'ಚೀನಾ ಪ್ಲಸ್ ಒನ್' ತಂತ್ರವು ರಾಜ್ಯಕ್ಕೆ ಸಹಾಯ ಮಾಡುತ್ತದೆ’: ಸಿಎಂ ಬೊಮ್ಮಾಯಿ

ಕೋವಿಡ್-19 ನಂತರದ ಹಲವು ಸಂಸ್ಥೆಗಳು ಅಳವಡಿಸಿಕೊಂಡಿರುವ ಚೀನಾ-ಪ್ಲಸ್-ಒನ್ ತಂತ್ರವು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಗಳ ತರಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದರು.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಡೆಯುತ್ತಿರುವ ಸಿದ್ಧತೆಗಳು.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಡೆಯುತ್ತಿರುವ ಸಿದ್ಧತೆಗಳು.
Updated on

ಬೆಂಗಳೂರು: ಕೋವಿಡ್-19 ನಂತರದ ಹಲವು ಸಂಸ್ಥೆಗಳು ಅಳವಡಿಸಿಕೊಂಡಿರುವ ಚೀನಾ-ಪ್ಲಸ್-ಒನ್ ತಂತ್ರವು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಗಳ ತರಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಬುಧವಾರದಿಂದ ಆರಂಭವಾಗುವ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಚೀನಾ-ಪ್ಲಸ್-ಒನ್ ಅನೇಕ ಸಂಸ್ಥೆಗಳು ತಮ್ಮ ವ್ಯವಹಾರಗಳನ್ನು ಇತರ ದೇಶಗಳಿಗೆ ವೈವಿಧ್ಯಗೊಳಿಸಲು ಮತ್ತು ಚೀನಾದಲ್ಲಿ ಮಾತ್ರ ಹೂಡಿಕೆ ಮಾಡುವುದನ್ನು ತಪ್ಪಿಸಲು ಮಾಡುವ ವ್ಯಾಪಾರ ತಂತ್ರವಾಗಿದೆ. ಈ ತಂತ್ರವು ಭಾರತ, ವಿಯೆಟ್ನಾಂ, ದಕ್ಷಿಣ ಕೊರಿಯಾ ಮತ್ತು ತೈವಾನ್‌ಗೆ ಪ್ರಯೋಜನವನ್ನು ನೀಡುತ್ತದೆ, ಏಕೆಂದರೆ ಅನೇಕ ಕಂಪನಿಗಳು ಪರ್ಯಾಯ ಹೂಡಿಕೆಯ ತಾಣವನ್ನು ಹುಡುಕುತ್ತಿವೆ ಮತ್ತು ಕೇವಲ ಚೀನಾದಲ್ಲಿ ಮಾತ್ರ ಹೂಡಿಕೆ ಮಾಡುತ್ತಿಲ್ಲ. ಬೆಂಗಳೂರು ಜಾಗತಿಕ ಹೂಡಿಕೆದಾರರ ತಾಣವಾಗಿದೆ. ಉತ್ಪಾದನಾ ಪರಿಸರ ಉತ್ತಮವಾಗಿರುವುದರಿಂದ ಅನೇಕ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ ಮತ್ತು ರಾಜ್ಯವು ಐಟಿ/ಬಿಟಿ ಕ್ಷೇತ್ರಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಜಿಐಎಂ ಇಡೀ ವಿಶ್ವದ ಗಮನ ಸೆಳೆಯಲಿದ್ದು, ‘ಇನ್ವೆಸ್ಟ್ ಕರ್ನಾಟಕ’ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಿದೆ. “ನಾವು 5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು ಈಗಾಗಲೇ ರಾಜ್ಯ ಉನ್ನತ ಮಟ್ಟದ ಸಮಿತಿಯು 2.8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆಗೆ ಅನುಮತಿ ನೀಡಿದೆ. ಇದು ನಮ್ಮ ಹೂಡಿಕೆದಾರರಿಗೆ ನಮ್ಮ ಬದ್ಧತೆಯಾಗಿದೆ ಮತ್ತು ನಾವು ಹೂಡಿಕೆಯ ಪ್ರಮಾಣಪತ್ರವನ್ನು ವಿತರಿಸಲಿದ್ದೇವೆ. ನಾವು ಹೊಸ ಹೂಡಿಕೆದಾರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ಅನುಮತಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಅನೇಕ ಕೈಗಾರಿಕೆಗಳ ಕ್ಷೇತ್ರಗಳು ಬೆಂಗಳೂರಿನ ಹೊರಗೆ ಹೂಡಿಕೆ ಮಾಡಲು ಉತ್ಸುಕವಾಗಿವೆ ಮತ್ತು ಜಿಐಎಂ ಸಮಯದಲ್ಲಿ ಈ ಸಂಬಂಧ ವಿವರಗಳನ್ನು ನೀಡಲಾಗುತ್ತದೆ. ರಾಮನಗರ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಕಲಬುರಗಿ ಮತ್ತು ಮೈಸೂರಿನಲ್ಲಿ ಹೊಸ ಕೈಗಾರಿಕೆಗಳು ಬರಲಿವೆ, ಹೀಗಾಗಿ ‘ಬೆಂಗಳೂರಿನಾಚೆಗಿನ’ ಕನಸು ನನಸಾಗುತ್ತಿದೆ ಎಂದರು.

ಧಾರವಾಡದಲ್ಲಿ ಬರಲಿರುವ ಎಫ್‌ಎಂಸಿಜಿ ಕ್ಲಸ್ಟರ್‌ನಿಂದ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ದೊರೆಯಲಿದೆ, ಕಲಬುರಗಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜವಳಿ ಪಾರ್ಕ್‌ಗಳು, ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಮೈಸೂರಿನಲ್ಲಿ ಎಲೆಕ್ಟ್ರಾನಿಕ್ ಪಾರ್ಕ್ ಮತ್ತು ತುಮಕೂರಿನಲ್ಲಿ ರಕ್ಷಣಾ ಉತ್ಪಾದನಾ ಘಟಕಗಳು ಬರಲಿವೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com