social_icon

ವಿಶೇಷಚೇತನ ಮಕ್ಕಳಿಗೆ ಕೌಶಲ್ಯ ತರಬೇತಿ: ಸ್ವಚ್ಛ ಭಾರತ, ಆತ್ಮನಿರ್ಭರ ಕನಸಿಗೆ 'ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್' ಸಂಸ್ಥೆ ಪ್ರೇರಣೆ

ಮಣ್ಣನ್ನು ಉಳಿಸಿ, ಸ್ವಚ್ಛ ಭಾರತ, ಆತ್ಮನಿರ್ಭರ... ಇವೆಲ್ಲವೂ ಇಲ್ಲಿ ಕೇವಲ ಘೋಷಣೆಯಲ್ಲ. ಕೊಡಗು ಜಿಲ್ಲೆಯ ಪೊಲ್ಲಿಬೆಟ್ಟದಲ್ಲಿರುವ ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್ ಈ ಘೋಷಣೆಗಳನ್ನು ಕಾರ್ಯರೂಪಕ್ಕೆ ತಂದು, ವಿಶೇಷ ಸಾಮರ್ಥ್ಯವುಳ್ಳವರಿಗೆ, ಬೌದ್ಧಿಕ ವಿಕಲಾಂಗತೆ ಹೊಂದಿರುವ ಮಕ್ಕಳಿಗೆ ನೆರವಾಗುತ್ತಿದೆ.

Published: 04th December 2022 01:53 PM  |   Last Updated: 05th December 2022 04:00 PM   |  A+A-


Cheshire Homes India Coorg (CHIC), in Pollibetta of Kodagu district.

ಚೆಶೆರ್ ಹೋಮ್ಸ್ ಇಂಡಿಯಾ ಕೂರ್ಗ್

Posted By : manjula
Source : The New Indian Express

ಮಡಿಕೇರಿ: ಮಣ್ಣನ್ನು ಉಳಿಸಿ, ಸ್ವಚ್ಛ ಭಾರತ, ಆತ್ಮನಿರ್ಭರ... ಇವೆಲ್ಲವೂ ಇಲ್ಲಿ ಕೇವಲ ಘೋಷಣೆಯಲ್ಲ. ಕೊಡಗು ಜಿಲ್ಲೆಯ ಪೊಲ್ಲಿಬೆಟ್ಟದಲ್ಲಿರುವ ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್ ಈ ಘೋಷಣೆಗಳನ್ನು ಕಾರ್ಯರೂಪಕ್ಕೆ ತಂದು, ವಿಶೇಷ ಸಾಮರ್ಥ್ಯವುಳ್ಳವರಿಗೆ, ಬೌದ್ಧಿಕ ವಿಕಲಾಂಗತೆ ಹೊಂದಿರುವ ಮಕ್ಕಳಿಗೆ ನೆರವಾಗುತ್ತಿದೆ.

2000 ರಲ್ಲಿ ಪ್ರಾರಂಭವಾದ ಈ ಕೇಂದ್ರವು ವಿಶೇಷ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ಆರ್ಥಿಕವಾಗಿ ದುರ್ಬಲಗೊಂಡಿರುವ, ವಿಶೇಷ ಸಾಮರ್ಥ್ಯವುಳ್ಳವರಿಗೆ, ಬೌದ್ಧಿಕ ವಿಕಲಾಂಗತೆ ಹೊಂದಿರುವ ಮಕ್ಕಳಿಗೆ ಉಚಿತವಾಗಿ ನೀಡುತ್ತಿದೆ. ಈ ಮೂಲಕ ವಿಶೇಷ ಸಾಮರ್ಥ್ಯವುಳ್ಳ ಜನರ ಜೀವನವನ್ನು ರೂಪಿಸಲು ನೆರವಾಗುತ್ತಿದೆ.

ಶಿಕ್ಷಣದ ಜೊತೆಗೆ, ವೃತ್ತಿಪರ ತರಬೇತಿಗಳನ್ನೂ ಮಕ್ಕಳಿಗೆ ಈ ಕೇಂದ್ರ ನೀಡುತ್ತಿದೆ. ಪ್ಲಾಸ್ಟಿಕ್, ಬಟ್ಟೆ, ಕಾಗದವನ್ನು ಮರುಬಳಕೆ ಮಾಡುವುದು ಮತ್ತು ಪರಿಸರ ಸ್ನೇಹಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ತರಬೇತಿಯನ್ನು ನೀಡುತ್ತಿದೆ.

