ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಎಸ್‌ಐ ಮನೆಯಲ್ಲಿ ದರೋಡೆ ಮಾಡಿ, ಮಗನಿಗೆ ಗುಂಡು ಹಾರಿಸಿದ್ದ ಅಂತರರಾಜ್ಯ ದರೋಡೆಕೋರರ ಬಂಧನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆ ಲೂಟಿ ಮಾಡಿ ಆತನ ಮಗನಿಗೆ ಗುಂಡು ಹಾರಿಸಿದ್ದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಮೂವರು ಅಂತರರಾಜ್ಯ ದರೋಡೆಕೋರರನ್ನು ಮಂಗಳವಾರ ಬಂಧಿಸಲಾಗಿದೆ.
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆ ಲೂಟಿ ಮಾಡಿ ಆತನ ಮಗನಿಗೆ ಗುಂಡು ಹಾರಿಸಿದ್ದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಮೂವರು ಅಂತರರಾಜ್ಯ ದರೋಡೆಕೋರರನ್ನು ಮಂಗಳವಾರ ಬಂಧಿಸಲಾಗಿದೆ.

ಬಂಧಿತರನ್ನು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಬಹಿರಾಮ್ ನಗರದ ಆರಿಫ್ (35), ರಾಂಪುರ ಜಿಲ್ಲೆಯ ಮಿಲಾಕ್ ತಾಲೂಕಿನ ಚಿಂತಾಮನ್ ಖಾಟೆ ಗ್ರಾಮದ ನಿವಾಸಿ ಜಮ್‌ಶೆಡ್ ಖಾನ್ (27) ಮತ್ತು ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯ ಕದಿರಿ ಪಟ್ಟಣದ ಪಠಾಣ್ ಮೊಹಮ್ಮದ್ ಹ್ಯಾರಿಸ್ ಖಾನ್ (30) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಮೂರು ಬಂದೂಕುಗಳು, 46 ಗುಂಡುಗಳು, 3.41 ಲಕ್ಷ ನಗದು, ಚಿನ್ನದ ಸರ, 21 ಬೆಳ್ಳಿ ವಸ್ತುಗಳು ಮತ್ತು ಅಪರಾಧಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ನವೆಂಬರ್ 9 ರಂದು ಐವರು ದರೋಡೆಕೋರರ ತಂಡವು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ನಾರಾಯಣ ಸ್ವಾಮಿ ಅವರ ಮನೆಗೆ ನುಗ್ಗಿ ಅವರ ಮಗನಿಗೆ ಗುಂಡು ಹಾರಿಸಿ ಚಿನ್ನಾಭರಣ ಮತ್ತು ನಗದು ದೋಚಿತ್ತು.

ಎಎಸ್‌ಐ ನಾರಾಯಣಸ್ವಾಮಿ ಅವರ ಪುತ್ರ ಶರತ್ ಮೇಲೆ ದರೋಡೆಕೋರರು ಮೂರು ಸುತ್ತಿನ ಗುಂಡುಗಳನ್ನು ಹಾರಿಸಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.

ಮನೆಗೆ ನುಗ್ಗಿದ ದರೋಡೆಕೋರರು ನಾರಾಯಣಸ್ವಾಮಿ, ಅವರ ಪತ್ನಿ ಮತ್ತು ಸೊಸೆಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ನಾರಾಯಣಸ್ವಾಮಿಯನ್ನು ಮನೆಯಿಂದ ಹೊರಕ್ಕೆ ತಳ್ಳಿದ ಕಳ್ಳರು, ಘಟನೆಯನ್ನು ಯಾರಿಗಾದರೂ ಹೇಳಿದರೆ ಕುಟುಂಬಸ್ಥರನ್ನು ಹತ್ಯೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈವೇಳೆ ಮನೆಯಲ್ಲಿದ್ದ ಶರತ್ ತನ್ನ ಕುಟುಂಬ ಸದಸ್ಯರನ್ನು ರಕ್ಷಿಸಲು ಮುಂದಾದಾಗ ದರೋಡೆಕೋರರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಪಾರೆಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com