'ಅನಾಥ ಶವಗಳ ತ್ರಿವಿಕ್ರಮ' ಖ್ಯಾತಿಯ ಮಹದೇವ್ ನಿಧನ

ಅನಾಥ ಶವಗಳ ಅಂತ್ಯಸಂಸ್ಕಾರದ ಮೂಲಕ 'ಅನಾಥ ಶವಗಳ ತ್ರಿವಿಕ್ರಮ' ಎಂದೇ ಖ್ಯಾತಿ ಪಡೆದಿದ್ದ ಎಂ ಮಹದೇವ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಅನಾಥಶವಗಳ ತ್ರಿವಿಕ್ರಮ ಖ್ಯಾತಿಯ ಮಹದೇವ್
ಅನಾಥಶವಗಳ ತ್ರಿವಿಕ್ರಮ ಖ್ಯಾತಿಯ ಮಹದೇವ್

ಬೆಂಗಳೂರು: ಅನಾಥ ಶವಗಳ ಅಂತ್ಯಸಂಸ್ಕಾರದ ಮೂಲಕ 'ಅನಾಥ ಶವಗಳ ತ್ರಿವಿಕ್ರಮ' ಎಂದೇ ಖ್ಯಾತಿ ಪಡೆದಿದ್ದ ಎಂ ಮಹದೇವ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದ ಮಹದೇವ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹದೇವ್ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹದೇವ್ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಮಹದೇವ್ 9ನೇ ವಯಸ್ಸಿನಿಂದಲೇ ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾರಂಭಿಸಿದ್ದರು. ಅಪಘಾತ, ಆತ್ಮಹತ್ಯೆ ಹೀಗೆ ಹಲವು ಕಾರಣಗಳಿಂದ ಮೃತಪಡುತ್ತಿದ್ದ ಅನಾಥ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕೊಂಡೊಯ್ಯುತ್ತಿದ್ದ ಮಹದೇವ, ಸಂಬಂಧಿಕರ ಸ್ಥಾನದಲ್ಲಿ ನಿಂತು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಪೊಲೀಸರು ಹಾಗೂ ವೈದ್ಯರು ಮಹದೇವ ಅವರನ್ನು ’ಅನಾಥ ಶವಗಳ ತ್ರಿವಿಕ್ರಮ' ಎಂದೇ ಖ್ಯಾತಿ ಪಡೆದಿದ್ದರು.

ಶವಗಳನ್ನು ಟಾಂಗಾ (ಕುದುರೆ ಗಾಡಿ) ಬಳಿಕ ಆಟೊದಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದ ಮಹದೇವ್ ಅವರಿಗೆ ಐಎಎಸ್ ಅಧಿಕಾರಿ ಮದನ್‌ ಗೋಪಾಲ್ ಈ ಹಿಂದೆ ಒಮ್ನಿ ವಾಹನ ನೀಡಿದ್ದರು. ನಂತರ, ಅದರಲ್ಲೇ ಶವ ಸಾಗಣೆ ಮುಂದುವರಿದಿತ್ತು. 51 ವರ್ಷಗಳ ನಿರಂತರ ಕೆಲಸದಲ್ಲಿ ಮಹದೇವ ಅವರು 1 ಲಕ್ಷಕ್ಕಿಂತ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳುತ್ತಾರೆ.

ಮಹದೇವ್ ಅವರ ಕೆಲಸಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ಲಭಿಸಿತ್ತು. 

ಶವಸಂಸ್ಕಾರ ಕಾರ್ಯ ಮಕ್ಕಳಿಂದ ಕೆಲಸ ಮುಂದುವರಿಕೆ
ಇನ್ನು ಮಹದೇವ್ ಅವರ ನಿಧನದ ಬಳಿಕವೂ ಅನಾಥ ಶವಗಳ ಸಂಸ್ಕಾರ ಕಾರ್ಯ ಮುಂದುವರೆಯಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮಹದೇವ್ ಅವರ ಕೆಲಸವನ್ನು ಮಕ್ಕಳಾದ ಪ್ರವೀಣ್ ಹಾಗೂ ಕಿರಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಮಹದೇವ್ ಅವರ ಮಗ, ‘1 ತಿಂಗಳಿನಿಂದ ತಂದೆಗೆ ಹುಷಾರು ಇರಲಿಲ್ಲ. ಆಸ್ಪತ್ರೆಯಲ್ಲಿ ಇರುವಾ ಗಲೂ ಅವರು ಅನಾಥ ಶವಗಳ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದರು. ನಾನು ಹಾಗೂ ಅಣ್ಣ ಸೇರಿಕೊಂಡು ಅನಾಥ ಶವಗಳಸಂಸ್ಕಾರ ಮಾಡುತ್ತಿದ್ದೇವೆ. ತಂದೆಯ ಕೆಲಸ ವನ್ನು ಮುಂದುವರಿಸಿದರೆ, ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com