ಮೇಕೆದಾಟು ಅಣೆಕಟ್ಟು ಯೋಜನೆ: 60 ದಿನಗಳಲ್ಲಿ ಸಮೀಕ್ಷೆ ಪೂರ್ಣ ಸಾಧ್ಯತೆ!

ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೇಕೆದಾಟು ಯೋಜನೆಗೆ ಭೂಮಿ ಹಾಗೂ ಮರಗಳ ಎಣಿಕೆ ಕುರಿತು ಆರಂಭವಾದ ಸಮೀಕ್ಷೆಯ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೇಕೆದಾಟು ಯೋಜನೆಗೆ ಭೂಮಿ ಹಾಗೂ ಮರಗಳ ಎಣಿಕೆ ಕುರಿತು ಆರಂಭವಾದ ಸಮೀಕ್ಷೆಯ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಅವರು ಮಾತನಾಡಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ, ಬಿಳಿಗಿರಿ ರಂಗನಾಥಸ್ವಾಮಿ ವನ್ಯಜೀವಿ ಅಭಯಾರಣ್ಯ, ಎಂಎಂ ಹಿಲ್ಸ್ ಅಭಯಾರಣ್ಯ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಹವಾಮಾನ ಸೂಕ್ತ ರೀತಿಯಲ್ಲಿದ್ದರೆ, 60 ದಿನಗಳಲ್ಲಿ ಸಮೀಕ್ಷೆಯನ್ನೂ ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ.

ಕರ್ನಾಟಕ-ತಮಿಳುನಾಡು ಅರಣ್ಯಗಳ ನಡುವಿನ ಗಡಿಯನ್ನು ಗುರುತಿಸಲು ಪ್ರತಿ 20 ಮೀಟರ್‌ಗೆ ಮರದ ತುಂಡುಗಳನ್ನು ಇರಿಸಲಾಗುತ್ತಿದೆ. ಮಳೆ, ಗಾಳಿ, ಪ್ರವಾಹದಿಂದ ಮರದ ತುಂಡುಗಳು ಹಾಳಾಗುವ ಸಾಧ್ಯತೆಗಳಿದ್ದು, ಈ ವೇಳೆ ಗೊಂದಲಗಳು ಸೃಷ್ಟಿಯಾಗಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಧಿಕಾರಿಗಳು ಕಾಂಕ್ರೀಟ್ ಪಿಲ್ಲರ್ ಗಳನ್ನು ನಿರ್ಮಿಸಬೇಕಿದೆ. ಆದರೆ, ಶಾಶ್ವತ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಹಾಕಲು ಅಧಿಕಾರಿಗಳು ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿಗಳ ಅನುಮತಿ ಬೇಕೆಂದು ಹೇಳುತ್ತಿದ್ದಾರೆ. ಅಲ್ಲದೆ, ಮಳೆಯಿಂದಾಗಿ ಜಲಾಶಯದ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಎದುರಾಗುವ ಪರಿಸ್ಥಿತಿ ಕೂಡ ಸಿಬ್ಬಂದಿಗಳಲ್ಲಿ ಆತಂಕವನ್ನು ಮೂಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಕೆದಾಟು ಯೋಜನೆಯಿಂದಾಗಿ ಮುಳುಗಡೆಯಾಗುವ ಪ್ರದೇಶಗಳು, ಮರಗಳ ನಷ್ಟ ಮತ್ತು ಸಸ್ಯವರ್ಗದ ಸಂಖ್ಯೆಯನ್ನು ನಿರ್ಣಯಿಸಲು ನೀರಿನ ಮಟ್ಟ ಗುರ್ತಿಗೆ ಅತ್ಯಗತ್ಯ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಉದ್ದೇಶಿದ ಯೋಜನೆಯ ಪ್ರದೇಶವು ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮದಲ್ಲಿ 3 ಕಿಮೀ ಕೆಳಭಾಗದಲ್ಲಿದೆ. ಈ ಯೋಜನೆಗೆ ಕಂದಾಯ ಮತ್ತು ಅರಣ್ಯ ಸೇರಿದಂತೆ 5,240 ಹೆಕ್ಟೇರ್ ಭೂಮಿ ಅಗತ್ಯವಿದೆ. ಈ ಭೂಮಿಯನ್ನು ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ ಕಾಯಿದೆ 2013ರ ಪ್ರಕಾರ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮತ್ತು ಬೆಂಗಳೂರು, ರಾಮನಗರ ಮತ್ತು ಇತರ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಗೆ ಅರಣ್ಯ ಸಚಿವಾಲಯದ ಪರಿಸರ ಅನುಮತಿಯ ಅಗತ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com