ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಹಲವು ರಸ್ತೆಗಳು ಜಲಾವೃತವಾಗಿವೆ.
ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವೆಬ್ಸೈಟ್ ಪ್ರಕಾರ, ನಗರದಲ್ಲಿ ರಾತ್ರಿ 11 ಗಂಟೆಗೆ 22.39 ಮಿಲಿ ಮೀಟರ್ ಮಳೆ ದಾಖಲಾಗಿದೆ. ರಾಜರಾಜೇಶ್ವರಿ ನಗರದ ವಲಯದಲ್ಲಿ 65 ಮಿಮೀ ಮಳೆಯಾಗಿದ್ದು, ಇದು ಎಲ್ಲಾ ಎಂಟು ಬಿಬಿಎಂಪಿ ವಲಯಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿರುವುದಾಗಿದೆ. ಪೂರ್ವ ವಲಯದಲ್ಲಿ 61.50 ಮಿಮೀ, ದಕ್ಷಿಣ ವಲಯದಲ್ಲಿ 59.50 ಮಿಮೀ, ಬೊಮ್ಮನಹಳ್ಳಿಯಲ್ಲಿ 53 ಮಿಮೀ ಮತ್ತು ಪಶ್ಚಿಮ ವಲಯದಲ್ಲಿ 44.50 ಮಿಮೀ ಮಳೆಯಾಗಿದೆ.
ಅಂಬೇಡ್ಕರ್ ವೀಧಿ ಮತ್ತು ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳು, ಎಂಎಸ್ ಬಿಲ್ಡಿಂಗ್, ಮಲ್ಲೇಶ್ವರಂ, ಜಿಲ್ಲೆಯ ಇತರ ವ್ಯಾಪಾರ ಕೇಂದ್ರಗಳಾದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಶಿವಾನಂದ ಸರ್ಕಲ್ನಲ್ಲಿ ಭಾರಿ ಮಳೆಯು ಪ್ರವಾಹವನ್ನೇ ಸೃಷ್ಟಿಸಿತ್ತು.
ಜಯನಗರದಲ್ಲಿ ಮರವೊಂದು ಉರುಳಿ ಬಿದ್ದಿದೆ. ಹೆಚ್ಚಿನ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ಮರದ ಕೊಂಬೆಗಳು ರಸ್ತೆ ಮೇಲೆ ಬಿದ್ದಿವೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಎದುರಿಸಬೇಕಾಯಿತು.
ಯಲಹಂಕದ ಸ್ವಾಮಿ ವಿವೇಕಾನಂದ ನಗರ ಕೆಲವು ಮನೆಗಳು ಜಲಾವೃತವಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಹಾಲಕ್ಷ್ಮಿ ಲೇಔಟ್ನಲ್ಲಿ ಹಲವು ಮನೆಗಳಿಗೆ ನೀರು ತುಂಬಿವೆ ಎಂದು ತಿಳಿದುಬಂದಿದೆ.
Advertisement