ಎಲೆಕ್ಟ್ರಾನಿಕ್ ಸಿಟಿ ರಾಬರಿ ಪ್ರಕರಣ: ರಾಜಸ್ಥಾನದವರೆಗೂ ದರೋಡೆಕೋರರ ಅಟ್ಟಾಡಿಸಿ ಬಂಧಿಸಿದ ಬೆಂಗಳೂರು ಪೊಲೀಸರು

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೊಲೀಸರು, ರಾಜಸ್ಥಾನದವರೆಗೂ ದರೋಡೆಕೋರರನ್ನು ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆಕೋರರಿಂದ ವಶಪಡಿಸಿಕೊಂಡ ಚಿನ್ನಾಭರಣ
ದರೋಡೆಕೋರರಿಂದ ವಶಪಡಿಸಿಕೊಂಡ ಚಿನ್ನಾಭರಣ

ಜೈಪುರ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೊಲೀಸರು, ರಾಜಸ್ಥಾನದವರೆಗೂ ದರೋಡೆಕೋರರನ್ನು ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದರೋಡೆ ಆರೋಪಿಗಳನ್ನು ರಾಜಸ್ಥಾನದಲ್ಲಿ ಸಿನಿಮೀಯ ಶೈಲಿಯಲ್ಲಿ ಪೊಲೀಸರು ಚೇಸಿಂಗ್ ಮಾಡಿ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 4 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರೊಬ್ಬರಿಗೆ ಗನ್ ತೋರಿಸಿ ಕೈ ಕಾಲು ಕಟ್ಟಿ ಹಾಕಿ ಚಿನ್ನ, ಬೆಳ್ಳಿ ಮತ್ತು ನಗದು ದೋಚಿ ಖತರ್ನಾಕ್ ದರೋಡೆಕೋರರ ತಂಡವೊಂದು ಎಸ್ಕೇಪ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಬೆಂಗಳೂರು ಪೊಲೀಸರು ಆರೋಪಿಗಳು ಎಸ್ಕೇಪ್ ಆಗಿದ್ದ ಕಾರಿನ ಜಾಡು ಹಿಡಿದು ತನಿಖೆ ಮುಂದುವರೆಸಿದ್ದರು. ಈ ವೇಳೆ ದರೋಡೆಗೆ ಬಳಸಿದ್ದ ಕಾರು ರಾಜಸ್ಥಾನದಲ್ಲಿ ಇರುವುದು ಪತ್ತೆಯಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ತಂಡವೊಂದು ರಾಜಸ್ಥಾನಕ್ಕೆ ತೆರಳಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿತ್ತು. 

ರಾಜಸ್ಥಾನಕ್ಕೆ ತೆರಳಿದ ಬಳಿಕ ಅಲ್ಲಿನ ಪೊಲೀಸರಿಗೆ ಈ ಬಗ್ಗೆ ಬೆಂಗಳೂರು ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಇದೇ ಗ್ಯಾಂಗ್ ರಾಜಸ್ಥಾನದ ಉದಯಪುರದ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿತ್ತು ಎಂಬ ಅಂಶ ಬಯಲಿಗೆ ಬಂದಿದೆ. ಬಳಿಕ ಈ ಗ್ಯಾಂಗ್‍ನ ಹೆಡೆಮುರಿ ಕಟ್ಟಲು ರಾಜಸ್ಥಾನ ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಉದಯಪುರದಲ್ಲಿ ಈ ಗ್ಯಾಂಗ್ ಇರುವ ಮಾಹಿತಿ ಲಭ್ಯವಾಗಿ ಕಾರ್ಯಚರಣೆಗೆ ಮುಂದಾಗಿದ್ದಾರೆ.

ಪೊಲೀಸರು ಕಾರ್ಯಚರಣೆಗೆ ಮುಂದಾಗುತ್ತಿದ್ದಂತೆ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಮೇಲೆ ಗುಂಡು ಹಾರಿಸಿ ಕಾರಿನೊಂದಿಗೆ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕೂಡ ಆರೋಪಿಗಳ ಕಾರನ್ನು ಬೆನ್ನಟ್ಟಿದ್ದಾರೆ. ಚೇಸಿಂಗ್ ಮಾಡುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಬೆನ್ನಟ್ಟಿ ಪೊಲೀಸರು ಆರೋಪಿಗಳ ಕಾರಿಗೆ ಗುದ್ದಿ ರಸ್ತೆಗೆ ಉರುಳಿಸಿದ್ದಾರೆ. ಬಿದ್ದೊಡನೆ ಆರೋಪಿಗಳು ಎದ್ದು ಓಡಲು ಆರಂಭಿಸಿದ್ದಾರೆ ಆದರೂ ಬಿಡದ ಪೊಲೀಸರು ಆರೋಪಿಗಳ ಹಿಂದೆ ಓಡಿ ಹಿಡಿದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದೇವಾರಾಮ್, ರಾಹುಲ್ ಸೋಲಂಕಿ, ಅನಿಲ್ ರಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ವಿಚಾರಿಸಿದಾಗ ಬೆಂಗಳೂರಿನಿಂದ ದರೋಡೆ ಮಾಡಿದ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಒಟ್ಟು 2 ಕೆ.ಜಿ ಚಿನ್ನ, 30 ಕೆ.ಜಿ ಬೆಳ್ಳಿ ಸೇರಿದಂತೆ ಗನ್, ಜೀವಂತ ಗುಂಡನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com