ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು, ಶಾಸಕರು ಹಾಗೂ ನಾಯಕರು ನೆಪ ಮಾತ್ರಕ್ಕೆ ಭೇಟಿ ನೀಡುತ್ತಿದ್ದಾರೆಯೇ ಹೊರತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಮಂತ್ರಿಗಳು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂದರು.
ಕೊಡಗಿನ ಪರಿಸ್ಥಿತಿ ಶೋಚನೀಯವಾಗಿದೆ. ಯಾರೊಬ್ಬರಿಗೂ ಸರ್ಕಾರ ನೆರವು ನೀಡಿಲ್ಲ.ಅಧಿಕಾರಿಗಳು ಕೂಡಾ ಕೆಲಸ ಮಾಡಿಲ್ಲ. ನೆಪ ಮಾತ್ರಕ್ಕೆ ಬೆರಳೆಣಿಕೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರಿಗೆ ಸಹಾಯ ಮಾಡುವ ಯಾವುದೇ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ ಎಂದು ಅವರು ಹರಿಹಾಯ್ದರು.
ಇನ್ನು ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದಿನಿಂದ ಚಾಮರಾಜಪೇಟೆ ಮೈದಾನವನ್ನು ಯಾವ ರೀತಿ ಇತಿಹಾಸವಿದೆಯೋ ಅದೇ ರೀತಿ ಮುಂದುವರೆಸಬೇಕು. ಹೊಸದಾಗಿ ಬದಲಾವಣೆ ಮಾಡಿ ಜನರಲ್ಲಿ ಅನಗತ್ಯ ಗೊಂದಲ ಮೂಡಿಸುವ ಕೆಲಸ ಮಾಡಬಾರದು, ಈ ಮೈದಾನದ ದಾಖಲೆಗಳಲ್ಲಿ ಏನಿದೆ. ಸಾರ್ವಜನಿಕರ ಗಮನದಲ್ಲಿ ಏನಿದೆ ಎಂದು ಎಲ್ಲರಿಗೂ ತಿಳಿದಿದೆ.ಬಿಜೆಪಿ ಮತ್ತು ಇತರೆ ಸಂಘಟನೆಗಳು ಆಶಾಂತಿ ಮೂಡಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.
Advertisement