

ಬೆಂಗಳೂರು: ನಗರದ ಕೊಮ್ಮಘಟ್ಟ-ತರವೇಕೆರೆ ರಸ್ತೆಯಲ್ಲಿನ ಅಪಾಯಕಾರಿ ಎಸ್-ತಿರುವುಗಳಿಗೆ ಶಾಶ್ವತ ಪರಿಹಾರದ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಜಿ. ಕುಮಾರ್ ನಾಯಕ್ ಮಂಗಳವಾರ ನಿವಾಸಿಗಳಿಗೆ ಭರವಸೆ ನೀಡಿದರು.
ಕಳೆದ ಎರಡು ವರ್ಷಗಳಿಂದ, ಕಿರಿದಾದ ರಸ್ತೆಯ ಅಪಾಯಕಾರಿ ತಿರುವಿನ ಬಗ್ಗೆ ವಾಹನ ಸವಾರರು ಮತ್ತು ನಿವಾಸಿಗಳಿಂದ ಬಿಡಿಎಗೆ ದೂರುಗಳು ಸಲ್ಲಿಕೆಯಾಗುತ್ತಲೇ ಇವೆ.
ದ್ವಿಚಕ್ರ ವಾಹನಗಳು ಮತ್ತು ಕಾರುಗಳು ರಸ್ತೆಯ ಎರಡೂ ಬದಿಯ ಚರಂಡಿಗೆ ತಲೆಕೆಳಗಾಗಿ ಬಿದ್ದು ಗಂಭೀರ ಗಾಯಗಳಿಗೆ ಒಳಗಾಗುವ ಘಟನೆಗಳು ದಿನನಿತ್ಯದ ಸಂಗತಿಯಾಗಿದೆ.
ಟಿಎನ್ಐಇ ಜೊತೆಗೆ ಮಾತನಾಡಿದ ಮಂಜುನಾಥ್ ಸಿ., 'ಪ್ರತಿ ವಾರ ನಾವು ಗಾಯಾಳುಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಅನ್ನು ಇಲ್ಲಿಗೆ ತರುತ್ತೇವೆ. ಮಧ್ಯಭಾಗದಲ್ಲಿರುವ ಎಸ್-ಕರ್ವ್ನಲ್ಲಿ ರಸ್ತೆಯ ಅಗಲ ಕೇವಲ ನಾಲ್ಕು ಮೀಟರ್ ಆಗಿದ್ದು, ಕೇವಲ ಒಂದು ವಾಹನ ಮಾತ್ರ ಹಾದುಹೋಗಬಹುದು. ಈ ಸ್ಥಳದ ಬಗ್ಗೆ ತಿಳಿದಿರುವವರು ಬಹಳ ಜಾಗರೂಕರಾಗಿರುತ್ತಾರೆ. ಆದರೆ, ಮೊದಲ ಬಾರಿಗೆ ಈ ರಸ್ತೆಯಲ್ಲಿ ಹಾದುಹೋಗುವವರು ಖಂಡಿತವಾಗಿಯೂ ಬೀಳುತ್ತಾರೆ. ಅವರು 5 ಅಡಿ ಆಳದ ಚರಂಡಿಗೆ ಬಿದ್ದು ಗಾಯಗೊಳ್ಳುತ್ತಾರೆ. ಅವರಲ್ಲಿ ಹೆಚ್ಚಿನವರು ಮೂಳೆ ಮುರಿತದಿಂದ ಬಳಲುತ್ತಿದ್ದಾರೆ' ಎಂದು ಹೇಳಿದರು.
ಮಳೆ ಬಂದಾಗ ಮತ್ತು ನೀರಿನ ಮಟ್ಟ ಹೆಚ್ಚಾದಾಗ ರಸ್ತೆಯಲ್ಲಿ ನೀರು ಹರಿಯುತ್ತದೆ. ದಿನಕ್ಕೆ ಎರಡು ಅಥವಾ ಮೂರು ಜನರು ಬೀಳುತ್ತಾರೆ ಎಂದು ಅವರು ಹೇಳಿದರು.
ಬೈರೋಹಳ್ಳಿ ರಸ್ತೆ ಅಥವಾ ಸುಳಿಕಾರ್ ರಸ್ತೆಯ ಮೂಲಕ ಹೋಗುವುದು ಇದಕ್ಕಿರುವ ಒಂದೇ ಪರ್ಯಾಯವಾಗಿದ್ದು, ನಿವಾಸಿಗಳು ಎರಡಕ್ಕೂ 3 ಕಿಮೀ ಬಳಸಿ ಹೋಗಬೇಕಾಗಿದೆ.
ಇಲ್ಲಿನ ಮತ್ತೋರ್ವ ನಿವಾಸಿ ಹೇಮಂತ್ ಕುಮಾರ್ ಮಾತನಾಡಿ, ಮೂರು ವಿಭಿನ್ನ ಅಪಘಾತಗಳಲ್ಲಿ ಸಿಲುಕಿದ ಮೂವರನ್ನು ನಾನೊಬ್ಬನೇ ಹೊರಗೆಳೆದಿದ್ದು ನನಗೆ ನೆನಪಿದೆ. ಕೆಲವು ವಾಹನಗಳು ಕೆಟ್ಟು ಹೋಗುತ್ತವೆ ಮತ್ತು ಅವುಗಳನ್ನು ಮೇಲೆತ್ತಲು ನಾವು ಕ್ರೇನ್ಗಳನ್ನು ತರಬೇಕಾಗುತ್ತದೆ. ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಿಗೆ ಇದು ನಿರ್ಣಾಯಕ ಸಂಪರ್ಕ ರಸ್ತೆಯಾಗಿರುವುದರಿಂದ ನಾವು ಈ ರಸ್ತೆಯನ್ನು ತಪ್ಪಿಸಿ ಪ್ರಯಾಣಿಸಲು ಸಾಧ್ಯವಿಲ್ಲ' ಎಂದು ಹೇಳುತ್ತಾರೆ.
ಪಂಚಾಯಿತಿ ಸದಸ್ಯ ಎಸ್ಆರ್ ಮೋಹನ್ಕುಮಾರ್ ಮಾತನಾಡಿ, 'ಇದು ಇಲ್ಲಿನ ಎಲ್ಲ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಎರಡು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಹ ಸಲ್ಲಿಸಲಾಗಿದೆ' ಎಂದು ಅವರು ಹೇಳಿದರು.
ಬಿಡಿಎಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, 'ಈ ರಸ್ತೆಯನ್ನು ತಕ್ಷಣವೇ ಅಗಲಿಸಲು ಹಾಗೂ ಎರಡು ಸೇತುವೆಗಳನ್ನು ನಿರ್ಮಿಸಲು ಅಲ್ಪಾವಧಿ ಟೆಂಡರ್ಗಳನ್ನು ಕರೆಯಲು ಡಿಸೆಂಬರ್ 5 ಕ್ಕೆ ಆಯುಕ್ತರು ಗಡುವು ನಿಗದಿಪಡಿಸಿದ್ದಾರೆ. ಎರಡು ಅಥವಾ ಮೂರು ತಿಂಗಳಲ್ಲಿ ನಾವು ಸ್ವಲ್ಪ ಸುಧಾರಣೆಯನ್ನು ನಿರೀಕ್ಷಿಸಬಹುದು. ಬಿಡಿಎ ದೀರ್ಘಾವಧಿಯ ಪರಿಹಾರವನ್ನು ಹೊರತರಲಿದೆ ಎಂದರು.
Advertisement