ಉಪಾಧ್ಯಕ್ಷೆ ಪುನಿತಾ ಅಮಸ್ವಾಮಿ, ಗೌರವ ಕಾರ್ಯದರ್ಶಿ ಆಶಾ ಸುಬ್ಬಯ್ಯ

ಸಂಸ್ಥೆಯ ಅಧ್ಯಕ್ಷೆ ಗೀತಾ ಚೆಂಗಪ್ಪ ಅವರು ಮಾತನಾಡಿ, ಸಂಸ್ಥೆಯು ಚೆಶರ್ ರಾಷ್ಟ್ರೀಯ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ನಮ್ಮದು ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ರಾಷ್ಟ್ರೀಯ ಕೌನ್ಸಿಲ್ ಅನ್ನು ಬಲಪಡಿಸುವುದನ್ನು ಬೆಂಬಲಿಸುತ್ತದೆ ಇದರಿಂದ ನಾವು ಭಾರತದಲ್ಲಿ ಅಂಗವಿಕಲರನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆಂದು ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಪ್ರಕೃತಿ ಮೇಲಿನ ಪ್ರೀತಿ ಹುಟ್ಟುಹಾಕಿದ ದಿನಗೂಲಿ ಕಾರ್ಮಿಕನಿಗೆ 'ಪರಿಸರ ಸಂರಕ್ಷಣೆ ಪ್ರಶಸ್ತಿ'!

ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಬೆಂಬಲ ಸಿಗುತ್ತಿದೆ. ಸರ್ಕಾರವು ವಾರ್ಷಿಕವಾಗಿ 19 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ನಮಗೆ ಬೆಂಬಲ ನೀಡುತ್ತಿದೆ. ಆದಾಗ್ಯೂ, ಸಂಸ್ಥೆಗೆ ಸರಾಸರಿ 40 ಲಕ್ಷದಿಂದ 50 ಲಕ್ಷ ರೂ.ಗಳ ಅಗತ್ಯವಿದೆ, ಇದನ್ನು ವಿವಿಧ ದಾನಿಗಳ ಮೂಲಕ ಸಂಗ್ರಹಿಸಲಾಗುತ್ತದೆ. ಸಂಸ್ಥೆಯು ಹೆಚ್ಚಾಗಿ ಬಡ ಆರ್ಥಿಕ ಹಿನ್ನೆಲೆಯುಳ್ಳ ಜನರನ್ನು ಪೋಷಿಸುತ್ತಿದೆ ಎಂದು ತಿಳಿಸಿದ್ದಾರೆ.

ವಿಶೇಷಚೇತನರಿಗರುವ ಬಹುತೇಕ ಶಾಲೆಗಳು ವಸತಿಯದ್ದಾಗಿದ್ದರೂ, ನಮ್ಮದು ಡೇ ಕೇರ್ ಕೇಂದ್ರ (ಒಂದು ದಿನದ ಆರೈಕೆ ಕೇಂದ್ರ)ವಾಗಿದೆ. ಪ್ರತಿ ದಿನ, ಐದು ಶಾಲಾ ವ್ಯಾನ್‌ಗಳು (ಬಾಡಿಗೆಗೆ ಪಡೆದದ್ದು) ವಿದ್ಯಾರ್ಥಿಗಳನ್ನು ಕರೆತರುವುದು ಹಾಗೂ ಅವರನ್ನು ಪೋಷಕರಿರುವ ಸ್ಥಳಗಳಿಗೆ ಬಿಡುವ ಕೆಲಸವನ್ನು ಮಾಡುತ್ತಿದೆ. ವಾಹನಗಳ ವ್ಯವಸ್ಥೆಗೆ ರೂ.13 ಲಕ್ಷ ವ್ಯಯಿಸುತ್ತಿದ್ದೇವೆ. ಇದನ್ನು ವಸತಿ ಸಂಸ್ಥೆಯನ್ನಾಗಿ ಮಾಡುವ ಇಚ್ಛೆ ನಮಗಿಲ್ಲ. ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಸಮುದಾಯ, ಪೋಷಕರು ಮತ್ತು ಸಮಾಜವು ಜವಾಬ್ದಾರರಾಗಬೇಕೆಂದು ನಾವು ಬಯಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರಂಭದಲ್ಲಿ ಕೇವಲ 6 ವಿದ್ಯಾರ್ಥಿಗಳೊಂದಿಗೆ ಸಂಸ್ಥೆ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಸಂಸ್ಥೆಯು ಸಮುದಾಯ ಆಧಾರಿತ ಪುನರ್ವಸತಿಯಲ್ಲಿ ತೊಡಗಿಸಿಕೊಂಡಿತ್ತು. ಬಳಿಕ ವಿರಾಜಪೇಟೆ ತಾಲೂಕಿನ ಪರಿಸ್ಥಿತಿಯನ್ನು ಅರಿಯಲು ಮುಂದಾಯಿತು. ಪ್ರತೀಯೊಂದು ಮನೆಯ ಬಾಗಿಲಿಗೂ ಹೋಗಿದ್ದೆವು. ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದೆವು. ಮಕ್ಕಳನ್ನು ಬಚ್ಚಿಡದಂತೆ ಮನವಿ ಮಾಡಿಕೊಂಡೆವು. ಸಂಸ್ಥೆಗೆ ಸೇರಿಸುವಂತೆ ತರಬೇತಿಗಳ ಕೊಡಿಸುವಂತೆ ಮನವಿ ಮಾಡಿಕೊಂಡೆವು. ನಂತರ ಪೊಲ್ಲಿಬಟ್ಟದ ಸಣ್ಣ ಕಟ್ಟಡದಲ್ಲಿ ಸಂಸ್ಥೆಯನ್ನು ಆರಂಭಿಸಲಾಯಿತು. ಈ ಕಾರ್ಯಕ್ರಮವನ್ನು ನಾವು ಸತತ 8 ವರ್ಷಗಳ ಕಾಲ ಮುಂದುವರೆಸಿದೆವು. ಇದೀಗ ಸಂಸ್ಥೆ ದೊಡ್ಡದಾಗಿ ಹಾಗೂ ಸುಧಾರಿತ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರದಲ್ಲಿ 68 ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಂಜರು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ!

