ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ 24 ವರ್ಷದ ಯುವಕನ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
ಗಾಯತ್ರಿ ಬಡಾವಣೆಯ ಎಸ್ಆರ್ ಲೇಔಟ್ ಬಳಿ ದ್ವಿಚಕ್ರ ವಾಹನವೊಂದು ರಾಜಕಾಲುವೆಗೆ ಬೀಳುತ್ತಿತ್ತು. ಇದನ್ನು ತಪ್ಪಿಸಲು ಹೋಗಿ ಮಿಥುನ್ ನೀರಿನಲ್ಲಿ ಕೊಚ್ಚಿಹೋಗಿದ್ದ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ಸಿಬ್ಬಂದಿ ಸತತ 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.
ನಿನ್ನೆ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸರು ಸೇರಿ 30ಕ್ಕೂ ಹೆಚ್ಚು ಸಿಬ್ಬಂದಿ ನಾಲ್ಕು ತಂಡಗಳಾಗಿ ಸೀಗೆಹಳ್ಳಿ ಕೆರೆ ಮತ್ತು ರಾಜಕಾಲುವೆ ಸುತ್ತಮುತ್ತ ಸುಮಾರು ಐದಾರು ಗಂಟೆಗಳ ಶೋಧ ನಡೆಸಿದ್ದರು.
ಇದರಂತೆ ಇಂದು ಬೆಳಿಗ್ಗೆ ಕೂಡ ಶೋಘ ಕಾರ್ಯಾಚರಣೆ ಆರಂಭಿಸಿದಾಗ ಯುವಕ ಕೊಚ್ಚಿಕೊಂಡ ಹೋದ ಸ್ಥಳದಿಂದ ಸುಮಾರು 1 ಕಿಮೀ ದೂರದಲ್ಲಿ ಮೃತದೇಹ ದೊರೆತಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟರ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಗನಿಗಾಗಿ ಕಾಯುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Advertisement