ಬೆಂಗಳೂರು: ಆಂಧ್ರಪ್ರದೇಶದ ಕುಪ್ಪಂ ಮೂಲದ ಚರಣ್ (11) ಎಂಬಾತ ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿದ್ದ ಮರದ ಕಡ್ಡಿಯೊಂದನ್ನು ಕಿತ್ತು ಹಾಕಲು ಯತ್ನಿಸುವಾಗ ಮುಂಗೈ ತುಂಡಾಗಿ ಬಿದ್ದಿದೆ.
ಆತನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಬೆಂಗಳೂರಿನ ನಾರಾಯಣ ಹೆಲ್ತ್ಗೆ ಕಳುಹಿಸಲಾಗಿದೆ. ಬಾಲಕನ ತೋಳು ದೇಹದಿಂದ ಬೇರ್ಪಟ್ಟಿದ್ದರೂ, ನಾರಾಯಣದ ವೈದ್ಯರು ಕೈಯನ್ನು ಮತ್ತೆ ದೇಹಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ನಡೆಸಿದರು. ತುಂಡಾಗಿದ್ದ ತೋಳಿಗೆ ರಕ್ತದ ಸಂಚಲನೆಯನ್ನು ಮರು-ಸ್ಥಾಪಿಸಲು ಶಸ್ತ್ರಚಿಕಿತ್ಸೆಯು ಕೈಯನ ಗಾಯಗೊಂಡ ಎಲ್ಲಾ ರಚನೆಗಳ ಮೈಕ್ರೋಸರ್ಜಿಕಲ್ ದುರಸ್ತಿಯನ್ನು ಒಳಗೊಂಡಿತ್ತು.
ಶಸ್ತ್ರಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಡಾ. ರವಿ ಡಿಆರ್ ಮಾತನಾಡಿ, ಯಾವುದೇ ಪ್ರಕರಣದಲ್ಲಿ ದೇಹದಿಂದ ಬೇರ್ಪಟ್ಟ ಕೈ-ಕಾಲುಗಳ ಮರುಜೋಡಣೆ ಮಾಡಲು ಬೇರ್ಪಟ್ಟ ಆರು ಗಂಟೆಗಳ ಸುವರ್ಣ ಅವಧಿಯಲ್ಲಿ ನಡೆಸಿದಾಗ ಹೆಚ್ಚಿನ ಪ್ರಮಾಣದ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಚರಣ್ ಅವರದ್ದು ಚಿಕ್ಕ ವಯಸ್ಸು, ಗಾಯದ ಪ್ರಕಾರ (ಕ್ರಶ್ ಅವಲ್ಶನ್ ಕಟ್) ಮತ್ತು ಅವರು ಪ್ರಯಾಣಿಸಿದ ದೂರದಿಂದಾಗಿ ಅವರ ಶಸ್ತ್ರಚಿಕಿತ್ಸೆ ಜಟಿಲವಾಗಿತ್ತು. ಸದ್ಯ ಚರಣ್ ಅವರನ್ನು 10 ದಿನಗಳ ಕಾಲ ತೀವ್ರ ನಿಗಾ ಮತ್ತು ಔಷಧೋಪಚಾರದಲ್ಲಿ ಇರಿಸಲಾಗಿದೆ. ಆತ ಸಂಪೂರ್ಣ ಚೇತರಿಸಿಕೊಳ್ಳಲು 9-12 ತಿಂಗಳು ಬೇಕು ಎಂದು ವೈದ್ಯರು ತಿಳಿಸಿದ್ದಾರೆ.
Advertisement