“ಕೋವಿಡ್ -19 ರ ನಂತರ, ಅನೇಕರು ಅನಾರೋಗ್ಯಕ್ಕೆ ಒಳಗಾದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತು. ಆದರೆ ನಾವು ಅವರ ಅಗತ್ಯಗಳನ್ನು ಪೂರೈಸುವುದನ್ನು ಮುಂದುವರೆಸಿದ್ದೆವು. ಅವರಿಗೆ ಅಗತ್ಯವಿರುವ ಔಷಧಿಗಳನ್ನು ನೀಡುತ್ತಿದ್ದೇವೆ. ವಿಶೇಷ ಸಾಮರ್ಥ್ಯವುಳ್ಳವರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಸಂಸ್ಥೆಯು ಅವರಿಗೆ ಸಹಾಯ ಮಾಡುತ್ತದೆ. ಸಾಂಕ್ರಾಮಿಕ ಸಮಯದಲ್ಲಿ, ಸಂಸ್ಥೆಯು ಅವರ ಕುಟುಂಬಗಳನ್ನು ಆರ್ಥಿಕವಾಗಿ ಹಾಗೂ ಇತರೆ ಸಹಾಯಗಳೊಂದಿಗೆ ಬೆಂಬಲಿಸಿತು ಎಂದು ತಿಳಿಸಿದ್ದಾರೆ.

100%

ಕೇಂದ್ರದಲ್ಲಿ ಆರು ಮಂದಿ ವಿಶೇಷ ಶಿಕ್ಷಕರಿದ್ದಾರೆ. ದೃಷ್ಟಿದೋಷ ಮತ್ತು ಬುದ್ಧಿಮಾಂದ್ಯ ತಜ್ಞ ಶಿವರಾಜ್ ಮುಖ್ಯೋಪಾಧ್ಯಾಯರಾಗಿ ತಂಡದ ಮುಖ್ಯಸ್ಥರಾಗಿದ್ದಾರೆ. ವಿಶೇಷ ಶಿಕ್ಷಕರನ್ನು ಹೊರತುಪಡಿಸಿ, ಕೇಂದ್ರವು ವೃತ್ತಿಪರ ತರಬೇತುದಾರರನ್ನು ಹೊಂದಿದೆ.

ವಿವಿಧ ಅಭಿಯಾನಗಳ ಅಡಿಯಲ್ಲಿ ವಿದ್ಯಾರ್ಥಿಗಳು ನುರಿತರಾಗುತ್ತಿದ್ದಾರೆ. ಅಂತರ್ಗತ ಸಮಾಜವು ಇನ್ನೂ ದೂರದ ಕನಸಾಗಿದ್ದರೂ, ನಮ್ಮ ಸಂಸ್ಥೆಯ ಗಡಿಯೊಳಗೆ ಜೀವನೋಪಾಯವನ್ನು ಗಳಿಸಲು ನಾವು ಅವರಿಗೆ ಕೌಶಲ್ಯ ನೀಡಲು ಸಹಾಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಕೇಂದ್ರದಲ್ಲಿ ವಿಶೇಷಚೇತನರಿಗೆ ಏಕ ಬಳಕೆಯ ಪ್ಲಾಸ್ಟಿಕ್‌ಗಳು, ಬಳಸಿದ ಪೇಪರ್‌ಗಳು ಮತ್ತು ಪತ್ರಿಕೆಗಳು, ಬಳಸಿದ ಬಟ್ಟೆಗಳು ಮತ್ತು ಇತರ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುವುದನ್ನು ಹೇಳಿಕೊಡಲಾಗುತ್ತಿದೆ.

