ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಬೈಕ್-ಆಟೋಗಿಲ್ಲ ಪ್ರವೇಶ ಎಂದ ಸಂಸದ ಪ್ರತಾಪ್ ಸಿಂಹ, ಕಾರಣ ಏನು ಗೊತ್ತಾ?

ಮೈಸೂರು-ಬೆಂಗಳೂರು ದಶಪಥ ರಸ್ತೆಯಲ್ಲಿ  ಸಂಚರಿಸಲು ದ್ವಿಚಕ್ರ ಹಾಗೂ ತ್ರಿಚಕ್ರ  ವಾಹನಗಳಿಗೆ ಅವಕಾಶ ಇಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಶುಕ್ರವಾರ ಹೇಳಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
Updated on

ಮೈಸೂರು: ಮೈಸೂರು-ಬೆಂಗಳೂರು ದಶಪಥ ರಸ್ತೆಯಲ್ಲಿ  ಸಂಚರಿಸಲು ದ್ವಿಚಕ್ರ ಹಾಗೂ ತ್ರಿಚಕ್ರ  ವಾಹನಗಳಿಗೆ ಅವಕಾಶ ಇಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಶುಕ್ರವಾರ ಹೇಳಿದ್ದಾರೆ.

ಮೈಸೂರಿನ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೈಸೂರು-ಬೆಂಗಳೂರು ದಶಪಥ ಕಾಮಗಾರಿಯನ್ನು ವೀಕ್ಷಿಸಿ ಉತ್ತಮವಾಗಿದೆ. ಇದೇ ಫೆಬ್ರವರಿ ಅಥವಾ ಮಾಚ್೯ ಗೆ ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಉದ್ಘಾಟನೆಗೊಳಿಸಲಾಗುವುದು ಎಂದು ಹೇಳಿದರು.

ಬೈಕ್-ಆಟೋಗಿಲ್ಲ ಪ್ರವೇಶ
ಇನ್ನು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಬೈಕ್-ಆಟೋಗಳಿಗೆ ಪ್ರವೇಶ ಇಲ್ಲ ಎಂದು ಹೇಳಿರುವ ಪ್ರತಾಪ್ ಸಿಂಹ ಅವರು, 'ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಯಾಕೆಂದರೆ ಇದು ಎಕ್ಸ್ ಪ್ರೆಸ್ ಹೈವೇ ಆಗಿರುವುದರಿಂದ ಬಹಳಷ್ಟು ಮಂದಿ ಮೈಸೂರು-ಬೆಂಗಳೂರು ನಡುವೆ ವೇಗವಾಗಿ ಸಂಚರಿಸುತ್ತಿರುತ್ತಾರೆ. ಈ ಮಧ್ಯೆ ದ್ವಿಚಕ್ರವಾಹನಗಳಿಗೆ ಅವಕಾಶ ನೀಡಿದರೆ ಅವರ ವೇಗದ ಮಿತಿ ಕಡಿಮೆಯಾಗಬಹುದು. ಅಲ್ಲದೆ ದ್ವಿಚಕ್ರವಾಹನಗಳು ಲೇನ್ ನಿಯಮ ಪಾಲಿಸುವುದು ಕಡಿಮೆ.. ಇದು ಅಪಘಾತಗಳಿಗೆ ಕಾರಣವಾಗಬಹುದು.  ದ್ವಿ ಚಕ್ರ ವಾಹನಗಳು ಮತ್ತು ಇತರೆ ವಾಹನಗಳು ಸಂಚರಿಸಲು ಸರ್ವೀಸ್ ರಸ್ತೆಗಳಿರುತ್ತದೆ. ಆ ಮೂಲಕ ಸಂಚರಿಸಬಹುದು ಎಂದು ತಿಳಿಸಿದರು.

ಪ್ರತಾಪ್ ಸಿಂಹ ಹೇಳಿದ್ದೇನು?: 

ಎಕ್ಸ್ ಪ್ರೆಸ್ ಹೈವೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತದೆ.  1.30 ಗಂಟೆಯಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಬಹುದು. ಹಾಗಂತ ಈ ರಸ್ತೆ ಬರಿ ಶ್ರೀಮಂತರಿಗಾಗಿ ಎಂದು ಭಾವಿಸಬಾರದು ಎಂದರು. 

ಗೌಡರ ಹೆಸರಿಡುವುದಿಲ್ಲ..
ಎಕ್ಸ್ ಪ್ರೆಸ್ ಹೈವೆ ಹೆಸರಿಡುವ ಕುರಿತು ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ನಾಲ್ವಡಿ ಕೃಷ್ಣರಾಜ ಒಡೆಯರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡುವಂತೆ ಪ್ರಸ್ತಾಪಿಸಿದ್ದಾರೆ. ಆದರೆ ಯಾವುದೇ ಎಕ್ಸ್ ಪ್ರೆಸ್ ಹೈವೆಗೆ ವ್ಯಕ್ತಿಗಳ ಹೆಸರಿಟ್ಟ ಉದಾಹರಣೆ ಇಲ್ಲ. ಉತ್ತರ ಪ್ರದೇಶದಲ್ಲಿ ಗಂಗಾ-ಯಮುನಾ ಎಕ್ಸ್ ಪ್ರೆಸ್ ವೇ ಅಂತಿದೆ.

ಹೀಗಾಗಿ ನದಿಗಳ ಪಾವಿತ್ರ್ಯತೆ ಕುರಿತು ನೀಡಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೂ ಕಾವೇರಿ ಎಕ್ಸ್ ಪ್ರೆಸ್ ವೇ ಎಂದು ನಾಮಕರಣ ಮಾಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com