ವಲಸೆ ವಿಭಾಗದ ಪ್ರಕ್ರಿಯೆಯಲ್ಲಿ ವಿಳಂಬ: ಕೆಐಎನಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪ್ರಯಾಣಿಕರ ಬೇಸರ!

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಪ್ರಕ್ರಿಯೆ ದುಃಸ್ವಪ್ನದಂತೆ ಕಾಡುತ್ತಿದ್ದು, ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿರುವ ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಪ್ರಕ್ರಿಯೆ ದುಃಸ್ವಪ್ನದಂತೆ ಕಾಡುತ್ತಿದ್ದು, ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿರುವ ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

ವಾರಾಂತ್ಯದಲ್ಲಿ ನಗರಕ್ಕೆ ಬಂದ ದತ್ತಾಂಶ ವಿಜ್ಞಾನಿ ಬಿಜಿತ್ ದೇಕಾ ಅವರು ಟ್ವೀಟ್ ಮಾಡಿ, “ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹನ 2.20 ಕ್ಕೆ ಬಂದಿಳಿದಿದ್ದೆ. ವಲಸೆ ವಿಭಾಗದ ಪ್ರಕ್ರಿಯೆಗೆ ಸರಿಸುಮಾರು 2 ಗಂಟೆ ಸಮಯ ಬೇಕಾಯಿತು. ಇನ್ನು ಲಗೇಜ್ ಪಡೆದುಕೊಳ್ಳಲು 30 ನಿಮಿಷಗಳ ಸಮಯ ಬೇಕಾಯಿತು. ನಾನು ಪ್ರಯಾಣಿಸಿದ್ದ ವಿಮಾನದಲ್ಲಿ ಒಟ್ಟು 150 ಮಂದಿ ಪ್ರಯಾಣಿಸಿದ್ದರು. ಇದರಿಂದ ಸಾಕಷ್ಟು ಸಮಯ ವ್ಯರ್ಥವಾದಂತಾಯಿತು ಎಂದು ಹೇಳಿಕೊಂಡಿದ್ದಾರೆ.

ಮತ್ತೊಬ್ಬ ಪ್ರಯಾಣಿಕ ಪ್ರಶಾಂತ್ ದಯಾಳ್ ಟ್ವೀಟ್ ಮಾಡಿ, “ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಪ್ರಕ್ರಿಯೆ ಭಯಾನಕವಾಗಿದೆ. ನಿರ್ವಹಣೆ ಮತ್ತು ನಡವಳಿಕೆಗಳು ಕ್ಷಮಿಸಲಾಗದ್ದು. ನಾವು ನಿಜವಾಗಿಯೂ ಮುಂದೆ ಸಾಗುತ್ತಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರಯಾಣಿಕರನ್ನು ನಿರ್ವಹಿಸಲು ಸಾಮರ್ಥ್ಯ ಇಲ್ಲದಿರುವಾಗ ಇಷ್ಟೊಂದು ವಿಮಾನಗಳ ಹಾರಾಟವೇಕೆ ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ಡೆಹ್ರಾಡೂನ್‌ನಿಂದ ಇಲ್ಲಿಗೆ ಆಗಮಿಸಿದ ಲೇಖಕಿ ನಂದಿತಾ ಅಯ್ಯರ್‌ ಅವರಿಗೂ ಇಲ್ಲಿನ ಅವ್ಯವಸ್ಥೆಗಳು ಬೇಸರವನ್ನು ತರಿಸಿದೆ.

ಬುಕ್ ಮಾಡಲಾಗಿದ್ದ ಕ್ಯಾಬ್ ಸ್ಥಳಕ್ಕೆ ತಲುಪಲು ಸುಮಾರು 40 ನಿಮಿಷಗಳ ಕಾಲ ಬೇಕಾಯಿತು ಎಂದು ತಿಳಿಸಿದ್ದಾರೆ.

