ಯುವ ವಕೀಲನ ಮೇಲೆ ಹಲ್ಲೆ: ರಾಜ್ಯಾದ್ಯಂತ ವಕೀಲರ ಪ್ರತಿಭಟನೆ, ಪಿಎಸ್ಐ ಅಮಾನತು
ಮಂಗಳೂರು: ಯುವ ವಕೀಲನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಕೀಲರ ಪ್ರತಿಭಟನೆ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಹಲ್ಲೆ ಆರೋಪ ಎದುರಿಸುತ್ತಿರುವ ಪಿಎಸ್ಐರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯಾದ್ಯಂತ ವಕೀಲರ ತೀವ್ರ ಒತ್ತಡಕ್ಕೆ ಮಣಿದ ಪಶ್ಚಿಮ ವಲಯ ಐಜಿಪಿ ಪುಂಜಾಲಕಟ್ಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ಅವರನ್ನು ಅಮಾನತುಗೊಳಿಸಿ ಭಾನುವಾರ ಆದೇಶ ಹೊರಡಿಸಲಾಗಿದೆ. ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಕೀಲರು ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದರು.
ಗೇಟ್ ತೆಗೆದು ವ್ಯಕ್ತಿಯೊಬ್ಬರ ಆಸ್ತಿಗೆ ನುಗ್ಗಿದ ಆರೋಪದ ಮೇಲೆ ವಕೀಲರ ವಿರುದ್ಧ ಐಪಿಸಿ ಸೆಕ್ಷನ್ 379 ಮತ್ತು 447 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ 2 ರ ರಾತ್ರಿ, ಸಂತ್ರಸ್ಥ ವಕೀಲ ಕುಲದೀಪ್ ಶೆಟ್ಟಿ ಮತ್ತು ಅವರ ತಾಯಿ ಮತ್ತು ಸಹೋದರನ ತೀವ್ರ ಪ್ರತಿರೋಧದ ನಡುವೆಯೂ ಪೊಲೀಸರು ಕುಲದೀಪ್ ಶೆಟ್ಟಿಯನ್ನು ಬಂಧಿಸಿದ್ದರು. ನಂತರ ಆವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೂ ಮೊದಲು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕುಲದೀಪ್ ಶೆಟ್ಟಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆ ಬೆಳಕಿಗೆ ಬಂದ ತಕ್ಷಣ ರಾಜ್ಯಾದ್ಯಂತ ವಕೀಲರು ಪೊಲೀಸರ ದೌರ್ಜನ್ಯವನ್ನು ಆರೋಪಿಸಿ ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘ ಒತ್ತಾಯಿಸಿದೆ. ಶನಿವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಪಿಎಸ್ಐ ಅಮಾನತುಗೊಳಿಸುವಂತೆ ಮಂಗಳೂರು ವಕೀಲರ ಸಂಘ ಮನವಿ ಪತ್ರ ಕೂಡ ಸಲ್ಲಿಸಿತ್ತು.
ಇದೀಗ ಆರೋಪಿ ಪೊಲೀಸ್ ಅಧಿಕಾರಿ ಸುತೇಶ್ ಅವರನ್ನು ಅಮಾನತುಗೊಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