ಬೆಂಗಳೂರು: ಹಿಂಬಾಲಿಸಿಕೊಂಡು ಬಂದು ಪದೇ ಪದೇ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ತಮಿಳುನಾಡು ಮೂಲದ ಯುವಕನೊಬ್ಬನನ್ನು ಜೆಪಿ ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರ್.ಮರಿಯಪ್ಪನ್ (22) ಬಂಧಿತ ಯುವಕನಾಗಿದ್ದಾನೆ. ಈತ ತಮಿಳುನಾಡಿನ ತಿರುನೆಲ್ವೇಲಿ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ.
ಇಸ್ರೋದಲ್ಲಿ ದಲ್ಲಿ ಕೆಲಸ ಮಾಡುತ್ತಿರುವ 27 ವರ್ಷದ ಯುವತಿ ಮುರುಗೇಶಪಾಳ್ಯ ನಿವಾಸಿಯಾಗಿದ್ದು, ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಯುವಕನನ್ನು ಬಂಧನಕ್ಕೊಳಪಡಿಸಿದ್ದಾರೆ.
ಮರಿಯಪ್ಪನ್ ಕೂಡ ಈ ಹಿಂದೆ ಇಸ್ರೋದಲ್ಲಿಯೇ ಕೆಲಸ ಮಾಡುತ್ತಿದ್ದ. ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನ ಅನ್ವಯ ಅಧಿಕಾರಿಗಳು ಯುವಕನನ್ನು ಕೆಲಸದಿಂದ ವಜಾಗೊಳಿಸಿದ್ದರು. ಆದರೂ, ಮರಿಯಪ್ಪನ್ ಯುವತಿಯ ಹಿಂಬಾಲಿಸುವುದನ್ನು ಬಿಟ್ಟಿಲ್ಲ. ಯುವತಿಗೆ ಪದೇ ಪದೇ ಮಸೇಜ್ ಹಾಗೂ ದೂರವಾಣಿ ಕರೆ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಗಳ ಸೃಷ್ಟಿಸಿ ಕಿರುಕುಳ ನೀಡಲು ಆರಂಭಿಸಿದ್ದ,
1 ವರ್ಷಗಳ ಕಾಲ ಕಿರುಕುಳವನ್ನು ಅನುಭವಿಸಿದ್ದ ಯುವತಿ, 2022ರ ನವೆಂಬರ್ 21ರಂದು ಮೊದಲ ಬಾರಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಮರಿಯಪ್ಪನ್ ನನ್ನು ಬಂಧನಕ್ಕೊಳಪಡಿಸಿದ್ದರು. ನಂತರ ಜಾಮೀನು ಮೇಲೆ ಯುವಕ ಹೊರಬಂದಿದ್ದಾನೆ. ಇದಾದ ಬಳಿಕವೂ ಮರಿಯಪ್ಪನ್ ಯುವತಿಗೆ ಕಿರುಕುಳ ನೀಡುವುದನ್ನು ಬಿಟ್ಟಿಲ್ಲ. ತನ್ನನ್ನು ಮದುವೆಯಾಗುವಂತೆ ಪೀಡಿಸಲು ಆರಂಭಿಸಿದ್ದಾನೆ.
ಇದರಿಂದ ಬೇಸತ್ತ ಯುವತಿ ಫೆಬ್ರವರಿ 10ರಂದು ಮತ್ತೆ ಠಾಣೆ ಮೆಟ್ಟಿಲೇರಿ ಎರಡನೇ ಬಾರಿಗೆ ದೂರು ನೀಡಿದ್ದಾಳೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಇದೀಗ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಡಿ,ಐಪಿಸಿ ಸೆಕ್ಷನ್ 509 ಮತ್ತು ಐಪಿಸಿ ಸೆಕ್ಷನ್ 341 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement