ಮಡಿಕೇರಿ: ಮೇಯುತ್ತಾ ತನ್ನ ಎಸ್ಟೇಟ್ ಗೆ ನುಗ್ಗಿದ ಹಸುಗಳ ಗುಂಡಿಟ್ಟು ಕೊಂದ ಮಾಲೀಕ

ಹುಲ್ಲು ಮೇಯುತ್ತಾ ತನ್ನ ಹೊಲಕ್ಕೆ ನುಗ್ಗಿದ ಕಾರಣಕ್ಕೇ ಮಡಿಕೇರಿಯ ಎಸ್ಟೇಟ್ ಮಾಲೀಕರೊಬ್ಬರು ಎರಡು ಹಸುಗಳನ್ನು ಗುಂಡಿಟ್ಟು ಕೊಂದು ಹಾಕಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಹಸುಗಳ ಸಾವು
ಹಸುಗಳ ಸಾವು

ಮಡಿಕೇರಿ: ಹುಲ್ಲು ಮೇಯುತ್ತಾ ತನ್ನ ಹೊಲಕ್ಕೆ ನುಗ್ಗಿದ ಕಾರಣಕ್ಕೇ ಮಡಿಕೇರಿಯ ಎಸ್ಟೇಟ್ ಮಾಲೀಕರೊಬ್ಬರು ಎರಡು ಹಸುಗಳನ್ನು ಗುಂಡಿಟ್ಟು ಕೊಂದು ಹಾಕಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ಕೊಡಗಿನ ಗುಹ್ಯ ಗ್ರಾಮದಲ್ಲಿ ಎಸ್ಟೇಟ್ ಮಾಲೀಕರಾದ ನರೇಂದ್ರ ಎಂಬುವವರು ಗುಂಡಿಕ್ಕಿ ಎರಡು ಹಸುಗಳನ್ನು ಕೊಂದಿದ್ದಾರೆ. ಪ್ರಸ್ತುತ ಆರೋಪಿ ತಲೆಮರೆಸಿಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಗ್ರಾಮದ ನಿವಾಸಿ ಸಿ.ಕೆ.ಮಣಿ ಹಸುಗಳ ಮಾಲೀಕರಾಗಿದ್ದು, ಹಲವು ಹಸುಗಳನ್ನು ಸಾಕಿದ್ದಾರೆ. ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. 

ಸೋಮವಾರ ರಾತ್ರಿ ಮಣಿ ಒಡೆತನದ ಮೂರು ಹಸುಗಳು ಮೇಯಿಸಿ ಮನೆಗೆ ಹಿಂತಿರುಗಿರಲಿಲ್ಲ. ಆದರೆ, ಒಂದು ಹಸು ತಡರಾತ್ರಿ ಮನೆಗೆ ಮರಳಿದ್ದು, ಹಸು ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ಹಸುವಿಗೆ ಗುಂಡು ತಗುಲಿದ್ದು, ನಂತರ ಚಿಕಿತ್ಸೆ ನೀಡಲಾಗಿದೆ. ಮರುದಿನ, ಮಣಿ ತನ್ನ ಇತರ ಎರಡು ಹಸುಗಳು ಪಕ್ಕದ ಎಸ್ಟೇಟ್‌ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಪಡೆದರು. ಮಣಿ ಅವರು ಹುಡುಕಾಟ ಕಾರ್ಯಾಚರಣೆಗೆ ಹೋದಾಗ, ಎಸ್ಟೇಟ್ ಮಾಲೀಕ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್‌ನಲ್ಲಿ ಹಸುಗಳ ದೇಹ ಪತ್ತೆಯಾಗಿದೆ. ಹಸುಗಳ ದೇಹದ ಮೇಲೆ ಗುಂಡಿನ ಗುರುತುಗಳಿದ್ದು, ತನ್ನ ಹಸುಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಮಣಿ ಆರೋಪಿಸಿದ್ದಾರೆ.

ಕೂಡಲೇ ಆರೋಪಿ ನರೇಂದ್ರ ನಾಯ್ಡು ವಿರುದ್ಧ ಮಣಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನರೇಂದ್ರ ತನ್ನ ಎಸ್ಟೇಟ್‌ಗೆ ಆಕಸ್ಮಿಕವಾಗಿ ಬಂದ ಎರಡು ಹಸುಗಳನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. 

ಏತನ್ಮಧ್ಯೆ, ಆರೋಪಿ ನರೇಂದ್ರ ಈ ಹಿಂದೆಯೂ ಕೂಡ ಪ್ರಾಣಿ ಹಿಂಸೆಯಲ್ಲಿ ತೊಡಗಿದ್ದನೆಂದು ಗ್ರಾಮಸ್ಥರು ಹೇಳಿದ್ದಾರೆ, ಈ ಹಿಂದೆ ತನ್ನ ಎಸ್ಟೇಟ್ ಗೆ ಬಂದಿದ್ದ ಎರಡು ಹಸುಗಳನ್ನು ಕಟ್ಟಿಹಾಕಿದ್ದ ನರೇಂದ್ರ ಎರಡು ದಿನಗಳ ಕಾಲ ಅವುಗಳಿಗೆ ಆಹಾರ ಮತ್ತು ನೀರು ನೀಡದೆ ಕೌರ್ಯ ಮೆರೆದಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com