗಳನ್ನು ಬಳಸಿ ನದಿಯ ಮುಖವನ್ನು ಸಮುದ್ರದ ಬದಿಯಿಂದ ಬ್ಯಾರಿಕೇಡ್ ಮಾಡಲಾಗಿದೆ. ಕೋಸ್ಟ್ ಗಾರ್ಡ್ ಮಾಲಿನ್ಯ ಪ್ರತಿಕ್ರಿಯೆ ತಂಡ ಮತ್ತು ತಜ್ಞರು ನಿರಂತರವಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಿದ್ದಾರೆ.
ಅಂತೆಯೇ ಒಂದು ವೇಳೆ ತೈಲ ಸೋರಿಕೆಯಾದರೆ ಕೈಗೊಳ್ಳ ಬೇಕಾದ ಕ್ರಮಗಳು ಮತ್ತು ಮಾಲಿನ್ಯ ಪ್ರತಿಕ್ರಿಯೆ ಮತ್ತು ತೀರ ರೇಖೆಯನ್ನು ಸ್ವಚ್ಛಗೊಳಿಸುವ ತರಬೇತಿ ಮತ್ತು ಅಣಕು ಡ್ರಿಲ್ಗ್ ಳನ್ನು ನಡೆಸುವ ಮೂಲಕ ಸಿಬ್ಬಂದಿಗಳು ಆಡಳಿತ ಮತ್ತು ಮಂಗಳೂರು ಬಂದರು ಪ್ರಾಧಿಕಾರಗಳಿಗೆ ಸಹಾಯ ಮಾಡುತ್ತಿದ್ದಾರೆ.
Advertisement