ಇದೀಗ ತೀವ್ರವಾದ ದುರ್ಬಲತೆ ಹೊಂದಿರುವ ಮಕ್ಕಳೂ ಕೂಡ ವೃತ್ತಿಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಇದು ಸುಸ್ಥಿರ, ಪರಿಸರ ಸ್ನೇಹಿ ಸಮಾಜವನ್ನು ರೂಪಿಸಲು ಸಹಾಯ ಮಾಡುತ್ತದೆ. ಬಳಸಿದ ಪ್ಲಾಸ್ಟಿಕ್‌ಗಳನ್ನು ತುಂಡುಗಳಾಗಿ ಕತ್ತರಿಸಿ (ಕೆಲವು ಮಹಿಳೆಯರ ಸಹಾಯದಿಂದ) ಸುಂದರವಾದ ಮ್ಯಾಟ್‌ಗಳಾಗಿ ನೇಯಲಾಗುತ್ತದೆ. ಬಳಸಿದ ಕಾಗದಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಕಾಗದವಾಗಿ ಸಂಸ್ಕರಿಸಲಾಗುತ್ತದೆ, ಅದನ್ನು ಕಾಗದದ ಚೀಲಗಳು ಮತ್ತು ಇತರ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತದೆ ಮತ್ತು ಸ್ಥಳೀಯ ವರ್ಣಚಿತ್ರಗಳಿಂದ ಅಲಂಕರಿಸಲಾಗುತ್ತದೆ.

ಇದನ್ನೂ ಓದಿ: ಪರ್ವತ ಗುಡ್ಡವನ್ನು ಕಡಿದು ತಾವೇ ರಸ್ತೆ ನಿರ್ಮಿಸಿಕೊಂಡ ಒಡಿಶಾದ ಕೊರಾಪುಟ್ ನ ಬುಡಕಟ್ಟು ಗ್ರಾಮಸ್ಥರು!

ಈ ಪ್ರತಿಭೆಯು ವಿಶೇಷ ಸಾಮರ್ಥ್ಯವುಳ್ಳವರಿಗೆ ಉತ್ತಮ ಜೀವನವನ್ನು ಖಚಿತಪಡಿಸುವುದಲ್ಲದೆ, ಸಂಸ್ಥೆಗೆ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಕೇಂದ್ರವು 'ಸೇಲ್ ರೂಮ್' ಅನ್ನು ಕೂಡ ಹೊಂದಿದೆ, ಅಲ್ಲಿ ಬಳಸಿದ ಬಟ್ಟೆಗಳು ಮತ್ತು ಇತರ ಬಳಸಿದ ವಸ್ತುಗಳನ್ನು ಸಂಗ್ರಹಿಸಿ ನಂತರ ಮಾರಾಟ ಮಾಡಲಾಗುತ್ತದೆ.

100%

"ನಿಧಿ ಸಂಗ್ರಹಿಸಲು ಮತ್ತು ಸಂಸ್ಥೆಯನ್ನು ನಿರ್ಮಿಸಲು ನಾವು ಅನನ್ಯ ವಿಧಾನಗಳನ್ನು ಪ್ರಯತ್ನಿಸುತ್ತೇವೆ" ಎಂದು ಗೀತಾ ವಿವರಿಸಿದರು.

ಕೇಂದ್ರವು ಕೈಮಗ್ಗ ಘಟಕವನ್ನು ಹೊಂದಿದ್ದು, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಮಹಿಳೆಯರಿಂದ ನಿರ್ವಹಿಸಲ್ಪಡುತ್ತದೆ. ಕೆಲಸ ಮಾಡುವ ಮಹಿಳೆಯರಿಗೆ ಹಣವನ್ನು ನೀಡಲಾಗುತ್ತದೆ. ಪ್ರಸ್ತುತ ಸಂಸ್ಥೆ ವಿರಾಜಪೇಟೆ ತಾಲೂಕಿನಾದ್ಯಂತ ವಿಶೇಷಚೇತನರ ಅಗತ್ಯಗಳನ್ನು ಪೂರೈಸುತ್ತಿದ್ದು, ನಿಧಾನಗತಿಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲೂ ಸೇವೆಯನ್ನು ಪ್ರಾರಂಭಿಸುತ್ತದೆ ಎಂದಿದ್ದಾರೆ.


Stay up to date on all the latest ವಿಶೇಷ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp