ಬಳ್ಳಾರಿ: ವಸತಿ ಶಾಲೆಯ 226 ವಿದ್ಯಾರ್ಥಿನಿಯರಿಗೆ ಈಗ ಹಳೆಯ ಚಿತ್ರಮಂದಿರವೇ ಪಾಠಶಾಲೆ

ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಒಂದು ಕಾಲದ ಚಿತ್ರಮಂದಿರ ಇದೀಗ ಬಾಲಕಿಯರ ಸರ್ಕಾರಿ ವಸತಿ ಶಾಲೆಯಾಗಿ ಮಾರ್ಪಟ್ಟಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೂರು ವರ್ಷಗಳ ಹಿಂದೆ 6 ರಿಂದ 10 ನೇ ತರಗತಿಯ ವಸತಿ ಶಾಲೆಯನ್ನು ಪ್ರಾರಂಭಿಸಿದೆ. ವಸತಿ ಶಾಲೆಯಲ್ಲಿ 226 ಬಾಲಕಿಯರಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕುರುಗೋಡು ಪಟ್ಟಣದ ಚಿತ್ರಮಂದಿರದಲ್ಲಿ ಸರ್ಕಾರಿ ವಸತಿ ಶಾಲೆಯ ಮಕ್ಕಳು ಕಲಿಯುತ್ತಿದ್ದು, ಅಲ್ಲಿಯೇ ಉಳಿದುಕೊಂಡಿದ್ದಾರೆ. (ಫೋಟೊ | ಎಕ್ಸ್‌ಪ್ರೆಸ್)
ಕಳೆದ ಮೂರು ವರ್ಷಗಳಿಂದ ಕುರುಗೋಡು ಪಟ್ಟಣದ ಚಿತ್ರಮಂದಿರದಲ್ಲಿ ಸರ್ಕಾರಿ ವಸತಿ ಶಾಲೆಯ ಮಕ್ಕಳು ಕಲಿಯುತ್ತಿದ್ದು, ಅಲ್ಲಿಯೇ ಉಳಿದುಕೊಂಡಿದ್ದಾರೆ. (ಫೋಟೊ | ಎಕ್ಸ್‌ಪ್ರೆಸ್)

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಒಂದು ಕಾಲದ ಚಿತ್ರಮಂದಿರ ಇದೀಗ ಬಾಲಕಿಯರ ಸರ್ಕಾರಿ ವಸತಿ ಶಾಲೆಯಾಗಿ ಮಾರ್ಪಟ್ಟಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೂರು ವರ್ಷಗಳ ಹಿಂದೆ 6 ರಿಂದ 10 ನೇ ತರಗತಿಯ ವಸತಿ ಶಾಲೆಯನ್ನು ಪ್ರಾರಂಭಿಸಿದೆ. ವಸತಿ ಶಾಲೆಯಲ್ಲಿ 226 ಬಾಲಕಿಯರಿದ್ದಾರೆ.

ಮೊದಲು ಚಿಕ್ಕ ಕಟ್ಟಡವೊಂದರಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಶಾಲಾ ಆಡಳಿತ ಸಮಿತಿ ದೊಡ್ಡ ಕಟ್ಟಡವೊಂದನ್ನು ಹುಡುಕತೊಡಗಿತು.

ಸಮಿತಿ ಸದಸ್ಯರು ಅಂತಿಮವಾಗಿ ಕಳೆದ ಐದು ವರ್ಷಗಳಿಂದ ಮುಚ್ಚಿದ್ದ ಚಿತ್ರಮಂದಿರದತ್ತ ಗಮನ ಹರಿಸಿದರು. ಬಳಿಕ ಅಲ್ಲಿಯೇ ಶಾಲೆ ಆರಂಭವಾಯಿತು. 

ಸಮಿತಿಯು ಶಾಲಾ ಕಟ್ಟಡವನ್ನು ನಿರ್ಮಿಸಲು ನಿವೇಶನವನ್ನು ಗುರುತಿಸಿದ್ದರೂ, ಸರ್ಕಾರದಿಂದ ಯಾವುದೇ ನೆರವು ಬಂದಿಲ್ಲ ಎಂದು ಶಾಲೆಯ ಕೆಲ ಶಿಕ್ಷಕರು ಆರೋಪಿಸಿದ್ದಾರೆ.

ಕುರುಗೋಡು ನಿವಾಸಿ, ಸಾಮಾಜಿಕ ಕಾರ್ಯಕರ್ತ ಬಸವರಾಜ ಎಂ ಮಾತನಾಡಿ, ಮಕ್ಕಳು ಹಳೆ ಚಿತ್ರಮಂದಿರದಲ್ಲಿ ವಾಸ ಮತ್ತು ಓದುವ ಅನಿವಾರ್ಯತೆ ಇದೆ.

ಈ ಹಿಂದೆ ಶಾಲೆಯನ್ನು ಚಿಕ್ಕ ಹಳೆಯ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದಾಗ, ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಸಮಿತಿ ಸದಸ್ಯರು ಹೊಸ ಕಟ್ಟಡಕ್ಕೆ ತೆರಳದೆ ಹಳೆಯ ಚಿತ್ರಮಂದಿರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

'ಚಿತ್ರಮಂದಿರದ ಮಾಲೀಕರಿಗೆ ಸರ್ಕಾರ ವರ್ಷಕ್ಕೆ 1.20 ಲಕ್ಷ ರೂ. ಬಾಡಿಗೆ ನೀಡುತ್ತಿದೆ. ಎರಡ್ಮೂರು ತರಗತಿಗಳು ಏಕಕಾಲಕ್ಕೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತಿದೆ. ಆಟದ ಮೈದಾನವಿಲ್ಲ, ಮುಖ್ಯರಸ್ತೆಯ ಬಳಿ ವಿದ್ಯಾರ್ಥಿಗಳು ಆಟವಾಡುತ್ತಾರೆ' ಎಂದರು.

‘ನಾವು ಹಲವು ಬಾರಿ ಜ್ಞಾಪಕ ಪತ್ರ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯನ್ನು ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಿದ್ದಾರೆ' ಎಂದು ಬಸವರಾಜ್ ತಿಳಿಸಿದರು.

ಕುರುಗೋಡು ಪಟ್ಟಣದ ಹೊರವಲಯದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ನಾಲ್ಕು ಎಕರೆ ಜಾಗ ಮಂಜೂರಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕರ್ನಾಟಕ ರೆಸಿಡೆನ್ಶಿಯಲ್ ಎಜುಕೇಶನಲ್ ಇನ್‌ಸ್ಟಿಟ್ಯೂಶನಲ್ ಸೊಸೈಟಿಯ (ಕೆಆರ್‌ಇಐಎಸ್) ಅಧಿಕಾರಿಯೊಬ್ಬರು ಶೀಘ್ರದಲ್ಲೇ ಶಾಲೆಯ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com