ಮತದಾನ ಪ್ರಮಾಣ ಹೆಚ್ಚಿಸಲು ಸಿದ್ಧತೆ: ಹೋಟೆಲ್‌, ಆಸ್ಪತ್ರೆ ಸಿಬ್ಬಂದಿಗಳಿಂದ ಮತದಾನ ಮಾಡಿಸಲು ಬಿಬಿಎಂಪಿ ಕ್ರಮ!

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಬಿಬಿಎಂಪಿ ಹಲವು ತಂತ್ರಗಳನ್ನು ರೂಪಿಸಿದ್ದು, ಹೆಚ್ಚಿನ ಮತದಾರರನ್ನು ಹೊಂದಿರುವ ಆತಿಥ್ಯ ವಲಯ ಹಾಗೂ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳಿಂದ ಮತದಾನ ಮಾಡಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಬಿಬಿಎಂಪಿ ಹಲವು ತಂತ್ರಗಳನ್ನು ರೂಪಿಸಿದ್ದು, ಹೆಚ್ಚಿನ ಮತದಾರರನ್ನು ಹೊಂದಿರುವ ಆತಿಥ್ಯ ವಲಯ ಹಾಗೂ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳಿಂದ ಮತದಾನ ಮಾಡಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ, ಕಾಲಾವಕಾಶ ಸಿಗದ ಕಾರಣ ಹಲವರು ಮತದಾನ ಮಾಡಲು ಮುಂದಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಸಿಬ್ಬಂದಿಗಳು ಮತದಾನದ ದಿನದಂದು ಮತದಾನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ಕೆ ವಿ ತ್ರಿಲೋಕ್ ಚಂದ್ರ ಅವರಿಗೆ ಸೂಚನೆ ನೀಡಿದ್ದಾರೆ.

ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಸಿಬ್ಬಂದಿಗೆ ಮತದಾನದ ದಿನದಂದು ಹೊರಗೆ ಹೋಗಲು ಮತ್ತು ಮತ ಚಲಾಯಿಸಲು ಅನುವು ಮಾಡಿಕೊಡುವಂತೆ ಎಲ್ಲಾ ವಲಯಗಳಲ್ಲಿನ ಸಂಘದ ಸದಸ್ಯರಿಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ.

ಮತದಾನದ ದಿನದಂದು ಎಲ್ಲಾ ಆಸ್ಪತ್ರೆಗಳು, ಕ್ಲಿನಿಕ್ ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಮತದಾನ ಮಾಡುವಂತೆ ನಿರ್ದೇಶನಗಳನ್ನು ನೀಡಲಾಗುವುದು ಎಂದು ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.

ಸಿಬ್ಬಂದಿಗಳು ಮತದಾನ ಮಾಡಲು ಅವಕಾಶ ಮಾಡಿಕೊಡುವಂತೆ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗುತ್ತದೆ. ಈ ಸಿಬ್ಬಂದಿಗಳು ಮತದಾನ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಮತದಾರರ ಪ್ರಮಾಣ ಹೆಚ್ಚಿಸುವ ಸಲುವಾಗಿ ಗಿರಿನಾಥ್ ಅವರು ಈಗಾಗಲೇ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಷನ್‌ಗಳೊಂದಿಗೆ (ಆರ್‌ಡಬ್ಲ್ಯೂಎ) ಸಭೆಗಳನ್ನು ನಡೆಸಿದ್ದು, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮತದಾನದ ಶೇಕಡಾವಾರು ಹೆಚ್ಚಳದ ಕುರಿತು ಉದ್ಯಮ ವಲಯದ ಮುಖ್ಯಸ್ಥರೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು. ನಾಲ್ಕು ವಿಭಾಗಗಳನ್ನು ಒಳಗೊಂಡಿರುವ ನಗರದಲ್ಲಿ ಕೇವಲ 55.54 ರಷ್ಟು ಮತದಾನವಾಗಿತ್ತು.

ಈ ನಡುವೆ ಬಿಬಿಎಂಪಿಯ ಈ ಕ್ರಮವನ್ನು ಬೃಹತ್ ಬೆಂಗಳೂರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಪಿ ಸಿ ರಾವ್ ಅವರು ಸ್ವಾಗತಿಸಿದ್ದಾರೆ. ಖಂಡಿತವಾಗಿಯೂ ನಮ್ಮ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ ಅಧ್ಯಕ್ಷ ಡಾ.ಗೋವಿಂದಯ್ಯ ಯತೀಶ್ ಕೂಡ ಈ ಕ್ರಮವನ್ನು ಶ್ಲಾಘಿಸಿದ್ದಾರೆ.

ಕ್ರಿಮಿನಲ್ ಮೊಕದ್ದಮೆಗೆ ಕಾರಣವಾಗುವುದರಿಂದ ಯಾವುದೇ ಸಂಘಟನೆಯು ಒಬ್ಬ ವ್ಯಕ್ತಿಯನ್ನು ಮತದಾನ ಮಾಡದಂತೆ ತಡೆಯಲು ಸಾಧ್ಯವಿಲ್ಲ. ನಮ್ಮ ಸಿಬ್ಬಂದಿಗೆ, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಿಗೆ ಹತ್ತಿರದಲ್ಲಿ ಮತಗಟ್ಟೆಗಳನ್ನು ಹೊಂದಿರುವವರಿಗೆ ಮತದಾನದ ದಿನದಂದು ಹೋಗಿ ಮತ ಚಲಾಯಿಸಲು ತಿಳಿಸುತ್ತೇವೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರಿಗೂ ಕೂಡ ಮತದಾನ ಮಾಡುವಂತೆ ಪ್ರೋತ್ಸಾಹಿಸುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com