ಬೆಂಗಳೂರು: ಎಲ್ಲೆಂದರಲ್ಲಿ ತ್ರಿವರ್ಣ ಧ್ವಜ ಎಸೆಯುವುದನ್ನು ತಡೆಯಲು ವಿವಿಧ ಸಂಘಟನೆಗಳಿಂದ ಧ್ವಜ ಸಂಗ್ರಹಣೆ!

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮನೆಗಳಲ್ಲಿ ಹಾರಿಸಿದ್ದ ಧ್ವಜಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಬೆಂಗಳೂರಿನಾದ್ಯಂತ ವಿವಿಧ ಸಂಘಟನೆಗಳು ಧ್ವಜ ಸಂಗ್ರಹಣೆಯ ಕಾರ್ಯವನ್ನು ಮಾಡುತ್ತಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮನೆಗಳಲ್ಲಿ ಹಾರಿಸಿದ್ದ ಧ್ವಜಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಬೆಂಗಳೂರಿನಾದ್ಯಂತ ವಿವಿಧ ಸಂಘಟನೆಗಳು ಧ್ವಜ ಸಂಗ್ರಹಣೆಯ ಕಾರ್ಯವನ್ನು ಮಾಡುತ್ತಿವೆ. 76ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಗರದಾದ್ಯಂತ ‘ಹರ್ ಘರ್ ತಿರಂಗ’ ಅಭಿಯಾನದ ಅಡಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿತ್ತು.

ಯೂತ್ ಫಾರ್ ಪರಿವರ್ತನ್ ಸಂಸ್ಥಾಪಕ ಅಮಿತ್ ಅಮರನಾಥ್ ಮಾತನಾಡಿ, ಜನರಲ್ಲಿ ಮೂಲಭೂತ ನಾಗರಿಕ ಪ್ರಜ್ಞೆಯ ಕೊರತೆಯೇ ಪ್ರಾಥಮಿಕ ಸಮಸ್ಯೆಯಾಗಿದೆ. ಒಂದು ದಿನ ಧ್ವಜಾರೋಹಣ ಮಾಡಿ ಪೂಜಿಸಿದರೆ ಮರುದಿನ ರಸ್ತೆಗಳಲ್ಲಿ ಬಿಸಾಡುತ್ತಾರೆ. ತ್ರಿವರ್ಣ ಧ್ವಜವು ರಾಷ್ಟ್ರದ ಗುರುತಿನ ಭಾಗವಾಗಿದೆ ಮತ್ತು ಎಲ್ಲಾ ದಿನಗಳಲ್ಲಿಯೂ ಅದಕ್ಕೆ ಗೌರವ ನೀಡಬೇಕು. ಹೀಗಾಗಿ, 'ಹರ್ ಘರ್ ತಿರಂಗ' ಅಭಿಯಾನದ ನಂತರ, ಧ್ವಜಗಳ ಸರಿಯಾದ ವಿಲೇವಾರಿ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ತ್ರಿವರ್ಣ ಧ್ವಜ ಸಂಗ್ರಹ ಅಭಿಯಾನವು ಒಂದು ವಾರದವರೆಗೆ ಮುಂದುವರಿಯಲಿದ್ದು, ಬನಶಂಕರಿ, ಜೆಪಿ ನಗರ, ವಿಜಯನಗರ, ಜಯನಗರ 9 ಮತ್ತು 4ನೇ ಬ್ಲಾಕ್ ಮತ್ತು ಉತ್ತರಹಳ್ಳಿಯ ಸಂಗ್ರಹಣಾ ಕೇಂದ್ರಗಳಿಗೆ ಧ್ವಜಗಳನ್ನು ನೀಡಬಹುದು. ಈ ಅಭಿಯಾನ ಆರಂಭಿಸಿದ ಮೊದಲ ದಿನ ಕೆಲವೇ ಗಂಟೆಗಳ ನಂತರ ಹಲವು ಕರೆಗಳು ಬಂದಿವೆ ಎಂದು ಸಂಸ್ಥೆ ಹೇಳಿದೆ.

ಇಂಡಿಯನ್ ಆಯಿಲ್ ಕೂಡ ಧ್ವಜ ಸಂಗ್ರಹಣಾ ಅಭಿಯಾನವನ್ನು ಪ್ರಾರಂಭಿಸಿದ್ದು, ಜನರು ಹತ್ತಿರದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ಗಳಲ್ಲಿ ಅನಗತ್ಯ ಧ್ವಜಗಳನ್ನು ವಿಲೇವಾರಿ ಮಾಡಬಹುದು. ಆದರೆ, ಧ್ವಜ ವಿಲೇವಾರಿ ಮಾಡಲು ಬಂದ ಹಲವು ಜನರನ್ನು ಪೆಟ್ರೋಲ್ ಪಂಪ್‌ನಿಂದ ವಾಪಸ್ ಕಳುಹಿಸಲಾಗಿದ್ದು, ಈ ಕ್ರಮವು ಮುಂಬೈನಲ್ಲಿ ಮಾತ್ರ ನಡೆಯುತ್ತಿದೆಯೇ ಹೊರತು ಬೆಂಗಳೂರಿನಲ್ಲಿ ಅಲ್ಲ ಎಂದು ಹೇಳಿ ನಾಗರಿಕರಲ್ಲಿ ಗೊಂದಲ ಮೂಡಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ನಂತರ ತ್ರಿವರ್ಣ ಧ್ವಜಗಳ ವಿಲೇವಾರಿಗೆ ಸರ್ಕಾರವು ನಾಗರಿಕರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದು ಹೇಳಿದರು.

ತ್ರಿವರ್ಣ ಧ್ವಜಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಹೇಗೆ ಎಂದು ಜನರಿಗೆ ಮುಂಚಿತವಾಗಿಯೇ ತಿಳಿಸಬೇಕಿತ್ತು. ಬೀಯಿಂಗ್ ಸೋಶಿಯಲ್ (Being Social) ಧ್ವಜ ಸಂಗ್ರಹಣೆಗಾಗಿ ನೆಕ್ಸಸ್ ಕೋರಮಂಗಲದೊಂದಿಗೆ (Nexus Koramangala) ಸಹಕರಿಸುತ್ತಿದೆ.

ಬೀಯಿಂಗ್ ಸೋಶಿಯಲ್ ಸಂಸ್ಥಾಪಕ ಪ್ರವೀಣ್ ಶುಕ್ಲಾ ಮಾತನಾಡಿ, 'ಧ್ವಜ ಸಂಹಿತೆಯ ಪ್ರಕಾರ ಧ್ವಜಗಳನ್ನು ವಿಲೇವಾರಿ ಮಾಡಲಾಗುವುದು. ಜನರು ತಮ್ಮ ಧ್ವಜಗಳನ್ನು ಇಲ್ಲಿ ನೀಡಬಹುದು. ಭೇಟಿ ನೀಡಲು ಸಾಧ್ಯವಾಗದವರು ಕರೆ ಮಾಡಿ ಧ್ವಜಗಳನ್ನು ಸಂಗ್ರಹಿಸಲು ಕೇಳಬಹುದು. ಸಂಸ್ಥೆಯ ಸ್ವಯಂಸೇವಕರು ಅವುಗಳನ್ನು ನೆಕ್ಸಸ್ ಕೋರಮಂಗಲಕ್ಕೆ ಕಳುಹಿಸುತ್ತಾರೆ' ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com