ದೇಶಭಕ್ತ ಮುಸಲ್ಮಾನರು ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು: ಕೆಎಸ್ ಈಶ್ವರಪ್ಪ

ದೇಶಭಕ್ತ ಮುಸಲ್ಮಾನರು ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಅವರು ಕೊಲೆ ಮಾಡಲು ಹೋಗಿ ಅಥವಾ ಭಯೋತ್ಪಾದಕ ಸಂಘಟನೆ ಜೊತೆ ಸೇರಿ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
Updated on

ಶಿವಮೊಗ್ಗ: ದೇಶಭಕ್ತ ಮುಸಲ್ಮಾನರು ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಅವರು ಕೊಲೆ ಮಾಡಲು ಹೋಗಿ ಅಥವಾ ಭಯೋತ್ಪಾದಕ ಸಂಘಟನೆ ಜೊತೆ ಸೇರಿ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ, 'ಶಿವಮೊಗ್ಗ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಲೂ ಇಬ್ಬರು ಶಂಕಿತರು ಯೋಜನೆ ಮಾಡಿಕೊಂಡಿದ್ದರು ಎನ್ನುವುದು ಆತಂಕಕಾರಿ‌. ಎಸ್ ಡಿಪಿಐ, ಪಿಎಫ್ ಐ ರಾಷ್ಟ್ರದ್ರೋಹಿ ಸಂಘಟನೆಗಳಾಗಿದ್ದು, ಮುಸ್ಲಿಂ ಯುವಕರನ್ನು ಇಸ್ಲಾಮಿಕ್ ಸ್ಟೇಟ್ಸ್ ಜೊತೆ ಸೇರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಮುಸ್ಲಿಂ ಸಮುದಾಯದ ಹಿರಿಯರು ಎಚ್ಚರಿಕೆ ವಹಿಸಬೇಕು. ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು. ರಾಷ್ಟ್ರಭಕ್ತರಾಗಬೇಕು. ರಾಷ್ಟ್ರದ್ರೋಹಿಗಳಿಗೆ ಬುದ್ದಿಹೇಳುವ ಕೆಲಸವನ್ನು ಮುಸ್ಲಿಂ ಸಮುದಾಯದ ಹಿರಿಯರು ಮಾಡಬೇಕು ಎಂದು ಹೇಳಿದರು.

ನಲಪಾಡ್ ಜೈಲಿಗೆ ಹೋಗಿ ಬಂದ ವ್ಯಕ್ತಿ: ಈತನ ಬಗ್ಗೆ ಕಾಂಗ್ರೆಸ್ ಮತ್ತೊಮ್ಮೆ ಯೋಚಿಸಬೇಕು!
ನಲಪಾಡ್ ಉದ್ಯೋಗವಿಲ್ಲದ ಕಾರಣದಿಂದ ಯುವಕರು ದುಷ್ಕೃತ್ಯಕ್ಕೆ ಇಳಿಯುತ್ತಿದ್ದಾರೆ ಎಂದಿದ್ದಾರೆ ಎಂದು ಹೇಳಿದ ಈಶ್ವರಪ್ಪ, ಕೇವಲ ಮುಸ್ಲಿಂ ಸಮುದಾಯದ ಯುವಕರು ಮಾತ್ರ ಇಂಥ ದುಷ್ಕೃತ್ಯದಲ್ಲಿ ತೊಡಗುತ್ತಾರೆ. ಬೇರೆ ಯಾವ ಯುವಕರು ಈ ರೀತಿಯ ಕೃತ್ಯಗಳಲ್ಲಿ‌ಭಾಗಿಯಾಗುವುದಿಲ್ಲ. ಈ ನಲಪಾಡ್ ಜೈಲಿಗೆ ಹೋಗಿಬಂದಿರುವ ವ್ಯಕ್ತಿ. ಈತ ಕಾಂಗ್ರೆಸ್ ನಾಯಕ. ಆತನನ್ನು ಕಾಂಗ್ರೆಸ್ ನಲ್ಲಿ ಇಟ್ಟುಕೊಳ್ಳುವ ಬಗ್ಗೆ ಕಾಂಗ್ರೆಸ್ ಇನ್ನೊಮ್ಮೆ ಆಲೋಚಿಸಬೇಕು ಎಂದರು. 

ಸರ್ವಾಧಿಕಾರಿ ಧೋರಣೆ
ವಿಧಾನಸಭಾ ಅಭ್ಯರ್ಥಿಗಳ ಪಟ್ಟಿಯನ್ನು ನಾನೇ ತಯಾರಿಸುತ್ತೇನೆ. ಅದನ್ನು ಸಿದ್ದರಾಮಯ್ಯ ಅವರಿಗೂ ತೋರಿಸುವುದಿಲ್ಲ. ನೇರವಾಗಿ ಸೋನಿಯಾ ಗಾಂಧಿಗೆ ಕಳುಹಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಇದನ್ನು ಅವರ ಪಕ್ಷದ ಇನ್ನೊಂದು ಗುಂಪಿನವರೇ ವಿರೋಧಿಸುತಿದ್ದಾರೆ. ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಅವರೇ ಈ ರೀತಿಯ ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಹೇಳುತಿದ್ದಾರೆ. ಕಾಂಗ್ರೆಸ್ ಪಕ್ಷದ ವಿಭಜನೆಗೆ ಸಿದ್ದರಾಮೋತ್ಸವ ಕಾರಣವಾಗಿದೆ ಎಂದರು.

ಪೇಸಿಎಂ ವಿವಾದ: ಕಾಂಗ್ರೆಸ್ಸಿಗರು ರಾಜಕಾರಣಕ್ಕೆ ಯೋಗ್ಯರಲ್ಲ
ಇಷ್ಟು ನೀಚಮಟ್ಟದ ರಾಜಕಾರಣಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಒಬ್ಬ ಸಿಎಂ ಬಗ್ಗೆ ಪೆಸಿಎಂ ಎಂಬ ಅಭಿಯಾನ ಮಾಡುವ ಮೂಲಕ ನೀಚ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ಸಿಗರು ರಾಜಕಾರಣ ಮಾಡಲು ಯೋಗ್ಯರಲ್ಲ. ಪೆಸಿಎಂ ಪೋಸ್ಟರ್ ಹಂಚುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ಸಿಗರು ಹೇಳಬೇಕಿತ್ತು. ಆದರೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಪೇಸಿಎಂ ಪೋಸ್ಟರ್ ಹಂಚುವ ಮೂಲಕ ಯುವ ಕಾಂಗ್ರೆಸ್ ಗಿಂತಲೂ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿ ಪದವಿಗೆ ಕಾಂಗ್ರೆಸ್ಸಿಗರು ಅಪಮಾನ ಮಾಡುತಿದ್ದಾರೆ.

ಕಾಂಗ್ರೆಸ್ ನ ಚೇಲ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಲ್ಲರಿಗೂ ದೂರು ನೀಡಿದ ಆದರೆ ಎಲ್ಲಿಯೂ ಸಾಬೀತಾಗಿಲ್ಲ. ಕಾಂಗ್ರೆಸ್ಸಿಗರು ಬುಡುಬುಡುಕೆ ಆಟ ನಿಲ್ಲಿಸಬೇಕು. ಖಾಲಿ ಡಬ್ಬ ಅಲ್ಲಾಡಿಸಿ ಶಬ್ಧ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅಥವಾ ಅವರ ಬಾಸ್ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ದಾಖಲೆ‌ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು 40 ಪರ್ಸೆಂಟ್ ಎಂದು ಹೇಳಿಕೊಂಡು ಬರುವುದು ಸರಿಯಲ್ಲ. ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕಿತ್ತು ಎಂದು ಈಶ್ವರಪ್ಪ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com