ಸಂಜೆ 7.45 ರ ಹೊತ್ತಿಗೆ ವಿಮಾನ ನಿಲ್ದಾಣವನ್ನು ತಲುಪಿದ್ದೆ, ಮನೆಗೆ ತಲುಪಲು ನನಗೆ ಸುಮಾರು 10 ಗಂಟೆಗಳ ಸಮಯ ಬೇಕಾಯಿತು. ಇದು ತುಂಬಾ ಒತ್ತಡದ ಅನುಭವವಾಗಿತ್ತು. ಕ್ಯಾಬ್‌ಗಳು ಲೇನ್‌ಗಳನ್ನು ತಡೆದು ಪ್ರಯಾಣಿಕರನ್ನು ಕರೆದೊಯ್ಯಲು ಕಾಯುತ್ತಿದ್ದವು. ಸಂಚಾರ ದಟ್ಟಣೆ ನಿಯಂತ್ರಿಸಲು ಮೂವರು ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಇತರರಾರೂ ಇದರತ್ತ ಗಮನ ಹರಿಸಲಿಲ್ಲ ಎಂದಿದ್ದಾರೆ.

ಈ ಸಮಸ್ಯೆಗಳ ಬಗ್ಗೆ ಬಿಐಎಎಲ್ ಮೂಲಗಳು ಪ್ರತಿಕ್ರಿಯೆ ನೀಡಿ, ಸಾಕಷ್ಟು ಸಿಬ್ಬಂದಿಗಳ ನಿಯೋಜಿಸುವಲ್ಲಿ ಅತ್ಯುತ್ತಮವಾದ ಕೆಲಸಗಳು  ಡೆಯುತ್ತಿವೆ. ವಲಸೆ ಮತ್ತು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದ್ದೇವೆಂದು ಹೇಳಿದ್ದಾರೆ.

ರಜಾ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಒತ್ತಿ ಹೇಳಿದ ಅವರು, ಜನದಟ್ಟಣೆಯ ಸಮಯದಲ್ಲಿ ದೇಶೀಯ ಮತ್ತು ವಿದೇಶಿ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ, ನಾವು ಎರಡು ಅಂತರರಾಷ್ಟ್ರೀಯ ಸ್ವಯಂಚಾಲಿತ ಟ್ರೇ ಮರುಪಡೆಯುವಿಕೆ ಸಿಸ್ಟಮ್ ಲೇನ್‌ಗಳನ್ನು ಮಾರ್ಪಡಿಸಿದ್ದೇವೆ. ಈ ಸ್ವಿಂಗ್ ಲೇನ್‌ಗಳಲ್ಲಿ ಎಲ್ಲಾ ಚೆಕ್‌ಪಾಯಿಂಟ್‌ಗಳು ಜನಸಂದಣಿಯನ್ನು ಮರುಹೊಂದಿಸಲು ಮತ್ತು ವಲಯಗಳ ನಡುವೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ತರಬೇತಿ ಪಡೆದ ಸಿಬ್ಬಂದಿಗಳಿರಲಿದ್ದಾರೆಂದು ತಿಳಿಸಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅನೇಕ ಪ್ರಯತ್ನಗಳ ಹೊರತಾಗಿಯೂ, ಯಾವುದೇ ವಲಸೆ ಅಧಿಕಾರಿಗಳ ಸಂಪರ್ಕಿಸಲು ಸಾಧ್ಯವಾಗಿಲ್ಲ.

ಇದು ಹಬ್ಬದ ಸೀಸನ್‌ ಆಗಿರುವುದರಿಂದ ಜನದಟ್ಟಣೆ ಹೆಚ್ಚಾಗಿದೆ. ಬೆಂಗಳೂರು ದೇಶದ ಅತ್ಯುತ್ತಮ ನಿರ್ವಹಣೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಹೊಸ ಟರ್ಮಿನಲ್ ತೆರೆದಾಗ ಪ್ರಯಾಣಿಕರು ಉತ್ತಮ ಅನುಭವವನ್ನು ಪಡೆಯುತ್ತಾರೆ ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com