
ಡಾ ಕೆ ಸುಧಾಕರ್
ಬೆಂಗಳೂರು: ಇಥೋಪಿಯಾದಿಂದ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಪಿಎಲ್ಡಿ ಬ್ಯಾಂಕ್ನ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಸುಧಾಕರ್ ಅವರು, 'ಇಥೋಪಿಯಾದಿಂದ ಬಂದ ವ್ಯಕ್ತಿಯ ಮಂಕಿಪಾಕ್ಸ್ ಟೆಸ್ಟಿಂಗ್ ವರದಿ ಬಂದಿದ್ದು ನೆಗೆಟಿವ್ ಎಂದು ತಿಳಿದುಬಂದಿದೆ. ಸೋಂಕಿನ ಲಕ್ಷಣಗಳಿತ್ತಾದರೂ ಅದು ಸ್ಮಾಲ್ ಪಾಕ್ಸ್ (ಚಿಕನ್ ಪಾಕ್ಸ್) ಆಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ ಮಂಕಿಪಾಕ್ಸ್ ಬಂದಿಲ್ಲ. ರಾಜ್ಯದ ಗಡಿಗಳು ಸೇರಿದಂತೆ ವಿಮಾನ ನಿಲ್ದಾಣ, ಪೋರ್ಟ್ ಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. 24 ಗಂಟೆಗಳ ಮುಂಜಾಗೃತೆ ವಹಿಸಲಾಗಿದೆ. ಮೂರು ಪಾಳಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಮಂಕಿಪಾಕ್ಸ್ ಕಾಣಿಸಿದೆ. ಆದ್ರೆ ರಾಜ್ಯ ಪ್ರವೇಶ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಕಿಪಾಕ್ಸ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಕಾರ್ಯಪಡೆ ರಚಿಸಿದ ಕೇಂದ್ರ ಸರ್ಕಾರ
ಮಂಕಿಪಾಕ್ಸ್ ಮುನ್ನೆಚ್ಚರಿಕೆ ಹಿನ್ನೆಲೆ ಕರ್ನಾಟಕದಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಸೋಂಕು ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಬೆಂಗಳೂರು, ಮಂಗಳೂರು ಏರ್ ಪೋರ್ಟ್ಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಶೀತ- ಜ್ವರ, ತಲೆನೋವು, ಸ್ನಾಯು ಸೆಳೆತ, ಆಯಾಸ, ಗಂಟಲು ಕೆರೆತ, ಕೆಮ್ಮು, ಚರ್ಮ ತುರಿಕೆ ಲಕ್ಷಣಗಳು ಕಂಡು ಬರುವ ಪ್ರಯಾಣಿಕರಿಗೆ ತಪಾಸಣೆ ತಪಾಸಣೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ: ಮಂಕಿಪಾಕ್ಸ್ ಕಾಯಿಲೆ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿ ಸಾವು
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಆಫ್ರಿಕನ್ ಜುಲೈ 4 ರಂದು ಇಥಿಯೋಪಿಯಾದಿಂದ ಬಂದಿದ್ದರು. ಅವರು ಡಯಾಲಿಸಿಸ್ ಮತ್ತು ಪೂರ್ವ ಕಸಿ ಮೌಲ್ಯಮಾಪನಕ್ಕೆ ಒಳಗಾಗುತ್ತಿದ್ದರು. ಗಾಯಗಳು ಸೇರಿದಂತೆ ಮಂಕಿಪಾಕ್ಸ್ನ ಲಕ್ಷಣಗಳು ಅವರಿಗೆ ಕಾಣಿಸಿಕೊಂಡಿದ್ದರಿಂದ ಅವರ ರಕ್ತ ಮತ್ತು ಚರ್ಮದ ಗಾಯಗಳ ಮಾದರಿಗಳನ್ನು ಗುರುವಾರ ಸಂಜೆ BMCRI ಯ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದ ಮೂಲಕ NIV ಪುಣೆಗೆ ಕಳುಹಿಸಲಾಗಿತ್ತು. ಅವರನ್ನು ಅದೇ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಯಿತು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಂಕಿಪಾಕ್ಸ್ ಪತ್ತೆಗೆ 'ಒಳಚರಂಡಿ ಕಣ್ಗಾವಲು': ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು
ಅಂತೆಯೇ ಸೋಂಕಿತ ವ್ಯಕ್ತಿಯ ಸಹೋದರ ಹಾಗೂ ಸೋದರ ಸಂಬಂಧಿಯೊಬ್ಬರ ಮೇಲೆ ನಿಗಾ ಇಡಲಾಗಿದೆ. VRDL ನಲ್ಲಿ ರಾಜ್ಯದ ಯಾವುದೇ ಭಾಗದಿಂದ ಶಂಕಿತ ಪ್ರಕರಣಗಳ ಯಾವುದೇ ಮಾದರಿಗಳನ್ನು ಸ್ವೀಕರಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇಥಿಯೋಪಿಯನ್ ಚಿಕನ್ಪಾಕ್ಸ್ಗೆ ತುತ್ತಾಗುತ್ತಿರುವ ಬಗ್ಗೆ ಕೇಳಿದಾಗ, ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಮತ್ತು ಡಯಾಲಿಸಿಸ್ಗೆ ಒಳಗಾಗುತ್ತಿರುವುದರಿಂದ ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ. ಅವರು ತಮ್ಮ ಜೀವನದಲ್ಲಿ ಮೊದಲೇ ಚಿಕನ್ಪಾಕ್ಸ್ಗೆ ತುತ್ತಾಗಿರಬಹುದು ಮತ್ತು ವೈರಸ್ ಈಗ ಪ್ರಕಟವಾಗಿರಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: monkeypox: ಮಂಕಿಪಾಕ್ಸ್ ಹರಡುವಿಕೆ ತಡೆಗೆ ಆರಂಭಿಕ ಹಂತದಲ್ಲೇ ಸೋಂಕಿನ ಸರಪಳಿ ಮುರಿಯುವುದು ನಿರ್ಣಾಯಕ: ತಜ್ಞರು
ರಾಜ್ಯದಲ್ಲಿ ಮಂಗನ ಕಾಯಿಲೆಯ ಎರಡನೇ ಶಂಕಿತ ಪ್ರಕರಣ ಇದಾಗಿದ್ದು, ಇಬ್ಬರ ಪರೀಕ್ಷೆಯೂ ನೆಗೆಟಿವ್ ಆಗಿದೆ. ಈ ಹಿಂದೆ, ಬ್ರಿಟನ್ಗೆ ಪ್ರಯಾಣದ ಇತಿಹಾಸ ಹೊಂದಿರುವ ಬೆಂಗಳೂರಿನ ಇನ್ನೊಬ್ಬ ವ್ಯಕ್ತಿಯ ವರದಿ ನೆಗೆಟಿವ್ ಬಂದಿತ್ತು. ಮಂಕಿಪಾಕ್ಸ್ ಪೀಡಿತ ದೇಶಗಳಿಂದ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಎಲ್ಲಾ ರೋಗಲಕ್ಷಣದ ಪ್ರಯಾಣಿಕರಿಗೆ ಜ್ವರ, ನೆಗಡಿ, ಬೆವರು, ದುಗ್ಧರಸ ಗ್ರಂಥಿಗಳ ಊತ, ತಲೆನೋವು, ಸ್ನಾಯು ನೋವು, ನಿಶ್ಯಕ್ತಿ, ಗಂಟಲು ನೋವು, ಕೆಮ್ಮು ಅಥವಾ ಚರ್ಮದ ದದ್ದುಗಳು ಮತ್ತು ದದ್ದುಗಳಿಗಾಗಿ ತಪಾಸಣೆ ನಡೆಸಲಾಗುತ್ತಿದೆ. ಅವರನ್ನು ಪ್ರತ್ಯೇಕಿಸಿ ಪರೀಕ್ಷಿಸಲಾಗುತ್ತದೆ ಎಂದು ಡಾ ಸುಧಾಕರ್ ಹೇಳಿದರು.