ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದ ಹಿಂದೂ ಸಂಘಟನೆಗಳಿಗೆ ಬಿಬಿಎಂಪಿ ಅನುಮತಿ ನಿರಾಕರಿಸಿದೆ.
ವಂದ ಮಾತರಂ ಸೇವಾ ಸಮಾಜಂ, ವಿಶ್ವ ಸನಾತನ ಪರಿಷತ್, ಶ್ರೀರಾಮ ಸೇನೆ ಮತ್ತಿತರರು ಯೋಗ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಉತ್ಸವದಂದು ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ.ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಬಿಬಿಎಂಪಿ ನಿರಾಕರಿಸಿದೆ ಎಂದು ತಿಳಿದುಬಂದಿದೆ.
“ನಾವು ಎರಡು ದಿನಗಳ ಹಿಂದೆ ಪಶ್ಚಿಮ ವಲಯದ ಜಂಟಿ ಆಯುಕ್ತ ಎಸ್ಎಂ ಶ್ರೀನಿವಾಸ ಅವರನ್ನು ಭೇಟಿ ಮಾಡಿದ್ದೆವು. ಬಿಬಿಎಂಪಿಯು ಭೂಮಿಯನ್ನು ತನ್ನ ಆಸ್ತಿ ಎಂದು ಹೇಳಿದ್ದು, ವಕ್ಫ್ ಮಂಡಳಿ ಕೂಡ ಈ ಆಸ್ತಿಯ ಬಗ್ಗೆ ದಾಖಲೆಗಳನ್ನು ಸಲ್ಲಿಸಿದೆ ಎಂದು ತಿಳಿಸಿದರು.
ಅದನ್ನು ಪರಿಶೀಲಿಸಲು ಎರಡು ವಾರಗಳ ಕಾಲಾವಕಾಶ ಬೇಕು ಎಂದು ಬಿಬಿಎಂಪಿ ತಿಳಿಸಿದ್ದು, ಹೀಗಾಗಿ ಯೋಗ ದಿನಾಚರಣೆಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ಶ್ರೀರಾಮ ಸೇನೆಯ ಬೆಂಗಳೂರು ಅಧ್ಯಕ್ಷ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ವಿವಾದದ ಹಿನ್ನೆಲೆಯಲ್ಲಿ ಕಳೆದ ವಾರ ಪಾಲಿಕೆ ಯಥಾಸ್ಥಿತಿಗೆ ಆದೇಶ ನೀಡಿತ್ತು. ಶಾಸಕ ಬಿ.ಝಡ್.ಜಮೀರ್ ಅಹಮ್ಮದ್ ಖಾನ್, ಬಿಜೆಪಿ ನಾಯಕಿ ಪ್ರೀಮಿಳಾ ನೇಸರ್ಗಿ, ಶಾಸಕ ಆರ್.ವಿ.ದೇವರಾಜ್ ಮತ್ತು ನ್ಯಾಯವ್ಯಾಪ್ತಿಯ ಎಸಿಪಿ ಹಾಜರಿದ್ದ ಶಾಂತಿ ಸಮಿತಿಯ ನಡಾವಳಿ ಪ್ರತಿಯನ್ನು ತಾನು ಪಡೆದಿರುವುದಾಗಿ ಈ ಹಿಂದೆ ಹಿಂದೂ ಜನಜಾಗೃತಿ ಸಮಿತಿ ಹೇಳಿತ್ತು.
1972ರ ದಾಖಲೆಗಳ ಪ್ರಕಾರ 2.5 ಎಕರೆ ಭೂಮಿ ತನ್ನ ಆಸ್ತಿ ಎಂದು ಬಿಬಿಎಂಪಿ ಹೇಳಿದ್ದು, ಇದನ್ನು ವಕ್ಫ್ ಮಂಡಳಿ ನಿರಾಕರಿಸಿದೆ.
ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತರು ಮತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಬಿಬಿಎಂಪಿ ಅನುಮತಿ ನೀಡಿಲ್ಲ, ಏಕೆಂದರೆ ಸಮಸ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕಾಗಿರುವುದರಿಂದ ಅನುಮತಿ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement