ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಸಿಲುಕಿಸುವುದಾಗಿ ಬೆದರಿಸಿ ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಗಳಪ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ತಮ್ಮದಲ್ಲದ ವ್ಯಾಪ್ತಿಯಾದ ಸಹಕಾರ ನಗರದಲ್ಲಿ ಬುಕ್ಕಿಗಳೆಂದು ಉದ್ಯಮಿ ಯೋಗೆಶ್ ಎಂಬುವರನ್ನ ಬೆದರಿಸಿ ಶಿವಕುಮಾರ್ 3 ಲಕ್ಷ ರೂ ಹಣ ಪಡೆದಿದ್ದರು. ಈ ಸಂಬಂಧ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ (ಡಿಸಿಪಿ) ಸಹಕಾರನಗರ ನಿವಾಸಿ ಉದ್ಯಮಿ ದೂರು ನೀಡಿದ್ದರು. ಪ್ರಾಥಮಿಕ ವಿಚಾರಣೆ ನಡೆಸುವಂತೆ ಎಸಿಪಿ ಶ್ರೇಣಿಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಇದೀಗ ಈ ತನಿಖಾ ವರದಿಯನ್ನು ಕೇಂದ್ರ ವಿಭಾಗದ ಡಿಸಿಪಿಗೆ ರವಾನಿಸಲಾಗಿದ್ದು, ಅವರ ವ್ಯಾಪ್ತಿಗೆ ಸದಾಶಿವನಗರ ಪೊಲೀಸ್ ಠಾಣೆ ಬರುತ್ತದೆ. ಐವರು ತಪ್ಪಿತಸ್ಥ ಪೊಲೀಸರು ಆ ಪ್ರದೇಶವು ತಮ್ಮ ವ್ಯಾಪ್ತಿಗೆ ಬರದಿದ್ದರೂ ಸ್ಥಳೀಯ ಪೊಲೀಸರು ಎಂದು ಹೇಳಿಕೊಂಡು ಉದ್ಯಮಿಯಿಂದ ಹಣವನ್ನು ದೋಚಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ.
ಅಮಾನತುಗೊಂಡ ಪೊಲೀಸರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಮತ್ತು ಮೂವರು ಕಾನ್ಸ್ಟಾಬ್ಯುಲರಿ ಶ್ರೇಣಿಯ ಸಿಬ್ಬಂದಿ ಸೇರಿದ್ದಾರೆ. ಸದಾಶಿವನಗರ ಪಿಎಸ್ ಐ ಮೋಹನ್ ಬಸವರಾಜು , ಎಸ್ ಬಿ ಕಾನ್ಸ್ಟೇಬಲ್ ಶಿವಕುಮಾರ್, ಕ್ರೈಂ ಸ್ಟಾಫ್ ಪರಶುರಾಮ್, ನಾಗರಾಜ್ ಸೇರಿದಂತೆ ಐವರನ್ನ ಹಿರಿಯ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ದಾಳಿಗೆ ಸಂಬಂಧಿಸಿದಂತೆ ನಾವು ಐವರು ಪೊಲೀಸರನ್ನು ಅಮಾನತುಗೊಳಿಸಿದ್ದೇವೆ ಮತ್ತು ವಿವರವಾದ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿಪಿ (ಕೇಂದ್ರ) ಆರ್ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಈ ಘಟನೆ ಕಳೆದ ತಿಂಗಳು ನಡೆದಿದೆ ಎನ್ನಲಾಗಿದ್ದು, ಪ್ರಾಥಮಿಕ ತನಿಖೆಯ ಫಲಿತಾಂಶದ ಮೇರೆಗೆ ಅಮಾನತು ಆದೇಶ ಹೊರಡಿಸಲಾಗಿದೆ.
Advertisement