11 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ; ಕಾರ್ಯಕರ್ತರಿಂದ 'ಯಾಕೆ' ಪ್ರತಿಭಟನೆ ನಡೆಸುವ ಬೆದರಿಕೆ

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇನ್ನೂ 11 ಮೇಲ್ಸೇತುವೆಗಳು ಬರಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ ಒಂದು ದಿನದ ನಂತರ, ಸಂಚಾರ ತಜ್ಞರು ಮತ್ತು ಪರಿಸರ ಕಾರ್ಯಕರ್ತರು ಈ ಯೋಜನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ನಗರದಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇನ್ನೂ 11 ಮೇಲ್ಸೇತುವೆಗಳು ಬರಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ ಒಂದು ದಿನದ ನಂತರ, ಸಂಚಾರ ತಜ್ಞರು ಮತ್ತು ಪರಿಸರ ಕಾರ್ಯಕರ್ತರು ಈ ಯೋಜನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಘೋಷಣೆಗೆ ಆಕ್ರೋಶ ವ್ಯಕ್ತಪಡಿಸಿದ ‘ಸಿಟಿಜನ್ಸ್ ಫಾರ್ ಸ್ಯಾಂಕಿ’ ಸಂಘಟನೆಯ ಪ್ರೀತಿ ಸುಂದರರಾಜನ್, 'ಸ್ಯಾಂಕಿ ಮೇಲ್ಸೇತುವೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಸಮಸ್ಯೆ ಇರುವಾಗ 11 ಮೇಲ್ಸೇತುವೆಗಳಿಗೆ ಅನುಮೋದನೆ ನೀಡಿರುವ ಬಗ್ಗೆ ಸಿಎಂ ಮಾತನಾಡಿರುವುದು ಆಘಾತಕಾರಿಯಾಗಿದೆ. ನಾಗರಿಕರಾದ ನಮಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಮತ್ತು ಸರ್ಕಾರವು ನಮಗೆ ಉತ್ತಮವಾದದ್ದನ್ನು ಮಾಡಲು ಮುಂದಾದಾಗ ನಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಇರಬೇಕು. 'ಸ್ಟೀಲ್‌ಫ್ಲೈಓವರ್‌ಬೇಡ' ಯಶಸ್ವಿಯಾದ ಸಮಯವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಈಗ ನಾವು 'ಫ್ಲೈಓವರ್‌ಯಾಕೆ' ಅನ್ನು ಯಶಸ್ವಿಗೊಳಿಸುತ್ತೇವೆ ಎಂದಿದ್ದಾರೆ.

ಹೋರಾಟಗಾರ್ತಿ ಬೃಂದಾ ಅಡಿಗೆ ಮಾತನಾಡಿ, ನಗರಕ್ಕೆ ಯಾವುದು ಒಳಿತೆಂಬುದು ನಾಗರಿಕ ಸಮಾಜಕ್ಕೆ ಗೊತ್ತಿದ್ದು, ಕಿವುಡುತನ ಪ್ರದರ್ಶಿಸುತ್ತಿರುವ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.

ಇದೇ ರೀತಿಯ ಕಳವಳವನ್ನು ಪ್ರತಿಧ್ವನಿಸಿದ 'ಸಿಟಿಜನ್ ಫಾರ್ ಬೆಂಗಳೂರು' ಕಾರ್ಯಕರ್ತ ಪ್ರಭಾ ದೇವ್ ಮಾತನಾಡಿ, 'ಟ್ರಾಫಿಕ್ ದಟ್ಟಣೆಗೆ ಪರಿಹಾರವಾಗಿ ಅನಗತ್ಯ ಫ್ಲೈಓವರ್‌ಗಳು ಹೇಗೆ ಸಹಕಾರಿ ಎಂಬ ತಜ್ಞರೊಂದಿಗೆ ಸಮಾಲೋಚಿಸಲು ನಾಗರಿಕ ಗುಂಪುಗಳು ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸಿದೆ. ಸರ್ಕಾರವು ಯೋಜನಾ ಹಂತದಿಂದಲೇ ಎಲ್ಲಾ ವಾರ್ಡ್‌ಗಳು  ಮತ್ತು ವಲಯಗಳ ಸಾರ್ವಜನಿಕರನ್ನು ತೊಡಗಿಸಿಕೊಳ್ಳಬೇಕು' ಎಂದರು.

ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಶಾಹೀನ್ ಶಾಸ ಮಾತನಾಡಿ, 2005 ರಿಂದ 2011 ರವರೆಗಿನ ರಸ್ತೆ ವಿಸ್ತರಣೆ ಯೋಜನೆಗಳಿಗೆ ಅಥವಾ 2016 ರಲ್ಲಿ ಸ್ಟೀಲ್ ಮೇಲ್ಸೇತುವೆ 'ಬೇಡಾ' ಅಭಿಯಾನಕ್ಕೆ ಅಥವಾ ನಗರಾದ್ಯಂತ ಎಲಿವೇಟೆಡ್ ಕಾರಿಡಾರ್ ವಿರುದ್ಧದ ಅಭಿಯಾನ ನಡೆಸಿರುವ ವೇದಿಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಇಂತಹ ಯೋಜನೆಗಳನ್ನು ಕೈಬಿಡುವಲ್ಲಿ ಜನಾಂದೋಲನಗಳು ಯಶಸ್ವಿಯಾಗಿದ್ದವು. ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆಗಳ ಹೆಸರಿನಲ್ಲಿ ನಗರವನ್ನು ವ್ಯಾಪಕವಾಗಿ ನಾಶಪಡಿಸುವುದನ್ನು ನಗರದಾದ್ಯಂತದ ಜನರು ಒಗ್ಗೂಡಿ ವಿರೋಧಿಸಬೇಕು ಎಂದು ಒತ್ತಿ ಹೇಳಿದರು.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ (ಐಐಎಸ್‌ಸಿ) ಚಲನಶೀಲತೆ ತಜ್ಞ ಪ್ರೊ. ಆಶಿಶ್ ವರ್ಮಾ ಅವರ ಪ್ರಕಾರ, ಸಿಎಂ ಘೋಷಿಸಿದ ಮೇಲ್ಸೇತುವೆಗಳು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಶಿವಾನಂದ ಸರ್ಕಲ್ ಫ್ಲೈಓವರ್‌ನ ಇತ್ತೀಚಿನ ಉದಾಹರಣೆಯನ್ನು ತೆಗೆದುಕೊಳ್ಳಿ. ರೈಲ್ವೆ ಸೇತುವೆಯ ಬಳಿ ಅಡಚಣೆ ಉಂಟಾಗಿರುವುದರಿಂದ ಮೇಲ್ಸೇತುವೆ ನಿರ್ಮಾಣದ ಸಂಪೂರ್ಣ ಉದ್ದೇಶವು ವಿಫಲವಾಗಿದೆ. ಜೊತೆಗೆ, ಫ್ಲೈಓವರ್‌ನಲ್ಲಿ ಸಂಚಾರ ನಿಧಾನವಾಗುತ್ತಿದೆ. ಬದಲಿಗೆ ಸರ್ಕಾರ ಟ್ರಾಫಿಕ್ ಸಿಗ್ನಲ್‌ಗಳನ್ನು ಸಿಂಕ್ರೊನೈಸ್ ಮಾಡಬೇಕು. ಸಿಗ್ನಲ್ ಸಿಂಕ್ರೊನೈಸೇಶನ್ ಉಚಿತವಾಗಿರುತ್ತದೆ, ಆದರೆ ಫ್ಲೈಓವರ್ ನಿರ್ಮಿಸಲು ಭಾರಿ ವೆಚ್ಚವಾಗುತ್ತದೆ ಎಂದು ವರ್ಮಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com