ಬೆಂಗಳೂರು: ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದ ನಗರದ ಹಲಸೂರು ಕೆರೆ ಬಳಿಯ ಡಿ.ಭಾಸ್ಕರನ್ ರಸ್ತೆಯಲ್ಲಿ ಗುಂಡಿ ಬಿದ್ದ ಸ್ಥಳಕ್ಕೆ ಬುಧವಾರ ಪೂಜೆ ಸಲ್ಲಿಸಿ ವಿಭಿನ್ನವಾಗಿ ಪ್ರತಿಭಟಿಸಿದ ಆಮ್ ಆದ್ಮಿ ಪಕ್ಷದವರು ರಸ್ತೆ ಕುಸಿತಕ್ಕೆ ಕಳಪೆ ಕಾಮಗಾರಿ, ಭ್ರಷ್ಟಾಚಾರ ಕಾರಣ ಎಂದು ಆರೋಪಿಸಿದರು.
ಆಮ್ ಆದ್ಮಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ವೈಟ್ ಟಾಪಿಂಗ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಕೇವಲ ಒಂದು ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ರೂ.15 ಕೋಟಿ ಖರ್ಚು ಮಾಡಲಾಗಿದೆ. ಇಷ್ಟು ಹಣ ಖರ್ಚು ಮಾಡಿದರೂ, ರಸ್ತೆ ಕೇವಲ ಒಂಬತ್ತೇ ತಿಂಗಳಲ್ಲಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಐಐಎಸ್ಸಿ ಎಂಜಿನಿಯರಿಂಗ್ ವಿಭಾಗದಿಂದ ಎಲ್ಲಾ ವೈಟ್-ಟಾಪ್ ರಸ್ತೆಗಳ ಗುಣಮಟ್ಟ ಪರಿಶೀಲನೆ ಮತ್ತು ಬೆಂಗಳೂರಿನಲ್ಲಿ ಯೋಜನೆಗೆ ಖರ್ಚು ಮಾಡಿದ ಮೊತ್ತದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ನಗರದಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ವೈಟ್ ಟಾಪಿಂಗ್ ಯೋಜನೆ ರಾಜಕಾರಣಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದೆ. ಕೇವಲ 1 ಕಿ.ಮೀ ರಸ್ತೆ ನಿರ್ಮಾಣಕ್ಕೆ 15 ಕೋಟಿ ಖರ್ಚು ಮಾಡಿದರೂ ಗುಂಡಿಗಳು ಬಿದ್ದಿವೆ ಎಂದು ಎಎಪಿ ನಗರ ಮಾಧ್ಯಮ ಸಂಯೋಜಕ ಅನಿಲ್ ನಾಚಪ್ಅವರು ಹೇಳಿದರು.
ಬಿಬಿಎಂಪಿ ಉನ್ನತ ಅಧಿಕಾರಿಗಳು ಮಾತನಾಡಿ, ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡಿರುವುದಕ್ಕೆ ಪೈಪ್ಗಳ ಸೋರಿಕೆ ಮತ್ತು ಸಡಿಲವಾದ ಮಣ್ಣು ಕಾರಣವಾಗಿದೆ. ಈ ಗುಂಡಿಗಳ ತುಂಬಲು ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದಾರೆ.
Advertisement